ಅಹ್ಮದ್ ಸಾವಿನ ವಿಚಾರ, ಕೇರಳ ಸಂಸದರ ಪ್ರತಿಭಟನೆಗೆ ರಾಹುಲ್ ಸಾಥ್
ನವದೆಹಲಿ, ಫೆಬ್ರವರಿ 6: ಮಾಜಿ ಕೇಂದ್ರಸಚಿವ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ ನಾಯಕ ಇ.ಅಹ್ಮದ್ ಸಾವಿನ ವಿಚಾರವಾಗಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದರು. ಸಂಸತ್ ಭವನದ ಹೊರಗೆ ಕೇರಳದ ಸಂಸದರ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ರಾಹುಲ್ ಕೂಡ ಭಾಗಿಯಾದರು.
ಕೇರಳದ ಸಂಸದರು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಫೆಬ್ರವರಿ 4ರಂದು ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದು, ಇ.ಅಹ್ಮದ್ ಸಾವಿನ ಬಗ್ಗೆ ತನಿಖೆಗಾಗಿ ಮನವಿ ಮಾಡಿದ್ದರು. ಅಹ್ಮದ್ ಅವರ ಹೃದಯಾಘಾತದ ಸನ್ನಿವೇಶದಲ್ಲಿ ಇನ್ನೂ ಹೆಚ್ಚು 'ಮಾನವೀಯ'ವಾಗಿ ವರ್ತಿಸಬಹುದಿತ್ತು ಎಂದಿದ್ದರು.[ಅಹ್ಮದ್ ಸಾವು ಪ್ರಕಟಣೆ ತಡವಾಗಿದ್ದು ಅಮಾನವೀಯ : ಖರ್ಗೆ]
ಇ.ಅಹ್ಮದ್ ಅವರಿಗೆ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಸಿಕ್ಕ ಚಿಕಿತ್ಸೆ ಹಾಗೂ ಅಹ್ಮದ್ ಕುಟುಂಬದವರ ಜತೆಗೆ ಆಸ್ಪತ್ರೆಯವರು ನಡೆದುಕೊಂಡ ಬಗ್ಗೆ ವಿಜಯನ್ ಆಕ್ಷೇಪ ವ್ಯಕ್ತಪಡಿಸಿದ್ದರು. "ಒಟ್ಟಾರೆ ಘಟನೆ ಬಗ್ಗೆ ತನಿಖೆಯಾಗಬೇಕು. ಇನ್ನು ಮುಂದೆ ಇಂಥ ಘಟನೆ ಮರುಕಳಿಸಬಾರದು" ಎಂದು ವಿಜಯನ್ ಹೇಳಿದ್ದಾರೆ.[ಸಂಸತ್ ಕಲಾಪದ ವೇಳೆ ಕುಸಿದು ಬಿದ್ದಿದ್ದ ಮಾಜಿ ಕೇಂದ್ರ ಸಚಿವ ಇ. ಅಹ್ಮದ್ ನಿಧನ]
ಈ ಮಧ್ಯೆ ಅಹ್ಮದ್ ಅವರ ಸಾವಿನ ನಂತರ, ದೆಹಲಿಯಲ್ಲಿರುವ ಮೃತರ ಮನೆಗೆ ತೆರಳಿಗೆ ಪ್ರಧಾನಿ ಮೋದಿ ಸಾಂತ್ವನ ಹೇಳಿದ ರೀತಿಗೆ ವಿಜಯನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇ.ಅಹ್ಮದ್ ಅವರಿಗೆ ಸಂಸತ್ ನಲ್ಲಿ ಹೃದಯ ಸ್ಥಂಭನವಾಗಿ, ಫೆಬ್ರವರಿ 1ರಂದು ಮೃತಪಟ್ಟಿದ್ದರು.