ರಫೇಲ್ ಡೀಲ್ ತನಿಖೆಗೆ ಸುಪ್ರೀಂ ನಕಾರ: ಕೇಂದ್ರ ಸರ್ಕಾರ ನಿರಾಳ
ನವದೆಹಲಿ, ಡಿಸೆಂಬರ್ 14: ಕೇಂದ್ರ ಎನ್ ಡಿಎ ಸರ್ಕಾರದ ಮೇಲೆ ತೂಗುಕತ್ತಿಯಂತಿರುವ ರಫೇಲ್ ಡೀಲ್ ಕುರಿತಾದ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಪ್ರಕಟಿಸಲಿದೆ.
ರಫೇಲ್ ಡೀಲ್ ಕುರಿತಂತೆ ಸುಪ್ರೀಂ ಅಂಗಳದಲ್ಲಿ ಸಾಕಷ್ಟು ಅರ್ಜಿಗಳಿದ್ದವು. ಕಳೆದ ತಿಂಗಳು ಅವುಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ತೀರ್ಪನ್ನು ಡಿ.14 ಕ್ಕೆ ಕಾಯ್ದಿರಿಸಿತ್ತು.
ಫ್ರಾನ್ಸ್ ನಿಂದ ರಫೇಲ್ ಯುದ್ಧ ವಿಮಾನ ಖರೀದಿಗಾಗಿ ಭಾರತ ಮಾಡಿಕೊಂಡಿದ್ದ ಒಪ್ಪಂದದಲ್ಲಿ ಸಾಕಷ್ಟು ಅವ್ಯವಹಾರವಾಗಿದೆ ಎಂದು ದೂರಲಾಗಿತ್ತು.

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಯುದ್ಧ ವಿಮಾನಗಳ ಬೆಲೆ ಮತ್ತು ತಾಂತ್ರಿಕ ವಿವರಗಳನ್ನೊಳಗೊಂಡ ಸೀಲ್ ಮಾಡಲಾದ ಲಕೋಟೆಯನ್ನು ನೀಡುವಂತೆ ಸುಪ್ರೀಂ ಕೋರ್ಟಿಗೆ ಕೇಂದ್ರ ಸರ್ಕಾರ ನೀಡಿತ್ತು.
ರಫೇಲ್ ಡೀಲ್ ತೀರ್ಪಿಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.
ರಫೇಲ್ ಡೀಲ್ ಗೆ ಸಂಬಂಧಿಸಿದ ವಿಷಯ ಸ್ಪಟಿಕದಷ್ಟೇ ಪಾರದರ್ಶಕವಾಗಿತ್ತು. ಆದರೆ ತನ್ನ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸುಖಾಸುಮ್ಮನೆ ಆಧಾರರಹಿತ ಆರೋಪ ಮಾಡಿತ್ತು. ಇದೀಗ ಸುಪ್ರೀಂ ಕೋರ್ಟ್ ತನಿಖೆಗೆ ನಿರಾಕರಿಸಿದ್ದು ಸ್ವಾಗತಾರ್ಹ: ರಾಜನಾಥ್ ಸಿಂಗ್, ಗೃಹಸಚಿವ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
126 ಏರ್ ಕ್ರಾಫ್ಟ್ ಗಳನ್ನು ಖರೀದಿಸುವ ಬಗ್ಗೆ ಸರ್ಕಾರವನ್ನು ನಾವು ಒತ್ತಾಯಿಸುವುದಕ್ಕೆ ಆಗುವುದಿಲ್ಲ. ಈ ಪ್ರಕರಣದ ಪ್ರತಿ ಅಂಶವನ್ನೂ ನಾವು ಪರೀಕ್ಷಿಸುವುದಕ್ಕೆ ಆಗುವುದಿಲ್ಲ. ಇದು ಕೋರ್ಟಿನ ಕೆಲಸವಲ್ಲ- ರಂಜನ್ ಗೊಗೊಯ್, ಮುಖ್ಯನ್ಯಾಯಮೂರ್ತಿ
ಈ ಪ್ರಕ್ರಿಯೆಯಲ್ಲಿ ಯಾವುದೇ ವಾಣಿಜ್ಯ ಹಿತಾಸಕ್ತಿ ಇದ್ದಂತೆ ಕಾಣಿಸುತ್ತಿಲ್ಲ- ಸುಪ್ರೀಂ ಕೋರ್ಟ್
ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಬಗ್ಗೆ ಕೋರ್ಟಿನಲ್ಲಿ ವಿಚಾರಣೆ ನಡೆಸುವುದು ಸರಿಯಲ್ಲ- ಸುಪ್ರೀಂ ಕೋರ್ಟ್
ಆಫ್ಸೆಟ್ ಪಾಲುದಾರರ ಆಯ್ಕೆ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಅಗತ್ಯವಿಲ್ಲ- ಸುಪ್ರೀಂ ಕೋರ್ಟ್
ರಫೇಲ್ ಪ್ರಕ್ರಿಯೆಯಲ್ಲಿ ಪಕ್ಷಪಾತ ನಡೆದಿದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ- ಸುಪ್ರೀಂ ಕೋರ್ಟ್
ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಸಿಬಿಐ ತನಿಖೆಯಾಗಬೇಕು ಎಂದು ಬಿಜೆಪಿಯ ಮಾಜಿ ಮುಖಂಡರಾದ ಯಶವಂತ್ ಸಿನ್ಹಾ ಮತ್ತು ಅರುಣ್ ಶೌರಿ, ಜೊತೆಗೆ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.
ಎಎಪಿ ಮುಖಂಡ ಸಂಜಯ್ ಸಿಂಗ್ ಎಂಬುವವರು ಸಹ ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ವಕೀಲ ಎಂ ಎಲ್ ಶರ್ಮಾ ಎಂಬುವವರು ರಫೇಲ್ ಡೀಲ್ ಕುರಿತಂತೆ ಮೊದಲಿಗೆ ಅರ್ಜಿ ಹಾಕಿದ್ದವರು. ನಂತರ ವಿನೀತ್ ಧಂಡಾ ಎಂಬುವವರೂ ಅರ್ಜಿ ಸಲ್ಲಿಸಿದ್ದರು.
58,000 ಕೋಟಿ ರೂಪಾಯಿಯ ಈ ಒಪ್ಪಂದದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
2016ರ ಜನವರಿಯಲ್ಲಿ ಭಾರತವು 36 ರಫೇಲ್ ಖರೀದಿಗೆ ಫ್ರಾನ್ಸ್ ಜತೆ ಒಪ್ಪಂದ ಮಾಡಿಕೊಂಡಿತ್ತು.
ರಫೇಲ್ ಯುದ್ಧ ವಿಮಾನಗಳ ಬಿಡಿಭಾಗಗಳ ತಯಾರಿಕೆಯ ಹೊಣೆಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಗೆ ವಹಿಸಿರುವುದೂ ವಿವಾದ ಸೃಷ್ಟಿಸಿತ್ತು. ಅನುಭವಿ ಸಂಸ್ಥೆಯಾದ ಎಚ್ ಎಎಲ್ ಬದಲು ಸ್ವಾರ್ಥಕ್ಕಾಗಿ ಬಿಜೆಪಿ ಸರ್ಕಾರ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗೆ ಈ ಒಪ್ಪಂದದ ಪಾಲುದಾರಿಕೆ ನೀಡಿದೆ ಎಂದು ಕಾಂಗ್ರೆಸ್ ದೂರಿತ್ತು.












Click it and Unblock the Notifications