ಬಿಜೆಪಿ ಜತೆಗೆ ಸೇರಿದ ಭಿನ್ನಮತೀಯರ ಷಡ್ಯಂತ್ರ: ಪಕ್ಷದ ನಾಯಕರ ವಿರುದ್ಧವೇ ರಾಹುಲ್ ಗಾಂಧಿ ಆರೋಪ
ನವದೆಹಲಿ, ಆಗಸ್ಟ್ 24: ಮಹತ್ವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ, ಪಕ್ಷದ ನಾಯಕತ್ವ ಬದಲಾವಣೆಗೆ ಬೇಡಿಕೆ ಇರಿಸಿರುವ ಸಮಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಜತೆಗೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರಕ್ಕೆ ಸಹಿ ಹಾಕಿರುವವರು ಬಿಜೆಪಿ ಜತೆಗೆ ಸೇರಿ ಷಡ್ಯಂತ ರೂಪಿಸಿದ್ದಾರೆ ಎಂದು ಆರೋಪಿಸಿದರು.
ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ದಾಖಲಾಗಿರುವ ಸಮಯದಲ್ಲಿಯೇ ಪಕ್ಷದ ನಾಯಕತ್ವದ ಬದಲಾವಣೆ ಕುರಿತಾದ ಪತ್ರವನ್ನು ಏಕೆ ರವಾನಿಸಲಾಯಿತು? ಎಂದು ಸಿಡಬ್ಲ್ಯೂಸಿ ಸಭೆಯಲ್ಲಿ ರಾಹುಲ್ ಗಾಂಧಿ ಪ್ರಶ್ನಿಸಿದರು. ಪಕ್ಷದ ನಾಯಕತ್ವದಲ್ಲಿ ಬದಲಾವಣೆ ಬಯಸಿದವರು ಭಿನ್ನಮತೀಯರು ಎಂದೂ ರಾಹುಲ್ ಆರೋಪಿಸಿದರು. ಯಾರಿಗಾಗಿ ಇದನ್ನು ಮಾಡಲಾಗಿದೆ? ಈ ಪತ್ರ ತಮ್ಮ ತಾಯಿಗೆ ನೋವುಂಟು ಮಾಡಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷ ಎರಡು ವಿಭಜನೆಯಾಗಿದ್ದು, ಒಂದು ವರ್ಗವು ಎಲ್ಲರನ್ನೂ ಒಳಗೊಳ್ಳುವ ಪ್ರಬಲ ಮತ್ತು ಗಾಂಧಿಯೇತರ ಕುಟುಂಬದ ವ್ಯಕ್ತಿಯನ್ನು ನಾಯಕರನ್ನಾಗಿ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದರೆ, ಇನ್ನೊಂದು ವರ್ಗ ಗಾಂಧಿ ಕುಟುಂಬದ ಮೇಲಿನ ನಂಬಿಕೆಯನ್ನು ಮುಂದುವರಿಸಿವೆ.

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸುಮಾರು 20 ಮುಖಂಡರು ಪತ್ರ ಬರೆದಿದ್ದರು. ಪೂರ್ಣಾವಧಿಯ, ಉತ್ತಮ ದೃಷ್ಟಿಕೋನದ ಅಧ್ಯಕ್ಷರ ಅಗತ್ಯವಿದೆ. ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸುವುದು ಮತ್ತು ಸಂಸದೀಯ ಮಂಡಳಿಯ ಪುನರ್ ರಚನೆ ಸೇರಿದಂತೆ ಪಕ್ಷದ ಸಂರಚನೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಆಗ್ರಹಿಸಿದ್ದರು.
ಬಿಜೆಪಿಯವರೊಂದಿಗೆ ಸೇರಿ ಸಂಚು ರೂಪಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರಿಂದ ಅಸಮಾಧಾನಗೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಸಾಬೀತುಪಡಿಸಿದರೆ ತಾವು ರಾಜೀನಾಮೆ ನೀಡುವುದಾಗಿ ಸಭೆಯಲ್ಲಿ ಸವಾಲು ಹಾಕಿದರು.












Click it and Unblock the Notifications