ಕೆಪಿಸಿಸಿ ಕಾರ್ಯದರ್ಶಿ, ಡಿಕೆ ಆಪ್ತ ವಿಜಯ್ ಗೆ ಇಡಿ ಸಮನ್ಸ್
ನವದೆಹಲಿ, ಅಕ್ಟೋಬರ್ 23: ಕೆಪಿಸಿಸಿ ಕಾರ್ಯದರ್ಶಿ, ಡಿಕೆ ಶಿವಕುಮಾರ್ ಆಪ್ತ ವಿಜಯ್ ಮುಳುಗಂದ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದೆ. ಮನಿಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್ ಅವರನ್ನು ವಿಚಾರಣೆಗೊಳಪಡಿಸಲಾಗುತ್ತದೆ.
2017ರಲ್ಲಿ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದ ಸಂದರ್ಭದಲ್ಲೇ ವಿಜಯ್ ಮುಳಗುಂದ ಅವರ ಮನೆ ಮೇಲೆ ದಾಳಿ ನಡೆದಿತ್ತು. ಗುಜರಾತ್ ಶಾಸಕರಿಗೆ ಅತಿಥ್ಯ ನೀಡಿದ್ದರು. ಈಗಲ್ಟನ್ ರೆಸಾರ್ಟ್ ನಲ್ಲಿದ್ದ ಗುಜರಾತ್ ಶಾಸಕರನ್ನು ಕಾಯುವ ಕೆಲಸವನ್ನು ವಿಜಯ್ ಮುಳಗುಂದ್ ಗೆ ವಹಿಸಲಾಗಿತ್ತು.

ಬೆಂಗಳೂರಿನ ರಾಜಾಜಿನಗರದಲ್ಲಿರುವ ವಿಜಯ್ ಅವರ ಮನೆ ಮೇಲೆ ಐಟಿ ದಾಳಿ ನಡೆಸಲಾಗಿತ್ತು. ಹಲವು ದಾಖಲೆಗಳನ್ನು ಈ ಸಂದರ್ಭದಲ್ಲಿ ಸಂಗ್ರಹಿಸಲಾಗಿತ್ತು. ಎಸ್ಎಂ ಕೃಷ್ಣ ಅಧಿಕಾರ ಅವಧಿಯಲ್ಲಿ ಕಾವೇರಿ ಹ್ಯಾಂಡ್ ಲೂಮ್ ಸಂಸ್ಥೆ ಅಧ್ಯಕ್ಷರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದರು.
ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಕ್ತಾಯವಾಗಿದ್ದು, ಬುಧವಾರ(ಅಕ್ಟೋಬರ್ 23)ದಂದು ದೆಹಲಿ ಹೈಕೋರ್ಟಿನಲ್ಲಿ ತೀರ್ಪು ಪ್ರಕಟವಾಗಲಿದೆ.
ಡಿಕೆಶಿ ಸೋದರ ಕಾಂಗ್ರೆಸ್ ಏಕೈಕ ಸಂಸದ ಡಿಕೆ ಸುರೇಶ್, ತಾಯಿ ಗೌರಮ್ಮ, ಡಿಕೆಶಿ ಪತ್ನಿ ಉಷಾ, ಪುತ್ರಿ ಐಶ್ವರ್ಯಾ ಸೇರಿದಂತೆ ಡಿಕೆಶಿ ಆಪ್ತರನ್ನು ಜಾರಿ ನಿರ್ದೇಶನಾಲಯವು ವಿಚಾರಣೆ ನಡೆಸಿದೆ.
"ಡಿ.ಕೆ.ಶಿವಕುಮಾರ್ ಅವರ ಮೇಲೆ ಐಟಿ ದಾಳಿ ಆದಾಗ, ಬರೋಬ್ಬರಿ 77 ಮನೆಗಳ ಮೇಲೆ ದಾಳಿ ಮಾಡಲಾಗಿತ್ತು, ಅವರ ಎಲ್ಲ ಆಸ್ತಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಅದೆಲ್ಲವೂ ನಮ್ಮದೇ ಎಂದ್ರೆ ಹೇಗೆ?" ಎಂದು ಡಿಕೆ ಸುರೇಶ್ ಪ್ರಶ್ನಿಸಿದ್ದಾರೆ.
ಡಿಕೆಶಿ ಹೊಂದಿದ್ದಾರೆ ಎನ್ನಲಾದ 317 ಬ್ಯಾಂಕ್ ಖಾತೆ ವಿವರ ಇನ್ನೂ ಲಭ್ಯವಾಗಿಲ್ಲ ಎಂದು ಜಾರಿ ನಿರ್ದೇಶನಾಲಯದ ವಕೀಲರು ವಾದಿಸಿ, ಹೆಚ್ಚಿನ ವಿಚಾರಣೆಗಾಗಿ ಸಮಯ ಕೋರಿದ್ದಾರೆ.












Click it and Unblock the Notifications