ಸೀತಾರಾಂ ಯಚೂರಿಯನ್ನು ಭೇಟಿ ಮಾಡಿದ ರಾಜನಾಥ್, ನಾಯ್ಡು
ನವದೆಹಲಿ, ಜೂನ್ 16: ರಾಷ್ಟಪತಿ ಚುನಾವಣೆಗೆ ಇನ್ನೊಂದು ತಿಂಗಳಷ್ಟೇ ಬಾಕಿ ಉಳಿದಿದ್ದು, ಅಭ್ಯರ್ಥಿ ಆಯ್ಕೆಯ ಕುರಿತು ರಾಜಕೀಯ ಪಕ್ಷಗಳು ಬಿರುಸಿನ ಕಾರ್ಯ ಆರಂಭಿಸಿವೆ.
ಇಂದು (ಜೂನ್ 16) ಬೆಳಗ್ಗೆ ತಾನೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಅವರನ್ನೂ ಭೇಟಿಯಾದರು.

ಭೇಟಿಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಯಚೂರಿ, 'ಅವರು (ರಾಜನಾಥ್ ಸಿಂಗ್, ವೆಂಕಯ್ಯ ನಾಯ್ಡು) ರಾಷ್ಟ್ರಪತಿ ಅಭ್ಯರ್ಥಿಯ ಕುರಿತಂತೆ ತಮಗೆ ಬೆಂಬಲ ನೀಡುವಂತೆ ಕೇಳಿದ್ದಾರೆ. ಆದರೆ ಅಭ್ಯರ್ಥಿ ಹೆಸರನ್ನು ಮಾತ್ರ ಬಹಿರಂಗ ಪಡಿಸಿಲ್ಲ. ಅಭ್ಯರ್ಥಿಯ ಹೆಸರು ಗೊತ್ತಿಲ್ಲದೆ ಬೆಂಬಲ ನೀಡುವುದು ಕಷ್ಟ' ಎಂದು ಯಚೂರಿ ಹೇಳಿದರು.
ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವವರಿಗೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ ಎಂದರಲ್ಲದೆ, ಇನ್ನು ನಾಲ್ಕೈದು ದಿನದಲ್ಲಿ ರಾಷ್ಟ್ರಪತಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿ ಮತ್ತೆ ಭೇಟಿಯಾಗುವುದಾಗಿ ಸಿಂಗ್ ಮತ್ತು ನಾಯ್ಶು ಹೇಳಿದ್ದಾರೆಂದು ಪತ್ರಕರ್ತರಿಗೆ ಯಚೂರಿ ತಿಳಿಸಿದರು.
ರಾಷ್ಟ್ರಪತಿ ಚುನಾವಣೆ ಜುಲೈ 15 ರಂದು ನಡೆಯಲಿದ್ದು, ಜು.20 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications