ರಫೇಲ್ ಪ್ರಕರಣ : ತೀರ್ಪು ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಸಿದ್ಧ
ನವದೆಹಲಿ, ಫೆಬ್ರವರಿ 21 : ಮಹತ್ವದ ಬೆಳವಣಿಗೆಯೊಂದರಲ್ಲಿ ರಫೇಲ್ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಮರುಪರಾಮರ್ಶೆಯ ಅರ್ಜಿಯನ್ನು ಪರಿಗಣಿಸಲು ಸರ್ವೋಚ್ಚ ನ್ಯಾಯಾಲಯ ಗುರುವಾರ ತೀರ್ಮಾನಿಸಿದೆ. ಆದರೆ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಮರುಪರಿಶೀಲನಾ ಅರ್ಜಿಗಳನ್ನು ಆಲಿಸಲಿವೆ. ಈಗಾಗಲೆ ರಫೇಲ್ ತೀರ್ಪನ್ನು ಪ್ರಶ್ನಿಸಿ ನಾಲ್ಕು ಮರುಪರಿಶೀಲನಾ ಅರ್ಜಿಗಳನ್ನು ಹೂಡಲಾಗಿದದ್ದು, ಮತ್ತೊಂದು ಅಕೌಂಟ್ ರಿಜಿಸ್ಟ್ರಿ ಮುಂದಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರು, ಫ್ರಾನ್ಸ್ ನಿಂದ 36 ರಫೇಲ್ ಯುದ್ಧ ವಿಮಾನಗಳನ್ನು ಕೊಳ್ಳುವಾಗ ಕೇಂದ್ರ ಸರಕಾರದ ನಿರ್ಧಾರದಲ್ಲಿ ಯಾವುದೇ ಖಚಿತತೆ ಇರಲಿಲ್ಲ ಎಂದು ಆರೋಪಿಸಿ ಹೂಡಲಾಗಿದ್ದ ಸಾರ್ವಜನಿಕ ಹಿತರಕ್ಷಣಾ ಅರ್ಜಿ ಸೇರಿದಂತೆ ಎಲ್ಲ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ಡಿಸೆಂಬರ್ 14ರಂದು ವಜಾ ಮಾಡಿತ್ತು.

ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ತ್ವರಿತವಾಗಿ ವಾದ ಆಲಿಸಬೇಕು ಎಂದು ಪ್ರಶಾಂತ್ ಭೂಷಣ್ ಮಾಡಿರುವ ಮನವಿಗೆ, ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ಎಲ್ಎನ್ ರಾವ್, ನ್ಯಾ. ಸಂಜೀವ್ ಖನ್ನಾ ಅವರಿದ್ದ ವಿಭಾಗೀಯ ಪೀಠ, ವಾದ ಆಲಿಸಬೇಕಾದ ಪೀಠದ ನ್ಯಾಯಮೂರ್ತಿಗಳನ್ನು ಬದಲಿಸಬೇಕಾಗಿದೆ. ಅದು ಅಷ್ಟು ಸುಲಭವಲ್ಲ. ಏನಾದರೂ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇಂಥದೇ ದಿನಾಂಕ ನಿಗದಿಪಡಿಸುವುದು ಕೂಡ ಕಷ್ಟ ಎಂದಿದ್ದಾರೆ.
ತೀರ್ಪು ಮರುಪರಿಶೀಲನೆಯ ಜೊತೆಗೆ, ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರಕಾರದ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯೂ ಆಲಿಕೆಗೆ ಕಾದಿದೆ. ತೀರ್ಪಿನಲ್ಲಿ, ರಫೇಲ್ ಡೀಲ್ ಗೆ ಸಂಬಂಧಿಸಿದಂತೆ, ಕಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ) ವರದಿ ಮತ್ತು ಪಾರ್ಲಿಮೆಂಟ್ ಪಬ್ಲಿಕ್ ಅಫೇರ್ಸ್ ಕಮಿಟಿ (ಪಿಎಸಿ)ಗೆ ವರದಿ ಸಲ್ಲಿಸಲಾಗಿದೆ ಎಂದು ತಪ್ಪಾಗಿ ನಮೂದಿಸಲಾಗಿದೆ ಎಂದು ಪ್ರಸ್ತಾಪಿಸಿದ್ದನ್ನು ಪ್ರಶ್ನಿಸಲಾಗಿದೆ.












Click it and Unblock the Notifications