370 ನೇ ವಿಧಿ ರದ್ದು: ಕೇಂದ್ರ ಸರ್ಕಾರಕ್ಕೆ ಪ್ರಿಯಾಂಕಾ ಗಾಂಧಿ ಛಾಟಿ
ಶ್ರೀನಗರ, ಆಗಸ್ಟ್ 13: "ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನಕ್ಕೆ ಅವಮಾನ ಮಾಡಿದೆ" ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೇಂದ್ರದ ವಿರುದ್ಧ ಮತ್ತೆ ಛಾಟಿ ಬೀಸಿದ್ದಾರೆ.
"ಇದೊಂದು ಪ್ರಜಾಪ್ರಭುತ್ವ ವಿರೋಧಿ ನಡೆ. ಇಂಥ ನಿರ್ಧಾರ ತೆಗೆದುಕೊಳ್ಳಲು ಒಂದಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಸರ್ಕಾರ ಆ ಯಾವ ನಿಯಮವನ್ನೂ ಪಾಲಿಸಿಲ್ಲ. ಇದು ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ" ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ದೂರಿದ್ದಾರೆ.
ಕಾಶ್ಮೀರ ರಾಜ್ಯಪಾಲರ ಸವಾಲು ಸ್ವೀಕರಿಸಿದ ರಾಹುಲ್ ಗಾಂಧಿ
ಆಗಸ್ಟ್ 6 ರಂದು ಕೇಂದ್ರ ಸರ್ಕಾರ ಸಂವಿಧಾನದ 370 ನೇ ವಿಧಿಯನ್ನು ರದ್ದು ಮಾಡಿತ್ತು. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು. ಈ ಬೆಳವಣಿಗೆಯ ಕುರಿತು ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿರದ ಪ್ರಿಯಾಂಕಾ ಇದೀಗ ಮೌನ ಮುರಿದಿದ್ದಾರೆ.
ಈ ಕುರಿತು ರಾಹುಲ್ ಗಾಂಧಿ ಅವರೂ ಪ್ರತಿಕ್ರಿಯೆ ನೀಡಿ, "ಜಮ್ಮು ಕಾಶ್ಮೀರವನ್ನು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಹರಿದುಹಾಕುವುದರಿಂದ, ಚುನಾಯಿತ ಪ್ರತಿನಿಧಿಗಳನ್ನು ಜೈಲಿಗೆ ತಳ್ಳಿ ಸಂವಿಧಾನವನ್ನು ಉಲ್ಲಂಘಿಸುವುದರಿಂದ ನಮ್ಮ ರಾಷ್ಟ್ರದ ಸಮಗ್ರತೆ ಹೆಚ್ಚುವುದಿಲ್ಲ. ನಮ್ಮ ದೇಶ ನಿರ್ಮಾಣವಾಗಿರುವುದು ಜನರಿಂದ, ತುಂಡು ಭೂಮಿಯಿಂದಲ್ಲ. ಶಾಸಕಾಂಗ ಅಧಿಕಾರವನ್ನು ಹೀಗೆ ದುರುಪಯೋಗ ಪಡಿಸಿಕೊಳ್ಳುವುದು ನಮ್ಮ ದೇಶದ ಭದ್ರತೆಯ ದೃಷ್ಟಿಯಿಂದ ಬಹುದೊಡ್ಡ ಅಪಾಯವೆನ್ನಿಸಲಿದೆ" ಎಂದಿದ್ದರು.
ಕಾಶ್ಮೀರ ಎಂದಿಗೂ ನಿಮ್ಮದಾಗಿರಲಿಲ್ಲ: ಪಾಕ್ ಗೆ ಮುಸ್ಲಿಂ ವಿದ್ವಾಂಸನಿಂದ ತಪರಾಕಿ
"ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ನಿಂತಿಲ್ಲ" ಎಂಬ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲೀಕ್, "ವಿಶೇಷ ವಿಮಾನ ಕಳಿಸುತ್ತೇವೆ. ಒಮ್ಮೆ ಬಂದು ಇಲ್ಲಿನ ಸ್ಥಿತಿ ನೋಡಿಕೊಂಡು ಹೋಗಿ, ಆಮೇಲೆ ಮಾತನಾಡಿ" ಎಂದು ಸವಾಲೆಸೆದಿದ್ದರು.
ಈ ಸವಾಲನ್ನು ಸ್ವೀಕರಿಸಿದ್ದ ರಾಹುಲ್ ಗಾಂಧಿ, "ವಿಶೇಷ ವಿಮಾನವೇನೂ ಬೇಡ. ಆದರೆ ಅಲ್ಲಿಗೆ ಬಂದು ಜನರೊಂದಿಗೆ ಸ್ವತಂತ್ರವಾಗಿ ಮಾತನಾಡಲು ಅವಕಾಶ ಕೊಡಿ. ನಾವು ಬರುತ್ತೇವೆ" ಎಂದಿದ್ದರು.