Winter Session Day 13 Roundup: ಕಲಾಪದ ಪ್ರಮುಖಾಂಶಗಳು
ನವದೆಹಲಿ, ಡಿಸೆಂಬರ್ 15: ಚಳಿಗಾಲದ ಅಧಿವೇಶನದ 13 ದಿನದ ಕಲಾಪದಲ್ಲಿ ಅಧಿವೇಶನವು ಬಿರುಸಿನಿಂದ ಸಾಗಿದೆ. ವಿರೋಧ ಪಕ್ಷಗಳು ಪ್ರಮುಖವಾಗಿ ರೈತರ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಪ್ರಕರಣ ಹಾಗೂ ಸಂಸದರನ್ನು ಅಮಾನತು ಮಾಡಿರುವ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧವಾಗಿ ಗದ್ದಲ ಎಬ್ಬಿಸಿದೆ.
ಮುಂಗಾರು ಅಧಿವೇಶನದಲ್ಲಿ ದುರ್ನಡತೆ ತೋರಿದ ಆರೋಪದ ಮೇಲೆ 12 ಮಂದಿ ಸಂಸದರನ್ನು ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಿರುವುದನ್ನು ಹಿಂದಕ್ಕೆ ಪಡೆದು ಇವರಿಗೂ ಅಧಿವೇಶನದಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು ಎಂದು ವಿರೋಧ ಪಕ್ಷಗಳು ನಡೆಸಿದ ನಿರಂತರ ಪ್ರತಿಭಟನೆಯಿಂದಾಗಿ ರಾಜ್ಯಸಭೆಯು ಪದೇ ಪದೇ ಮುಂದೂಡಿಕೆ ಮಾಡಲಾಯಿತು.
ಲೋಕ ಸಭೆಯಲ್ಲಿ ಲಖಿಂಪುರ ಖೇರಿ ಪ್ರಕರಣವು ಭಾರೀ ಸದ್ದು ಎಬ್ಬಿಸಿತು. ಉತ್ತರ ಪ್ರದೇಶದ ಲಖಿಂಪು ಖೇರಿಯಲ್ಲಿ ವಾಹನವೊಂದು ರೈತರ ಮೇಲೆ ಹರಿದು ನಾಲ್ವರು ರೈತರು ಸಾವನ್ನಪ್ಪಿದ್ದಾರೆ, ಈ ಬಳಿಕ ನಡೆದ ಹಿಂಸಾಚಾರದಲ್ಲಿ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ರೈತರ ಹತ್ಯೆಯು ಪೂರ್ವ ನಿಯೋಜಿತ ಕೃತ್ಯ ಎಂದು ಈಗಾಗಲೇ ವಿಶೇಷ ತನಿಖಾ ಅಧಿಕಾರಿಗಳು ಹೇಳಿದ್ದಾರೆ.

ಈ ಹತ್ಯೆಯಲ್ಲಿ ಪ್ರಮುಖ ಆರೋಪಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾ ಆಗಿದ್ದು ಈಗಾಗಲೇ ಜೈಲಿನಲ್ಲಿ ಇದ್ದಾರೆ. ಹಾಗೆಯೇ ವಾಹನವು ಸಚಿವ ಅಜಯ್ ಮಿಶ್ರಾರಿಗೆ ಸೇರಿದ್ದು ಎಂದು ಈಗಾಗಲೇ ಅವರು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಿಂದಾಗಿ ಅಜಯ್ ಮಿಶ್ರಾರನ್ನು ಸಚಿವ ಸಂಪುಟದಿಂದ ಅಮಾನತು ಮಾಡಬೇಕು ಎಂದು ವಿರೋಧ ಪಕ್ಷಗಳು ಲೋಕ ಸಭೆಯಲ್ಲಿ ಆಗ್ರಹ ಮಾಡಿದೆ. ಇದು ಯೋಜಿತ ಷಡ್ಯಂತ್ರ ಎಂಬ ವಿಚಾರವನ್ನು ವಿರೋಧ ಪಕ್ಷಗಳು ಪ್ರಮುಖವಾಗಿ ಮುಂದಿಟ್ಟು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ರಾಹುಲ್ ಗಾಂಧಿ ಕಲಾಪ ಮುಂದೂಡಿಕೆ ನೋಟಿಸ್
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಲೋಕ ಸಭೆಯಲ್ಲಿ ಕಲಾಪ ಮುಂದೂಡಿಕೆ ನೋಟಿಸ್ ನೀಡಿದ್ದಾರೆ. ಲಖಿಂಪುರ ಖೇರಿ ಪ್ರಕರಣದಲ್ಲಿ ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾರ ಕೈವಾಡ ಇರುವ ಕಾರಣದಿಂದಾಗಿ ಕೇಂದ್ರ ಸಚಿವ ಸಂಪುಟದಿಂದ ಅಜಯ್ ಮಿಶ್ರಾರನ್ನು ಅಮಾನತು ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ತಮ್ಮ ನೋಟಿಸ್ನಲ್ಲಿ ರಾಹುಲ್ ಗಾಂಧಿ, ಸದನದ ಕಲಾಪವನ್ನು ಮುಂದೂಡುವಂತೆ ಕೋರಿದ್ದಾರೆ. ಲಖಿಂಪುರ ಖೇರಿ ಘಟನೆಯ ಕುರಿತು ವಿಶೇಷ ತನಿಖಾ ತಂಡದ (ಎಸ್ಐಟಿ) ವರದಿಯನ್ನು ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸೂಕ್ತ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವ: ರಾಜ್ಯಸಭೆಯಲ್ಲಿ ಸರ್ಕಾರ
ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯತ್ವ ನೀಡಲಾಗುವುದು ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ. ಈ ಬಗ್ಗೆ ಲಿಖಿತ ಹೇಳಿಕೆಯನ್ನು ಅವರು ನೀಡಿದ್ದಾರೆ. ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವ ನೀಡಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ನಿತ್ಯಾನಂದ ರೈ, "ನಾವು ಸೂಕ್ತ ಸಮಯವನ್ನು ನೋಡಿಕೊಂಡು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ನೀಡುತ್ತೇವೆ," ಎಂದು ತಿಳಿಸಿದ್ದಾರೆ. ಇನ್ನು ಇತ್ತೀಚೆಗ ಸಂಸತ್ನಲ್ಲಿ ಮಾತನಾಡಿದ್ದ ನಿತ್ಯಾನಂದ ರೈ, ಜಮ್ಮು ಮತ್ತು ಕಾಶ್ಮೀರಕ್ಕೆ ಶೀಘ್ರವೇ ರಾಜ್ಯತ್ವ ನೀಡಲಾಗುವುದು ಎಂದು ಹೇಳಿದ್ದರು.
ಇನ್ನು ನಿನ್ನೆ ರಾಜ್ಯ ಸಭೆ ಹಾಗೂ ಲೋಕಸಭೆಯಲ್ಲಿ 12 ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆದಿದೆ. ಚಳಿಗಾಲದ ಅಧಿವೇಶನ ಆರಂಭವಾದಾಗಲೇ ಸಭಾಪತಿ ಈ 12 ರಾಜ್ಯಸಭಾ ಸಂಸದರ ಅಮಾನತು ಮಾಡಿದ್ದು ಈ ಹಿನ್ನೆಲೆ ಅಂದಿನಿಂದಲೇ ವಿರೋಧ ಪಕ್ಷಗಳು ಪ್ರತಿಭಟನೆಯನ್ನು ನಡೆಸುತ್ತಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications