ಪ್ರಿಯಾಂಕಾ ಪತಿ ವಾದ್ರಾ ಒಬ್ಬ ಕಳ್ಳ: ಉಮಾಭಾರತಿ
ನವದೆಹಲಿ, ಏ.25: ಮೂರು ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಪತಿಯನ್ನು ವಿನಾಕಾರಣ ದೂಷಿಸಬೇಡಿ. ವಿರೋಧ ಪಕ್ಷಗಳು ಹೇಳುವಂತೆ ಅವರು ಭ್ರಷ್ಟಾಚಾರಿ ಅಲ್ಲ ಎಂದು ಅಲವತ್ತುಕೊಂಡಿದ್ದರ ಬೆನ್ನಿಗೆ ರಾಬರ್ಟ್ ವಾದ್ರಾ ಒಬ್ಬ ಕಳ್ಳ ಎಂದು ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಬಣ್ಣಿಸಿದ್ದಾರೆ.
AICC ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರನ್ನು ಕಳ್ಳ ಎಂದು ಗಂಭೀರ ಆರೋಪ ಮಾಡಿರುವ ಬಿಜೆಪಿ ನಾಯಕಿ ಉಮಾ ಭಾರತಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅವರನ್ನು ಜೈಲಿಗೆ ಹಾಕದೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ರಾಬರ್ಟ್ ವಾದ್ರಾ ಅವರೇನು ಪ್ರಮುಖ ನಾಯಕರಲ್ಲ. ನಾವು ಅವರು ಮಾಡಿರುವ ವಂಚನೆಯ ಬಗ್ಗೆ ಮಾತನಾಡುತ್ತಿದ್ದೇವೆ. ವಾದ್ರಾ ಸೋನಿಯಾ ಗಾಂಧಿ ಅಳಿಯ ಆಗಲಿ, ಇಲ್ಲವೆ ಬೇರೇ ಏನೇ ಆಗಿರಲಿ. ಅವರು ಸೋನಿಯಾ ಪುತ್ರಿಯನ್ನು ವಿವಾಹವಾದ ತಕ್ಷಣ ಅವರಿಗೆ ವಿಶೇಷವಾದ ಗೌರವ ನೀಡಬೇಕಾದ ಅಗತ್ಯವಿಲ್ಲ. ಎಲ್ಲರಂತೆ ಅವರೊಬ್ಬ ಸಾಮಾನ್ಯ ಪ್ರಜೆ ಅಷ್ಟೆ ಎಂದು ಕಿಡಿಕಾರಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಾದ್ರಾ ಮಾಡಿರುವ ಹಗರಣಗಳ ಬಗ್ಗೆ ತನಿಖೆ ನಡೆಸಲಾಗುವುದು. ಒಂದು ವೇಳೆ ಕಾನೂನು ಉಲ್ಲಂಘಿಸಿದ್ದರೆ ಜೈಲಿಗೆ ಹಾಕಲು ಹಿಂದು ಮುಂದು ನೋಡುವುದಿಲ್ಲ ಎಂದು ಉಮಾ ಎಚ್ಚರಿಸಿದರು. ( ನನ್ನ ಪತಿಯನ್ನು ದೂಷಿಸಬೇಡಿ: ಪ್ರಿಯಾಂಕಾ ವಾದ್ರಾ )
ಇದೇ ವೇಳೆ ತಾವು ಈ ಹಿಂದೆ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬಗ್ಗೆ ಮಾಡಿರುವ ಆರೋಪಕ್ಕೆ ವಿಷಾದ ವ್ಯಕ್ತಪಡಿಸಿದ್ದು, ಇದು ನನ್ನ ತಪ್ಪು ಅರಿವಿನಿಂದಾಗಿದೆ ಎಂದು ಹೇಳಿದ್ದಾರೆ.
ನಾಣು 2007ರಲ್ಲಿ ನರೇಂದ್ರ ಮೋದಿ ಕುರಿತು ಮಾತನಾಡಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ನನ್ನ ತಪ್ಪು ಕಲ್ಪನೆಯಿಂದ ಇಂತಹ ಪ್ರಮಾದ ಉಂಟಾಗಿತ್ತು. ನನ್ನ ಅರಿವಿಗೆ ಬರುತ್ತಿದ್ದಂತೆ ಬಿಜೆಪಿ ವಿರುದ್ಧ ನಿಲ್ಲಿಸಲಾಗಿದ್ದ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಯುವಂತೆ ಸೂಚಿಸಿದ್ದೆ. ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಎಲ್ಲಾ ರಂಗಗಳಲ್ಲೂ ಸರ್ವಾಂಗೀಣ ಅಭಿವೃದ್ಧಿಯಾಗಲಿದ್ದು, ದೇಶದ ಪ್ರತಿಯೊಬ್ಬರು ಅವರನ್ನು ಆಶೀರ್ವದಿಸಬೇಕೆಂದು ಕೋರಿದರು.












Click it and Unblock the Notifications