ವಾಯು ಮಾಲಿನ್ಯ: ದೆಹಲಿ ಸುತ್ತಲಿನ ನಗರಗಳಲ್ಲಿ ಕಲ್ಲಿದ್ದಲು ಬಳಕೆ ನಿಷೇಧ
ನವದೆಹಲಿ ಜೂನ್ 8: ಅತಿಯಾದ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿ, ನೋಯ್ಡಾ, ಗುರುಗ್ರಾಮ, ಗಾಜಿಯಾಬಾದ್ ನಲ್ಲಿ 2023ರ ಜನವರಿ 1 ರಿಂದ ಕಲ್ಲಿದ್ದಲು ಬಳಕೆಯನ್ನು ನಿಷೇಧಿಸಲಾಗಿದೆ. ವಾಯು ಗುಣಮಟ್ಟ ನಿರ್ವಹಣೆ ಆಯೋಗವು(ಸಿಎಕ್ಯೂಎಂ) ಈ ಬಗ್ಗೆ ಜೂನ್ 3ರಂದು ಆದೇಶ ಹೊರಡಿಸಿದೆ.
"ವಿದ್ಯುತ್ ಸ್ಥಾವರಗಳಲ್ಲಿ ಕಡಿಮೆ ಸಲ್ಫರ್ ಯುಕ್ತ ಕಲ್ಲಿದ್ದಲಿನ ಬಳಕೆಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ. ಪಿಎನ್ ಜಿ(ಪೈಪಡ್ ನ್ಯಾಚುರಲ್ ಗ್ಯಾಸ್) ಲಭ್ಯತೆ ಇರುವ ಪ್ರದೇಶಗಳಲ್ಲಿ ಅಕ್ಟೋಬರ್ 1 ರಿಂದಲೇ ನಿಷೇಧ ಜಾರಿಗೆ ಬರಲಿದೆ. ದೇಶದ ರಾಜಧಾನಿ ಹಾಗೂ ಅಕ್ಕ-ಪಕ್ಕದ ಪ್ರದೇಶಗಳಲ್ಲಿ 2023ರ ಜನವರಿ 1 ರಿಂದ ಕಲ್ಲಿದ್ದಲು ಬಳಕೆಯನ್ನು ನಿಷೇಧಿಸಲಾಗಿದೆ,'' ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎಲೆಕ್ಟ್ರಿಕ್ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ: 90ಕ್ಕೂ ಹೆಚ್ಚು ವಾಹನ ಭಸ್ಮ
"ಪ್ರಮುಖವಾಗಿ ದೆಹಲಿ, ನೋಯ್ಡಾ, ಗುರುಗ್ರಾಮ, ಗಾಜಿಯಾಬಾದ್ ನಲ್ಲಿ 2023ರ ಜನವರಿ 1 ರಿಂದ ಕಲ್ಲಿದ್ದಲು ಬಳಕೆಯನ್ನು ನಿಷೇಧಿಸಲಾಗುವುದು,'' ಎಂದು ವಾಯು ಗುಣಮಟ್ಟ ನಿರ್ವಹಣೆ ಆಯೋಗವು ತಿಳಿಸಿದೆ.
ಚಳಿಗಾಲ ಸಮೀಪಿಸುತ್ತಿದ್ದಂತೆ ದೆಹಲಿಯಲ್ಲಿ ಪ್ರತಿ ವರ್ಷ ವಾಯು ಮಾಲಿನ್ಯ ಹೆಚ್ಚಳವಾಗುತ್ತದೆ. ಕಳೆ ಸುಡುವುದು, ಹವಾಮಾನ ವೈಪರಿತ್ಯ ಮತ್ತು ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸುವ ಕಾರಣ ವಾಯು ಮಾಲಿನ್ಯ ಮತ್ತಷ್ಟು ಉಲ್ಬಣಗೊಳ್ಳುತ್ತದೆ.
ಇನ್ನೊಂದೆಡೆ ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ ವಿದೇಶಗಳಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಸರಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಕಂಪನಿಯು ನಿರ್ಧರಿಸಿದೆ. ಕಲ್ಲಿದ್ದಲು ಕೊರತೆಯಿಂದಾಗಿ ದೇಶದ ನಾನಾ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಯೂ ಕಡಿಮೆಯಾಗಿದೆ. ಇದನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಲ್ಲಿದ್ದಲು ಸಂಗ್ರಹಿಸಲು ಮುಂದಾಗಿವೆ.
ಐದು ದಿನದಲ್ಲಿ 75 ಕಿ. ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ: ಗಿನ್ನೆಸ್ ದಾಖಲೆ
ಕೋಲ್ ಇಂಡಿಯಾ ಸಂಸ್ಥೆಯು ಸರಕಾರದಿಂದ ಸರಕಾರಕ್ಕೆ(ಜಿ2ಜಿ) ಆಧಾರದ ಮೇಲೆ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತದೆ. ಹಾಗೂ ರಾಜ್ಯದ ವಿದ್ಯುತ್ ಉತ್ಪಾದಕ ಘಟಕಗಳು ಮತ್ತು ಸ್ವತಂತ್ರ ವಿದ್ಯುತ್ ಉತ್ಪಾದಕರ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸರಬರಾಜು ಮಾಡುತ್ತದೆ ಎಂದು ಕೇಂದ್ರ ಇಂಧನ ಸಚಿವಾಲಯ ತಿಳಿಸಿದೆ.
2022 ರ ಮೂರನೇ ತ್ರೈಮಾಸಿಕದಲ್ಲಿ ಭಾರತವು ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಕಲ್ಲಿದ್ದಲು ಕೊರತೆ ಎದುರಿಸುವ ನಿರೀಕ್ಷೆಯಿದೆ. ವಿದ್ಯುತ್ ಕಡಿತದ ಸಮಸ್ಯೆಯನ್ನು ನಿವಾರಿಸಲು ಅಗತ್ಯ ಕಲ್ಲಿದ್ದಲು ಸಂಗ್ರಹಿಸುವ ಅವಶ್ಯಕತೆಯಿದೆ. ರಾಜ್ಯಗಳಿಂದ ಅನೇಕ ಕಲ್ಲಿದ್ದಲು ಆಮದು ಟೆಂಡರ್ ಗಳು ಗೊಂದಲಕ್ಕೆ ಕಾರಣವಾಗುತ್ತವೆ. ಹೀಗಾಗಿ ಕೋಲ್ ಇಂಡಿಯಾ ಮೂಲಕ ಕೇಂದ್ರೀಕೃತ ಕಲ್ಲಿದ್ದಲು ಸಂಗ್ರಹಣೆಗೆ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಕಲ್ಲಿದ್ದಲಿನೊಂದಿಗೆ, ವಿದೇಶಿ ಕಲ್ಲಿದ್ದಲು ಆಮದನ್ನು ಹೆಚ್ಚಿಸಲು ಘಟಕಗಳ ಮೇಲೆ ಭಾರತ ಒತ್ತಡ ಹೇರಿತು. ವಿದ್ಯುತ್ ಸ್ಥಾವರಗಳು ಆಮದು ಮೂಲಕ ಕಲ್ಲಿದ್ದಲು ಸಂಗ್ರಹಿಸದಿದ್ದರೆ, ದೇಶೀಯವಾಗಿ ಗಣಿಗಾರಿಕೆಯ ಮಾಡಿದ ಕಲ್ಲಿದ್ದಲಿನ ಪೂರೈಕೆಯನ್ನು ಕಡಿತಗೊಳಿಸುವ ಎಚ್ಚರಿಕೆಯನ್ನು ನೀಡಿತು.
Recommended Video
ರಾಜ್ಯ ಘಟಕಗಳು ಮತ್ತು ಸ್ವತಂತ್ರ ವಿದ್ಯುತ್ ಉತ್ಪಾದಕಕರ ಉಷ್ಣ ವಿದ್ಯುತ್ ಸ್ಥಾವರಗಳಿಂದ ಸ್ಥಳೀಯ ಕಲ್ಲಿದ್ದಲಿನೊಂದಿಗೆ ಮಿಶ್ರಣಕ್ಕಾಗಿ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಪ್ರಕ್ರಿಯೆಯಲ್ಲಿರುವ ಟೆಂಡರ್ ಗಳನ್ನು ಅಮಾನತಿನಲ್ಲಿಡಲಾಗುವುದು. ಜಿ2ಜಿ ಮೂಲಕ ಕೋಲ್ ಇಂಡಿಯಾದಿಂದ ಬೆಲೆ ನಿಗದಿಗಾಗಿ ಹೀಗೆ ಮಾಡಲಾಗಿದೆ. ಇದರಿಂದ ಕನಿಷ್ಠ ದರದಲ್ಲಿ ಕಲ್ಲಿದ್ದಲು ಸಂಗ್ರಹಿಸಬಹುದು ಎಂದು ಕೇಂದ್ರ ಇಂಧನ ಸಚಿವಾಲಯ ಇತ್ತೀಚಿಗೆ ಹೇಳಿತ್ತು.
(ಒನ್ಇಂಡಿಯಾ ಸುದ್ದಿ)