ಮುಂಗಾರು ಅಧಿವೇಶನ: ನಾಲ್ಕನೇ ದಿನವೂ ಮುಂದುವರೆದ ಗದ್ದಲ, ಪ್ರತಿಭಟನೆ
ನವದೆಹಲಿ, ಜುಲೈ 21: ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ , ರಾಜ್ಯಸಭೆ, ಲೋಕಸಭೆಯಲ್ಲಿ ಕಳೆದ ಮೂರು ದಿನಗಳು ಪ್ರತಿಭಟನೆ, ಗಲಭೆ, ಗದ್ದಲಗಳಿಂದ ತುಂಬಿತ್ತು, ನಾಲ್ಕನೇ ದಿನವೂ ಅದೇ ಪರಿಸ್ಥಿತಿ ಮುಂದುವರೆದಿದ್ದು, ಪ್ರತಿಭಟನೆ, ಗದ್ದಲಗಳಿಗೆ ಅಧಿವೇಶನದ ನಾಲ್ಕನೇ ದಿನ ಸಾಕ್ಷಿಯಾಗಿದೆ.
ನ್ಯಾಷನಲ್ ಹೆರಾಲ್ಡ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿದ್ದನ್ನು ವಿರೋಧಿಸಿ ಹಲವು ವಿರೋಧ ಪಕ್ಷದ ಸದಸ್ಯರು ಸದನಕ್ಕೆ ಗೈರಾಗಿದ್ದರು. ಪ್ರತಿಪಕ್ಷಗಳ ಸದಸ್ಯರು ಸದನದಲ್ಲಿ ಉಪಸ್ಥಿತರಿರುವಾಗ ಭಾರತೀಯ ಅಂಟಾರ್ಕ್ಟಿಕ್ ಮಸೂದೆ, 2022 ಅನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಸರ್ಕಾರ ಮನವಿ ಮಾಡಿದ ನಂತರ ಲೋಕಸಭೆಯ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಏತನ್ಮಧ್ಯೆ, ಬೆಲೆ ಏರಿಕೆ ಮತ್ತು ದೈನಂದಿನ ಅಗತ್ಯ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಹೆಚ್ಚಳದ ವಿಷಯಗಳ ಕುರಿತು ಪ್ರತಿಪಕ್ಷಗಳ ಸದಸ್ಯರು ಗದ್ದಲವನ್ನು ಸೃಷ್ಟಿಸಿದ ನಂತರ ರಾಜ್ಯಸಭೆಯ ಕಲಾಪವನ್ನು ಮಧ್ಯಾಹ್ನ ಪೂರ್ವದ ಅವಧಿಯಲ್ಲಿ ಎರಡು ಬಾರಿ ಮುಂದೂಡಲಾಯಿತು. ನಾಲ್ಕನೇ ದಿನವೂ ಅಭಿವೃದ್ಧಿ, ಯೋಜನೆಗಳ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ.
1.59 ಲಕ್ಷ ಜನರಿಗೆ ಸರ್ಕಾರಿ ಉದ್ಯೋಗ
ಕಳೆದ ಎರಡು ವರ್ಷಗಳ ಕರೋನವೈರಸ್ ಸಾಂಕ್ರಾಮಿಕ ಅವಧಿಯಲ್ಲಿ ಸುಮಾರು 1.59 ಲಕ್ಷ ಜನರನ್ನು ಸರ್ಕಾರಿ ಉದ್ಯೋಗಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ರಾಜ್ಯಸಭೆಗೆ ಗುರುವಾರ ಮಾಹಿತಿ ನೀಡಲಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ), ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ) ಮತ್ತು ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಎಲ್ಲಾ ಕೋವಿಡ್-19 ಸುರಕ್ಷತಾ ಪ್ರೋಟೋಕಾಲ್ಗಳನ್ನು ಸರಿಯಾಗಿ ಅನುಸರಿಸಿ ತಮ್ಮ ಪರೀಕ್ಷೆಗಳನ್ನು ನಡೆಸುತ್ತಿವೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರ ನೀಡಿದ್ದಾರೆ.
ದೇಶಾದ್ಯಂತ 61 ಲಕ್ಷ ಮನೆ ನಿರ್ಮಾಣ
ಪ್ರಧಾನ ಮಂತ್ರಿ ಆವಾಸ್ ಯೋಜನೆ-ಅರ್ಬನ್ (ಪಿಎಂಎವೈ-ಯು), 'ಎಲ್ಲರಿಗೂ ವಸತಿ', ಯೂನಿಯನ್ ಹೌಸಿಂಗ್ ಮತ್ತು ಅರ್ಬನ್ ಯೋಜನೆಯಡಿ ಮಂಜೂರಾದ 1.22 ಕೋಟಿ ಮನೆಗಳಲ್ಲಿ ಒಟ್ಟು 61 ಲಕ್ಷ ಸರ್ವಋತು ಮನೆಗಳನ್ನು ನಿರ್ಮಿಸಲಾಗಿದೆ ಮತ್ತು ಫಲಾನುಭವಿಗಳಿಗೆ ವಿತರಿಸಲಾಗಿದೆ. ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ಸದನಕ್ಕೆ ಮಾಹಿತಿ ನೀಡಿದರು.
ಪಿಎಂಎವೈ-ಯು ಅಡಿಯಲ್ಲಿ, ವಸತಿ ರಹಿತ ಜನರು ಸೇರಿದಂತೆ ಅರ್ಹ ನಗರ ಫಲಾನುಭವಿಗಳಿಗೆ ಎಲ್ಲಾ ಹವಾಮಾನಕ್ಕೆ ಹೊಂದುವ ಮನೆಗಳನ್ನು ನೀಡಲು ಜೂನ್ 25, 2015 ರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (UTs) ಕೇಂದ್ರ ಸಹಾಯವನ್ನು ಒದಗಿಸಲಾಗಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸಲ್ಲಿಸಿದ ಯೋಜನೆಯ ಪ್ರಸ್ತಾವನೆಗಳನ್ನು ಆಧರಿಸಿ, ಮಿಷನ್ ಅವಧಿಯಲ್ಲಿ ಒಟ್ಟು 1.22 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದರು.
ಕೇಂದ್ರ ನಿಯೋಜನೆಗೆ 397 ಐಎಎಸ್ ಅಧಿಕಾರಿಗಳ ನೇಮಕ
563 ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳು ಕೇಂದ್ರ ನಿಯೋಜನೆಗೆ ಲಭ್ಯವಿದ್ದು, ಕಳೆದ ಐದು ವರ್ಷಗಳಲ್ಲಿ ಕೇವಲ 397 ಮಂದಿ ಮಾತ್ರ ನೇಮಕವಾಗಿದ್ದಾರೆ ಎಂದು ಸರ್ಕಾರ ಗುರುವಾರ ತಿಳಿಸಿದೆ.
2021 ರಲ್ಲಿ124 ಐಎಎಸ್ ಅಧಿಕಾರಿಗಳು, 2020 ರಲ್ಲಿ 112, 2019 ರಲ್ಲಿ 127, 2018 ರಲ್ಲಿ 101 ಮತ್ತು 2017 ರಲ್ಲಿ 99 (ಒಟ್ಟು 563) ಕೇಂದ್ರದ ನಿಯೋಜನೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಈ ಪೈಕಿ 2021ರಲ್ಲಿ 71, 2020ರಲ್ಲಿ 69, 2019ರಲ್ಲಿ 101, 2018ರಲ್ಲಿ 71 ಮತ್ತು 2017ರಲ್ಲಿ 85 (ಒಟ್ಟು 397) ಐಎಎಸ್ ಅಧಿಕಾರಿಗಳನ್ನು ಕೇಂದ್ರ ನಿಯೋಜನೆ ಮೇಲೆ ನೇಮಿಸಲಾಗಿದೆ.
ಕಳೆದ ಐದು ವರ್ಷಗಳಲ್ಲಿ ಒಟ್ಟು 147 ಐಎಎಸ್ ಅಧಿಕಾರಿಗಳನ್ನು ಪೋಷಕ ಕೇಡರ್, ವೈಯಕ್ತಿಕ ಆಧಾರಗಳು ಮತ್ತು ಆಡಳಿತಾತ್ಮಕ ಆಧಾರದ ಮೇಲೆ ಬಡ್ತಿಯ ಲಾಭವನ್ನು ಪಡೆಯಲು ವಿವಿಧ ಆಧಾರದ ಮೇಲೆ ಕೇಂದ್ರ ನಿಯೋಜನೆಯಿಂದ ವಾಪಸ್ ಕಳುಹಿಸಲಾಗಿದೆ ಎಂದು ಸಿಂಗ್ ಹೇಳಿದರು.
ದೇಶದಲ್ಲಿ 5,651 ಕೆಜಿ ಹೆರಾಯಿನ್ ವಶ
ಡ್ರಗ್ ಕಾನೂನು ಜಾರಿ ಸಂಸ್ಥೆಗಳು ಕಳೆದ ವರ್ಷ ಗಡಿ ರಾಜ್ಯಗಳಲ್ಲಿ 5,651.68 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಂಡಿವೆ ಎಂದು ಅಧಿವೇಶನದಲ್ಲಿ ಸರ್ಕಾರವು ಸಂಸತ್ತಿಗೆ ತಿಳಿಸಿದೆ. 2021 ರಲ್ಲಿ 3,335.17 ಕಿಲೋಗ್ರಾಂಗಳಷ್ಟು ಡ್ರಗ್ ವಶಪಡಿಸಿಕೊಂಡಿರುವ ಗುಜರಾತ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಸರ್ಕಾರ ತಿಳಿಸಿದೆ.
2020 ಮತ್ತು 2021 ರಲ್ಲಿ ಅಂತರರಾಷ್ಟ್ರೀಯ ಗಡಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ವಿವಿಧ ಡ್ರಗ್ ಕಾನೂನು ಜಾರಿ ಸಂಸ್ಥೆಗಳು ವಶಪಡಿಸಿಕೊಂಡ ಡ್ರಗ್ ಬಗ್ಗೆ ವಿವರವನ್ನು ಸಂಸತ್ತಿನ ಸದಸ್ಯ (ಎಂಪಿ) ಅನಿಲ್ ಅಗರವಾಲ್, ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಲಿಖಿತ ರೂಪದಲ್ಲಿ ನೀಡಿದರು. 18 ರಾಜ್ಯಗಳಿಂದ 2021 ರಲ್ಲಿ 5,651.68 ಕಿಲೋಗ್ರಾಂಗಳಷ್ಟು ವಶಪಡಿಸಿಕೊಂಡರೆ, 2020 ರಲ್ಲಿ 17 ರಾಜ್ಯಗಳಿಂದ ಸುಮಾರು 3,285 ಕಿಲೋಗ್ರಾಂಗಳಷ್ಟು ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.