ರಫೇಲ್ ಪ್ರಶ್ನೆಗಳಿಗೆ ಉತ್ತರಿಸಿದ ರಕ್ಷಣಾ ಸಚಿವರಿಗೆ ರಾಹುಲ್ ಮರು ಪ್ರಶ್ನೆ
ನವದೆಹಲಿ, ಜನವರಿ 04: ಚಳಿಗಾಲದ ಅಧಿವೇಶನದಲ್ಲಿ ಕಳೆದೆರಡು ದಿನಗಳಿಂದ ರಫೇಲ್ನದ್ದೇ ಚರ್ಚೆ. ರಾಹುಲ್ ಗಾಂಧಿ ಕೇಳಿದ್ದ ರಫೇಲ್ ಕುರಿತಾದ ಪ್ರಶ್ನೆಗಳಿಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ನಿನ್ನೆ ಉತ್ತರ ನೀಡಿದ್ದರು, ಇಂದು ಸ್ವತಃ ರಕ್ಷಣಾ ಸಚಿವೆ ಉತ್ತರ ನೀಡಿದರು ಆದರೂ ಅದು ರಾಹುಲ್ ಗಾಂಧಿ ಅವರನ್ನು ತೃಪ್ತಿಪಡಿಸಿಲ್ಲ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ದೀರ್ಘ ಉತ್ತರಗಳ ಬಳಿಕವೂ ಸಹ ರಾಹುಲ್ ಗಾಂಧಿ ಅವರು ಮತ್ತೆ ಅನುಮಾನಗಳನ್ನು ಹೊರಹಾಕಿದ್ದು, ನಿರ್ಮಲಾ ಸೀತಾರಾಮನ್ ಅವರು ಭಾಷಣ ಮಾಡಿದರೆ ವಿನಃ ಉತ್ತರಗಳನ್ನು ನೀಡಲಿಲ್ಲ ಎಂದು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಉತ್ತರ ಬಳಿಕ ಹಲವು ಪ್ರಶ್ನೆಗಳನ್ನು ರಾಹುಲ್ ಗಾಂಧಿ ಕೇಳಿದ್ದು, ಅನಿಲ್ ಅಂಬಾನಿ ಅವರಿಗೆ ಒಪ್ಪಂದ ನೀಡಬೇಕು ಎಂಬುದನ್ನು ನಿರ್ಧರಿಸಿದ್ದು ಯಾರು? ಮತ್ತು ಏಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ವಿಮಾನದ ಬೆಲೆ ಗೋಪ್ಯತೆ ಒಪ್ಪಂದದಲ್ಲಿ ಇರಲಿಲ್ಲ ಎಂಬುದನ್ನು ಏಕೆ ಆಡಳಿತ ಪಕ್ಷ ಒಪ್ಪಿಕೊಳ್ಳುತ್ತಿಲ್ಲ, ಮತ್ತು ಬೆಲೆಯನ್ನೇಕೆ ಅವರು ಬಹಿರಂಗಗೊಳಿಸುತ್ತಿಲ್ಲ. ವಾಯುಸೇನೆಯು ಆಕ್ಷೇಪಣೆ ಎತ್ತಿದ್ದಾಗ್ಯೂ ಸಹ ಒಪ್ಪಂದವನ್ನು ಬದಲಾಯಿಸಲಿಲ್ಲವೇಕೆ ಎಂದು ಸಹ ರಾಹುಲ್ ಪ್ರಶ್ನೆ ಮಾಡಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಸಂಸತ್ನಲ್ಲಿ ಮಾಡಿದ ಭಾಷಣವನ್ನು ಟೀಕಿಸಿದ ರಾಹುಲ್, ಅವರು ಭಾಷಣ ಮಾಡಿದರು ಆದರೆ ಉತ್ತರ ನೀಡಲಿಲ್ಲ. ನಮ್ಮ ಪ್ರಶ್ನೆಗಳಿಗೆ ಉತ್ತರಿಸದೆ ಅವರು ಪಲಾಯನ ಮಾಡಿದ್ದಾರೆ ಎಂದು ರಾಹುಲ್ ಟೀಕಿಸಿದರು.












Click it and Unblock the Notifications