ಹಬ್ಬದೂಟ ಹಾಕಿ, ಆಕ್ರೋಶ ಹೊರ ಹಾಕಿದ ಋತುಮತಿಯರು!
ನವದೆಹಲಿ ಫೆಬ್ರವರಿ 25: ಇತ್ತೀಚೆಗೆ ಗುಜರಾತ್ ಭುಜ್ನ ಕಾಲೇಜೊಂದರಲ್ಲಿ ಹುಡುಗಿಯರು ಋತುಮತಿ ಆಗಿದ್ದಾರೆಯೇ ಎಂದು ಪರೀಕ್ಷಿಸಲು ಒಳಉಡುಪುಗಳನ್ನು ತೆಗೆಯಿಸಿ ಪರೀಕ್ಷಿಸಲು ಕಾಲೇಜು ಆಡಳಿತ ಮಂಡಳಿಯೇ ಮುಂದಾಗಿತ್ತು. ಅದರ ಬೆನಲ್ಲೇ ಭುಜ್ನ ಸ್ವಾಮೀಜಿಯೊಬ್ಬರು ಋತುಮತಿಯಾದ ಹೆಣ್ಣು ಮಕ್ಕಳು ಅಡುಗೆ ಮಾಡಿದರೆ ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತಾರೆ ಎಂದು ಹೇಳಿದ್ದರು.
ಈ ಎರಡೂ ಹೇಳಿಕೆಗಳು ದೇಶ್ಯಾದ್ಯಂತ ವ್ಯಾಪಕ ಖಂಡನೆಗೆ ಒಳಗಾಗಿದ್ದವು. ಇಂತಹ ವೈಜ್ಞಾನಿಕ ಕಾಲದಲ್ಲೂ ಈ ರೀತಿ ಮಹಿಳೆಗೆ ಅವಮಾನ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.
ಭುಜ್ ಕಾಲೇಜು ಹಾಗೂ ಬುಜ್ನ ಸ್ವಾಮೀಜಿ ಹೇಳಿಕೆ ಖಂಡಿಸಲು ದೆಹಲಿಯ ಮಹಿಳೆಯರು ಮುಂದೆ ಬಂದಿದ್ದಾರೆ. ಋತುಮತಿಯಾದ ಯುವತಿ, ಮಹಿಳೆಯರು ದೆಹಲಿಯಲ್ಲಿ ಅಡುಗೆ ಮಾಡಿ, ಅದನ್ನು 300 ಕ್ಕೂ ಹೆಚ್ಚು ಜನರಿಗೆ ಬಡಿಸಿದ್ದರು. ದೆಹಲಿ ಮೂಲದ ಎನ್ಜಿಓ ಈ ಕಾರ್ಯಕ್ರಮ ಆಯೋಜಿಸಿತ್ತು. ಇದರ ಬೆನ್ನಲ್ಲೇ ಹಲವು ಮಹಿಳಾ ಸಂಘಟನೆಗಳು ಗುಜರಾತ್ ಬುಜ್ ಸ್ವಾಮೀಜಿಗೆ ಬುದ್ದಿ ಕಲಿಸಲು ಗುಜರಾತ್ ಸೇರಿದಂತೆ ದೇಶದ ಅನೇಕ ಕಡೆಗೆ ಋತುಮತಿಯಾದ ಮಹಿಳೆಯರಿಂದ ಊಟ ಮಾಡಿ ಉಣಬಡಿಸುವ (Period Feast) ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ವರದಿಗಳು ಬಂದಿವೆ.

ಪಿರಿಯಡ್ ಫೀಸ್ಟ್
ಮಹಿಳೆಯರ ಬಗ್ಗೆ ಅಪಮಾನಕಾರಿಯಾಗಿ ನಡೆದ ಗುಜರಾತ್ನ ಎರಡು ಘಟನೆಗಳನ್ನು ಖಂಡಿಸಲು ದೆಹಲಿಯ ಸಚ್ಚಿ ಸಹೇಲಿ ಎನ್ನುವ ಎನ್ಜಿಓ ಕಳೆದ ಗುರುವಾರ ಪಿರಿಯಡ್ ಫೀಸ್ಟ್ ಆಯೋಜಿಸಿತ್ತು. ಋತುಮತಿಯಾದ ಆರವತ್ತು ಮಹಿಳೆಯರೇ ಹಬ್ಬದ ಅಡುಗೆ ಮಾಡಿ, ಅದನ್ನು 300 ಜನರಿಗೆ ಉಣ ಬಡಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಈ ಕಾರ್ಯಕ್ರಮದಲ್ಲಿ ಸ್ವತಃ ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಲಿಂಗಭೇದ ಸರಿ ಎಲ್ಲ ಎಂಬುದನ್ನು ಸಾರಿದರು.

ಮಹಿಳೆಯರಿಗೆ ಅವಮಾನ
"ಇಂದಿನ ವೈಜ್ಞಾನಿಕ ದಿನ ಮತ್ತು ಯುಗದಲ್ಲಿ, ಮುಟ್ಟಿನ ಬಗ್ಗೆ ಶುದ್ಧ ಅಥವಾ ಅಶುದ್ಧ ಏನೂ ಇಲ್ಲ, ಮುಟ್ಟು ನೈಸರ್ಗಿಕ ಜೈವಿಕ ಪ್ರಕ್ರಿಯೆಯಾಗಿದ್ದು ಅದನ್ನು ಹಾಗೆಯೇ ತೆಗೆದುಕೊಳ್ಳಬೇಕು. ಅದು ಬಿಟ್ಟು, ಮಹಿಳೆಯರಿಗೆ ಅವಮಾನ ಮಾಡುವಂತ ಕೆಲಸಗಳನ್ನು ಮಾಡಬಾರದು. ಈ ರೀತಿಯ ಚಟುವಟಿಕೆಗಳು ದೇಶ್ಯಾದ್ಯಂತ ನಡೆಯಬೇಕು'' ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಎಂದು ಹೇಳಿದರು.

ನಾಯಿಯಾಗಿ ಜನ್ಮ ತಾಳುತ್ತಾಳೆ
'ಋತುಮತಿಯಾಗಿದ್ದ ವೇಳೆ ಮಹಿಳೆಯೊಬ್ಬರು ತಯಾರಿಸಿದ ಅಡುಗೆಯನ್ನು ನೀವು ನಿಮ್ಮ ಜೀವಮಾನದಲ್ಲಿ ಒಮ್ಮೆ ಸೇವಿಸಿದರೂ ಸಾಕು, ಮುಂದಿನ ಜನ್ಮದಲ್ಲಿ ಎತ್ತಾಗಿ ಹುಟ್ಟುತ್ತೀರಿ. ಮುಟ್ಟಾದ ಹೆಣ್ಣು ಅಡುಗೆ ತಯಾರಿ ಕಾರ್ಯದಲ್ಲಿ ಭಾಗಿಯಾದರೆ, ಆಕೆ ಮುಂದಿನ ಜನ್ಮದಲ್ಲಿ ಹೆಣ್ಣು ನಾಯಿಯಾಗಿ ಜನ್ಮ ತಾಳುತ್ತಾಳೆ' ಗುಜರಾತ್ನ ಭುಜ್ನಲ್ಲಿ ಇರುವ ಸ್ವಾಮಿ ನಾರಾಯಣ ಭುಜ್ ಮಂದಿರದ ಸ್ವಾಮಿ ಕೃಷ್ಣ ಸ್ವರೂಪ ದಾಸ್ ಜೀ ಮಹಾರಾಜ್ ಹೇಳಿದ್ದರು.

ಒಳ ಉಡುಪು ಬಿಚ್ಚಿಸಿದ್ದರು
ಸ್ವಾಮಿ ನಾರಾಯಣ ಭುಜ್ ಮಂದಿರದ ದೇಗುಲದ ಪ್ರಾಂಗಣದಲ್ಲಿ ಇರುವ ಮಹಿಳಾ ಹಾಸ್ಟೆಲ್ನಲ್ಲಿ ಯುವತಿಯರು ಋತುಮತಿ ಇಲ್ಲವೋ ಅನ್ನೋದನ್ನು ಪರೀಕ್ಷಿಸಲು ಕಾಲೇಜಿನ ಪ್ರಾಂಶುಪಾಲೆ ಪ್ರತಿಯೊಬ್ಬರ ಒಳ ಉಡುಪು ಬಿಚ್ಚಿಸಿ ಖುದ್ದಾಗಿ ಪರೀಕ್ಷಿಸಿದ್ದರು. 68 ವಿದ್ಯಾರ್ಥಿನಿಯರ ಮೇಲೆ ನಡೆಸಿದ್ದ ಈ ಕೃತ್ಯಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು.












Click it and Unblock the Notifications