ನ್ಯಾಯಾಂಗದಲ್ಲೂ ಮೀಸಲಾತಿಗೆ ಕೇಂದ್ರ ಸಚಿವರ ಆಗ್ರಹ
ನವದೆಹಲಿ, ಫೆಬ್ರವರಿ 15: ಸುಪ್ರೀಂಕೋರ್ಟ್ನ ಇತ್ತೀಚಿನ ಬೆಳವಣಿಗೆಗಳ ಬಳಿಕ ನ್ಯಾಯಾಂಗದಲ್ಲಿಯೂ ಮೀಸಲಾತಿ ವ್ಯವಸ್ಥೆಯನ್ನು ತರಬೇಕೆನ್ನುವ ಕೂಗು ಕೇಳಿಬರುತ್ತಿದೆ.
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಸುಮಾರು 70ಕ್ಕೂ ಅಧಿಕ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಂಸದರು ನ್ಯಾಯಾಂಗದಲ್ಲಿ ಮೀಸಲಾತಿ ವ್ಯವಸ್ಥೆಗೆ ಹಕ್ಕೊತ್ತಾಯ ಮಾಡಿದ್ದಾರೆ.
ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ರಾಮ್ವಿಲಾಸ್ ಪಾಸ್ವಾನ್ ಮನೆಯಲ್ಲಿ ಫೆಬ್ರವರಿ 10ರಂದು ಈ ಸಂಬಂಧ ಸಭೆ ನಡೆದಿತ್ತು.

ನ್ಯಾಯಾಂಗದಲ್ಲಿ ಕೆಳವರ್ಗದ ಸಮುದಾಯದ ಜನರ ಪರ ಧ್ವನಿ
ನ್ಯಾಯಾಂಗದಲ್ಲಿ ಕೆಳವರ್ಗದ ಸಮುದಾಯದ ಜನರ ಪರ ಧ್ವನಿ ಎತ್ತುವ ಸಲುವಾಗಿ ಹಾಗೂ ಮೀಸಲಾತಿ ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಂಗದ ಎಲ್ಲಾ ಹಂತಗಳಲ್ಲಿಯೂ ಮೀಸಲಾತಿ ವ್ಯವಸ್ಥೆ ಇರಬೇಕು.

ಲೋಕಸೇವಾ ಆಯೋಗದಂತೆ ನ್ಯಾಯಾಂಗದಲ್ಲೂ ನೇಮಕ ಪ್ರಕ್ರಿಯೆ
ಭಾರತೀಯ ಲೋಕಸೇವಾ ಆಯೋಗ ಮತ್ತು ಇತರೆ ಸಂಸ್ಥೆಗಳಲ್ಲಿ ನೇಮಕ ಪ್ರಕ್ರಿಯೆ ನಡೆಯುವಂತೆ ನ್ಯಾಯಾಂಗಕ್ಕೂ ಪ್ರತ್ಯೇಕ ನೇಮಕ ಪ್ರಕ್ರಿಯೆ ನಡೆಯಬೇಕು.
ಭಾರತೀಯ ನ್ಯಾಯಾಂಗ ಪ್ರಕಾರ ಆಯೋಗ ಅಥವಾ ಅದೇ ರೀತಿಯ ಸ್ವತಂತ್ರ ಸಂಸ್ಥೆಗಳನ್ನು ಆರಂಭಿಸಿ ಸಂವಿಧಾನದಂತೆ ಮೀಸಲಾತಿ ವ್ಯವಸ್ಥೆ ಮೂಲಕ ನೇಮಕ ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.
ಎಲ್ಲಾ ಶಾಸಕರ ಒತ್ತಾಯಕ್ಕೆ ಪಾಸ್ವಾನ್ ಸಮ್ಮತಿ
ಸಭೆಯಲ್ಲಿ ಎಲ್ಲಾ ಶಾಸಕರ ಒತ್ತಾಯಕ್ಕೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಕೂಡ ಸಮ್ಮತಿ ಸೂಚಿಸಿದ್ದಾರೆ. ಈ ಬೆಳವಣಿಗೆಗೆ ಕಾರಣವಾಗಿದ್ದು ಸುಪ್ರೀಂಕೋರ್ಟ್ನ ಇತ್ತೀಚಿನ ಎರಡು ತೀರ್ಪುಗಳು. ಒಂದು ಮೀಸಲಾತಿ ಎನ್ನುವುದು ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು. ಇನ್ನೊಂದೆಡೆ ಬಡ್ತಿ ಸಂದರ್ಭದಲ್ಲಿ ಮೀಸಲಾತಿ ನೀಡುವುದನ್ನೂ ಕೂಡ ತಡೆಹಿಡಿದಿತ್ತು. ಈ ಎರಡೂ ಆದೇಶದ ವಿರುದ್ಧ ಕೇಂದ್ರ ಸರ್ಕಾರ ನಿಯಮ ರಚಿಸಬೇಕು ಬೆಂಬುದು ಪಾಸ್ವಾನ್ ಅವರು ಹಾಗೂ ಇತರೆ ಪರಿಶಿಷ್ಟ ಸಂಸದರ ಆಗ್ರಹವಾಗಿದೆ.

ಸುಪ್ರೀಂಕೋರ್ಟ್ ತೀರ್ಪು
ಮೀಸಲಾತಿ ನೀಡಬೇಕೆ ಅಥವಾ ಬೇಡವೇ ಎನ್ನುವುದನ್ನು ನಿರ್ಧರಿಸುವ ಸಂಪೂರ್ಣ ವಿವೇಚನಾಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಯಾವುದೇ ನಿರ್ಬಂಧ ಇಲ್ಲ ಎಂದು ಕೋರ್ಟ್ ಹೇಳಿದೆ. "ರಾಜ್ಯ ಸರ್ಕಾರ ಮೀಸಲಾತಿ ನೀಡಲು ಕಾರ್ಯ ನಿರ್ವಹಿಸುತ್ತಿಲ್ಲ. ಸಾರ್ವಜನಿಕ ಉದ್ಯೋಗಗಳಲ್ಲಿ ಮೀಸಲಾತಿ ಪಡೆಯಲು ಯಾವುದೇ ಮೂಲಭೂತ ಹಕ್ಕಿಲ್ಲ. ಯಾವ ನ್ಯಾಯಲಯವೂ ಈ ಬಗ್ಗೆ ಆದೇಶ ನೀಡಲು ಸಾಧ್ಯವಿಲ್ಲ," ಎಂದು ನ್ಯಾಯಮೂರ್ತಿ ಎಲ್ ನಾಗೇಶ್ವರ್ ರಾವ್ ಮತ್ತು ಹೇಮಂತ್ ಗುಪ್ತಾ ಅವರನ್ನೊಳಗೊಂಡ ಪೀಠ ಹೇಳಿದೆ. ಉತ್ತರಾಖಂಡದ ಸಾರ್ವಜನಿಕ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ಹುದ್ದೆಗೆ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಕೆ ಆಗಿತ್ತು. ಈ ವೇಳೆ ಸುಪ್ರೀಂಕೋರ್ಟ್ ಈ ಆದೇಶ ಹೊರಡಿಸಿದೆ.












Click it and Unblock the Notifications