ಕೊರೊನಾ ಕಾಲರ್ ಟ್ಯೂನ್ ನಿಂದ ಅಮಿತಾಭ್ ಬಚ್ಚನ್ ಧ್ವನಿ ತೆಗೆದುಹಾಕಲು ಕೋರಿಕೆ
ನವದೆಹಲಿ, ಜನವರಿ 07: ಕೊರೊನಾ ಸೋಂಕಿನ ವಿರುದ್ಧ ಮುನ್ನೆಚ್ಚರಿಕೆ ನೀಡುವ ನಟ ಅಮಿತಾಭ್ ಬಚ್ಚನ್ ಅವರ ಧ್ವನಿಯನ್ನು ಮೊಬೈಲ್ ಕಾಲರ್ ಟ್ಯೂನ್ ನಿಂದ ತೆಗೆದುಹಾಕುವಂತೆ ಕೋರಿ ದೆಹಲಿ ಹೈ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ನಟ ಅಮಿತಾಭ್ ಬಚ್ಚನ್ ಹಾಗೂ ಅವರ ಕುಟುಂಬ ಸದಸ್ಯರೇ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಹೀಗಿದ್ದಾಗ ಅವರ ಧ್ವನಿಯನ್ನು ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಕಾಲರ್ ಟ್ಯೂನ್ ಗೆ ಬಳಸುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಕೊರೊನಾನಿಂದ ಗುಣಮುಖರಾದ ಐಶ್ವರ್ಯ ರೈ ಮತ್ತು ಆರಾಧ್ಯ
ನಟ ಅಮಿತಾಭ್ ಬಚ್ಚನ್ ಅವರ ಧ್ವನಿಗೆ ಸರ್ಕಾರ ಹಣವನ್ನು ನೀಡಿದೆ. ಆದರೆ ಏನನ್ನೂ ಬಯಸದೇ ದೇಶಕ್ಕೆ, ಜನರಿಗೆ ಸೇವೆ ಮಾಡುತ್ತಿರುವ ಎಷ್ಟೋ ಮಂದಿಯಿದ್ದಾರೆ. ಕೊರೊನಾ ವಿರುದ್ಧ ತಮ್ಮ ಜೀವದ ಹಂಗು ತೊರೆದು ಹೋರಾಡಿದ ಎಷ್ಟೋ ಜನರು ಉಚಿತ ಸೇವೆ ನೀಡಲು ಸಿದ್ಧರಿದ್ದಾರೆ. ಅವರಿಗೆ ಈ ಅವಕಾಶ ನೀಡಿ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಗುರುವಾರ ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಿದೆ. ಅರ್ಜಿದಾರರ ಪರ ವಕೀಲರು ವಿಚಾರಣೆಗೆ ಹಾಜರಾಗದ್ದರಿಂದ ನ್ಯಾಯಪೀಠ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಿದೆ.
ದೆಹಲಿ ನಿವಾಸಿ, ಸಾಮಾಜಿಕ ಕಾರ್ಯಕರ್ತ ರಾಕೇಶ್ ಅವರು ವಕೀಲರಾದ ಎಕೆ ದುಬೆ ಹಾಗೂ ಪವನ್ ಕುಮಾರ್ ಅವರ ಮೂಲಕ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. "ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಕುರಿತು ಜನರಿಗೆ ಜಾಗೃತಿ ಸಂದೇಶ ನೀಡಲು ಕಾಲರ್ ಟ್ಯೂನ್ ನಲ್ಲಿ ನಟ ಅಮಿತಾಭ್ ಬಚ್ಚನ್ ಅವರ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಆದರೆ ಸ್ವತಃ ನಟರು ಹಾಗೂ ಅವರ ಕುಟುಂಬ ಕೊರೊನಾ ಸೋಂಕಿಗೆ ತುತ್ತಾಗಿತ್ತು. ಅವರೇ ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಿದ್ದಾಗ ಅವರ ಧ್ವನಿಯನ್ನು ಜಾಗೃತಿಗೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಲಾಗಿದೆ.
ನವೆಂಬರ್ ನಲ್ಲೂ ಈ ವಿಷಯವನ್ನು ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದು, ಯಾವುದೇ ಉತ್ತರ ಬಂದಿಲ್ಲದ ಕಾರಣ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ನ್ಯಾಯದ ದೃಷ್ಟಿಯಿಂದ ಮೊಬೈಲ್ ಕಾಲರ್ ಟ್ಯೂನ್ ನಿಂದ ಅಮಿತಾಭ್ ಬಚ್ಚನ್ ಅವರ ಧ್ವನಿಯನ್ನು ತೆಗೆದುಹಾಕಿ ಎಂದು ಮನವಿ ಮಾಡಲಾಗಿದೆ.