ಪೆಗಾಸಸ್ ತನಿಖೆಗೆ ಸುಪ್ರೀಂ ಸಮಿತಿ ರಚನೆ: 'ರಾಷ್ಟ್ರಕ್ಕಿಂತ ಪ್ರಧಾನಿ ಮೇಲಲ್ಲ' ಎಂದ ರಾಹುಲ್
ನವದೆಹಲಿ, ಅಕ್ಟೋಬರ್ 27: ಪೆಗಾಸಸ್ ಬೇಹುಗಾರಿಕೆ ಪ್ರಕರಣ ತನಿಖೆಗಾಗಿ ಸುಪ್ರೀಂಕೋರ್ಟ್ ಬುಧವಾರ ತಜ್ಞರ ಸಮಿತಿಯನ್ನು ರಚನೆ ಮಾಡಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ನೇತೃತ್ವದ ಸಮಿತಿಯನ್ನು ರಚಿಸಿ ತೀರ್ಪು ಪ್ರಕಟಿಸಿದೆ. ಈ ಆದೇಶವನ್ನು ಸ್ವಾಗತಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯ ಕಾಲೆಳೆದಿದ್ದಾರೆ.
"ಪೆಗಾಸಸ್ ಬೇಹುಗಾರಿಕೆ ಬಗ್ಗೆ ತನಿಖೆಗೆ ಆದೇಶಿಸುವ ಮೂಲಕ ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇದು ಪೆಗಾಸಸ್ ಬಹುಗಾರಿಕೆ ವಿಚಾರದಲ್ಲಿ ವಿರೋಧ ಪಕ್ಷಗಳ ನಿಲುವು ಸಮರ್ಥವಾಗಿದೆ ಎಂಬುವುದು ಸ್ಪಷ್ಟವಾಗಿದೆ," ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.
ಪೆಗಾಸಸ್ ಬೇಹುಗಾರಿಕೆ ಕುರಿತು ತನಿಖೆಗೆ ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್
"ನಾವು ಪ್ರತಿಭಟನೆ ಮಾಡಿದೆವು. ಆದರೆ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ನಾವು ಸಂಸತ್ತಲ್ಲಿ ಈ ಬಗ್ಗೆ ಮಾತನಾಡಿದೆವು ಆದರೂ ಯಾವುದೇ ಉತ್ತರ ಲಭಿಸಲಿಲ್ಲ. ಈಗ ನಮ್ಮ ಈ ನಿಲುವು ಸಮರ್ಥವಾಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಈ ಪೆಗಾಸಸ್ ಬೇಹುಗಾರಿಕೆಯ ಬಗ್ಗೆ ನಮ್ಮ ಪ್ರಶ್ನೆಯು ಅದೇ ಆಗಿರುತ್ತದೆ," ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠವು ಪ್ರಕರಣದ ಮೂರು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದೆ. ಇಸ್ರೇಲ್ ಮೂಲದ ಪೆಗಾಸಸ್ ತಂತ್ರಾಂಶ ಬಳಸಿಕೊಂಡು ಬೇಹುಗಾರಿಕೆ ನಡೆಸಿರುವ ಪ್ರಕರಣ ಸಂಬಂಧ ತ್ವರಿತವಾಗಿ ತನಿಖೆ ನಡೆಸುವುದಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ನೇತೃತ್ವದ ಸಮಿತಿಯನ್ನು ರಚಿಸಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ.
ಪೆಗಾಸಸ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ತನಿಖೆ ನಡೆಸಿ 8 ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆರ್ವಿ ರವೀಂದ್ರನ್ ನೇತೃತ್ವದ ತಜ್ಞರ ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಇನ್ನು ತೀರ್ಪಿನ ಸಂದರ್ಭದಲ್ಲಿ, "ವ್ಯಕ್ತಿಗಳ ಮೇಲೆ ವಿವೇಚನಾರಹಿತ ಬೇಹುಗಾರಿಕೆ ನಡೆಸುವುದಕ್ಕೆ ಅನುಮತಿಸಲಾಗುವುದಿಲ್ಲ. ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ಮಾತ್ರ ಈ ಗೌಪ್ಯತೆ ಎಂಬುವುದು ಅಲ್ಲ, ಹೊರತಾಗಿ ಎಲ್ಲರಿಗೂ ಈ ಗೌಪ್ಯತೆ ಮುಖ್ಯ," ಎಂದು ಹೇಳಿದೆ.
ಪೆಗಾಸಸ್ ಹಗರಣ: ಆರಂಭದಿಂದ ಈವರೆಗೆ ಏನೇನಾಗಿದೆ? ಟೈಮ್ಲೈನ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಹೌಹಾರಿದ ರಾಹುಲ್
ಈ ಬಗ್ಗೆ ಪ್ರಸ್ತಾಪ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾವು ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದೇವೆ. ಈಗಲೂ ಅದನ್ನು ಕೇಳುತ್ತೇವೆ. ಪೆಗಾಸಸ್ ಅನ್ನು ಯಾರು ಅಧಿಕೃತಗೊಳಿಸಿದ್ದಾರೆ ಹಾಗೂ ಯಾರು ಖರೀದಿ ಮಾಡಿದ್ದಾರೆ?, ಪೆಗಾಸಸ್ ಬೇಹುಗಾರಿಕೆಗೆ ಯಾರೆಲ್ಲಾ ಬಲಿಯಾಗಿದ್ದಾರೆ?, ಬೇರೆ ಯಾವುದೇ ರಾಷ್ಟ್ರದ ಬಳಿ ನಮ್ಮ ದೇಶದ ಜನರ ಡೇಟಾ ಇದೆಯೇ?, ಯಾವೆಲ್ಲಾ ಮಾಹಿತಿಯನ್ನು ವಿದೇಶಿಗರು ಹೊಂದಿದ್ದಾರೆ?," ಎಂದು ಮರು ಪ್ರಶ್ನೆ ಮಾಡಿದ್ದಾರೆ.
"ಪೆಗಾಸಸ್ ಅನ್ನು ಸರ್ಕಾರ ಮಾತ್ರ ಖರೀದಿ ಮಾಡಲು ಸಾಧ್ಯ. ಪ್ರಧಾನ ಮಂತ್ರಿ ಅಥವಾ ಗೃಹ ಸಚಿವರು ಪೆಗಾಸಸ್ ಬೇಹುಗಾರಿಕೆಗೆ ಒಪ್ಪಿಗೆ ನೀಡಿರಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೇರೆ ದೇಶದೊಂದಿಗೆ ಸೇರಿ ಕುತಂತ್ರ ನಡೆಸಿ ಮುಖ್ಯ ನ್ಯಾಯಾಧೀಶರು, ಮಾಜಿ ಪ್ರಧಾನಿಗಳು, ಮುಖ್ಯಮಂತ್ರಿಗಳು, ವಿಪಕ್ಷ ನಾಯಕರು ಸೇರಿದ್ದಂತೆ ಹಲವು ಜನರ ಮೇಲೆ ದಾಳಿ ನಡೆಸಿದ್ದರೆ, ಅದು ನಮ್ಮ ದೇಶದ ಮೇಲೆ ಪ್ರಧಾನಿ ನಡೆಸಿದ ದಾಳಿಯಂತೆ," ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
"ಬೇರೆ ದೇಶಗಳ ಬಳಿ ನಮ್ಮ ಡೇಟಾಗಳು ಇದೆಯೇ?, ಅದು ಬಹಳ ಮುಖ್ಯವಾದ ಪ್ರಶ್ನೆ ಆಗಿದೆ. ಈ ಡೇಟಾಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಟೇಬಲ್ ಮೇಲೆ ಇದ್ದರೆ, ಅದು ಕೂಡಾ ಅಪರಾಧವಾಗಿದೆ. ನಾವು ಅದರ ವಿರುದ್ಧ ಮಾತನಾಡುತ್ತೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ದೇಶಕ್ಕಿಂತ ದೊಡ್ಡವರಲ್ಲ," ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)