ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣ: ಮತ್ತಷ್ಟು ಪರಿಶೀಲನೆಗೆ ಮುಂದಾದ ಸುಪ್ರೀಂಕೋರ್ಟ್
ನವದೆಹಲಿ, ಆಗಸ್ಟ್ 17: ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಆರೋಪದಲ್ಲಿ ವಕೀಲ ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದು, ಆಗಸ್ಟ್ 20ರಂದು ಅವರ ಶಿಕ್ಷೆ ಪ್ರಕಟವಾಗಲಿದೆ.
ಸುಪ್ರೀಂಕೋರ್ಟ್ನ ಹಿಂದಿನ ನ್ಯಾಯಮೂರ್ತಿಗಳು ಭ್ರಷ್ಟರಾಗಿದ್ದರು ಎಂದು ಹೇಳಿಕೆ ನೀಡಿದ್ದ ಪ್ರಶಾಂತ್ ಭೂಷಣ್, ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಅವರು ಐಷಾರಾಮಿ ಬೈಕ್ನಲ್ಲಿ ಕುಳಿತ ಫೋಟೊವೊಂದಕ್ಕೆ ವ್ಯಂಗ್ಯದ ಟ್ವೀಟ್ ಮಾಡಿದ್ದರು. ಇದಕ್ಕೆ ಅವರು ವಿಷಾದ ವ್ಯಕ್ತಪಡಿಸಿದ್ದರೂ ಸುಪ್ರೀಂಕೋರ್ಟ್ ಅನ್ನು ಪರಿಗಣಿಸಿಲ್ಲ.
ಈ ನಡುವೆ ಸುಪ್ರೀಂಕೋರ್ಟ್, ನ್ಯಾಯಾಂಗ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಾಗ ಅದನ್ನು ಯಾವ ಸನ್ನಿವೇಶದಲ್ಲಿ ಮಾಡಲಾಗಿದೆ ಎನ್ನುವುದು ಸೇರಿದಂತೆ ವಿಶಾಲ ಪ್ರಶ್ನೆಗಳನ್ನು ಪರಿಶೀಲನೆ ಮಾಡುವುದಾಗಿ ತಿಳಿಸಿದೆ.

ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ಉದ್ಭವಿಸಿದಾಗ ಯಾವ ರೀತಿಯ ಪ್ರಕ್ರಿಯೆ ನಡೆಸಬೇಕಾಗುತ್ತದೆ ಎಂಬ ಬಗ್ಗೆಯೂ ಪರಿಶೀಲಿಸುವುದಾಗಿ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಹೇಳಿದೆ.
ನ್ಯಾಯಾಂಗದ ಮೇಲಿನ ಭ್ರಷ್ಟಾಚಾರಗಳ ಆರೋಪದ ಕುರಿತಾದ ಪ್ರಶ್ನೆಗಳ ಬಗ್ಗೆ ವಕೀಲರು ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂಬುದನ್ನು ಮುಂದಿನ ವಾರ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ.
2009ರಲ್ಲಿ ತೆಹೆಲ್ಕಾ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಪ್ರಶಾಂತ್ ಭೂಷಣ್, ಸುಪ್ರೀಂಕೋರ್ಟ್ನ 16 ನ್ಯಾಯಮೂರ್ತಿಗಳಲ್ಲಿ ಅರ್ಧದಷ್ಟು ಮಂದಿ ಭ್ರಷ್ಟರಾಗಿದ್ದರು ಎಂದು ಹೇಳಿದ್ದರು. ಇದರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು.
'ನಾವು ಈ ಪ್ರಕರಣವನ್ನು ಇಲ್ಲಿಗೇ ಮುಗಿಸಲು ಬಯಸಿದ್ದೆವು. ಆದರೆ ಮೂಲ ಪ್ರಶ್ನೆಯೆಂದರೆ, 1) ನೀವು ಮಾಧ್ಯಮದೊಂದಿಗೆ ಮಾತನಾಡಲು ಬಯಸಿದ್ದರೆ, 2) ನಿಮಗೆ ಯಾವುದೇ ನ್ಯಾಯಾಧೀಶರ ಬಗ್ಗೆ ಸಮಸ್ಯೆ ಇದ್ದರೆ, ಯಾವ ಪ್ರಕ್ರಿಯೆ ನಡೆಸಬೇಕು?, 3) ಯಾವ ಸಂದರ್ಭಗಳಲ್ಲಿ ಇಂತಹ ಆರೋಪಗಳನ್ನು ಮಾಡಬಹುದು ಎನ್ನುವುದೂ ಕೂಡ ಪ್ರಶ್ನೆಯಾಗುತ್ತದೆ' ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಹೇಳಿದ್ದಾರೆ.
ಭ್ರಷ್ಟಾಚಾರ ಎಂಬ ಪದ ಬಳಕೆಯು ನ್ಯಾಯಾಂಗ ನಿಂದನೆಗೆ ಗುರಿಯಾಗುವಷ್ಟು ಗಂಭೀರ ಅಪರಾಧವಾಗುವುದಿಲ್ಲ ಎಂದು ಹಿರಿಯ ವಕೀಲ ರಾಜೀವ್ ಧವನ್ ಹೇಳಿದ್ದರು.












Click it and Unblock the Notifications