ರಾಹುಲ್ ಟೀಂನಲ್ಲಿ ಸಿಖ್ ಧಂಗೆ ಆರೋಪಿಗಳು
ನವದೆಹಲಿ, ನ.6 : ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯುವುದು ಖಚಿತವಾಗಿದ್ದು, ವಿವಿಧ ಪಕ್ಷಗಳು ತಯಾರಿ ಆರಂಭಿಸಿವೆ. ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೊಸ ತಂಡವೊಂದನ್ನು ರಚಿಸಿದ್ದಾರೆ. ಆದರೆ, ಈ ತಂಡದಲ್ಲಿ ಜಗದೀಶ್ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಇರುವುದು ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ರಾಹುಲ್ ಗಾಂಧಿ ನೇತೃತ್ವದ ಚುನಾವಣಾ ಸಮಿತಿಯಲ್ಲಿ 1984ರ ಸಿಖ್ ವಿರೋಧಿ ಧಂಗೆಯಲ್ಲಿ ಪಾಲ್ಗೊಂಡಿದ್ದ ಜಗದೀಶ್ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಅವರ ಹೆಸರು ಸೇರ್ಪಡೆಯಾಗಿದೆ. ಇಬ್ಬರ ಮೇಲೆಯೂ ಕ್ರಿಮಿನಲ್ ಮೊಕದ್ದಮೆಗಳಿವೆ. [ಟೈಟ್ಲರ್ ಗೆ ಮತ್ತೆ ಕಂಟಕ]

ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಅವರನ್ನು ತಂಡಕ್ಕೆ ಸೇರಿಸಿರುವ ಕುರಿತು ಕಾಂಗ್ರೆಸ್ ಪಕ್ಷದಲ್ಲಿಯೇ ಗೊಂದಲಗಳಿವೆ. ಇಂತಹ ಯಾವುದೇ ಪಟ್ಟಿಯನ್ನು ಪಕ್ಷ ಸಿದ್ಧಪಡಿಸಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ. ದೆಹಲಿಯ ವಿಧಾನಸಭೆ ಚುನಾವಣೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಇದಕ್ಕೂ ಮೊದಲೇ ಕಾಂಗ್ರೆಸ್ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. [ನಾಟಕಕ್ಕೆ ತೆರೆ; ದೆಹಲಿ ಗದ್ದುಗೆ ಯಾರ ಮಡಿಲಿಗೆ?]
ಬಿಜೆಪಿ ಪ್ರತಿಕ್ರಿಯೆ : ರಾಹುಲ್ ಗಾಂಧಿ ಅವರ ತಂಡದ ಬಗ್ಗೆ ಮಾಹಿತಿ ಹೊರಬಿದ್ದ ಬಳಿಕ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ರಾಹುಲ್ ಗಾಂಧಿ ನಿರ್ಧಾರ ಕೇಳಿ ಶಾಕ್ ಆಗಿದೆ ಎಂದು ಹೇಳಿದ್ದಾರೆ. ಇದು ಗಂಭೀರ ವಿಚಾರವಾಗಿದ್ದು, ಇಬ್ಬರು ದಂಗೆಯಲ್ಲಿ ಪಾಲ್ಗೊಂಡಿದ್ದರು ಎಂಬ ಆರೋಪವಿದೆ, ಆದರೂ ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ತಂಡದಲ್ಲಿ ಟೈಟ್ಲರ್, ಸಜ್ಜನ ಕುಮಾರ್, ಮಹಾಬಲ್ ಮಿಶ್ರಾ, ಮಾಟಿನ್ ಅಹ್ಮದ್, ಹರೂನ್ ಯೂಸಫ್, ಅರವಿಂದ್ ಸಿಂಗ್ ಲವ್ಲೀ, ಜೈ ಕಿಷನ್, ಜೆಪಿ ಅಗ್ರವಾಲ್ ಮುಂತಾದವರಿದ್ದಾರೆ. ಆದರೆ, ದೆಹಲಿಯಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ರನ್ನು ತಂಡದಿಂದ ಕೈಬಿಡಲಾಗಿದೆ.












Click it and Unblock the Notifications