ಸಂಸದರ ಅಮಾನತು: ಒಂದು ದಿನ ಏನೂ ತಿನ್ನೋದಿಲ್ಲ ಎಂದ ಶರದ್ ಪವಾರ್
ನವದೆಹಲಿ, ಸೆಪ್ಟೆಂಬರ್ 22: ಕೃಷಿ ಸಂಬಂಧಿತ ಮಸೂದೆಗಳನ್ನು ವಿರೋಧಿಸುತ್ತಿರುವ ವಿರೋಧಪಕ್ಷಗಳ ಸದಸ್ಯರಿಗೆ ಬೆಂಬಲ ನೀಡಲು ಹಾಗೂ ತಮ್ಮ ಎಂಟು ಮಂದಿ ಸಹೋದ್ಯೋಗಿಗಳ ಅಮಾನತನ್ನು ವಿರೋಧಿಸಿ ಒಂದು ದಿನ ಉಪವಾಸ ನಡೆಸುವುದಾಗಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮಂಗಳವಾರ ತಿಳಿಸಿದ್ದಾರೆ.
ಕಾಂಗ್ರೆಸ್ ಹಾಗೂ ಇತರೆ ವಿರೋಧಪಕ್ಷಗಳು ಸಂಸದರ ಅಮಾನತ್ತನ್ನು ಖಂಡಿಸಿ ಉಳಿದ ಕಲಾಪಗಳಿಗೆ ಹಾಜರಾಗುವುದನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಸದನದಲ್ಲಿ ವಿಪಕ್ಷ ಸದಸ್ಯರ ವರ್ತನೆ ವಿರೋಧಿಸಿ ಪ್ರತಿಭಟನಾತ್ಮಕವಾಗಿ 24 ಗಂಟೆ ನಿರಶನ ಮಾಡುವುದಾಗಿ ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್ ಸಿಂಗ್ ಹೇಳಿದ ಬಳಿಕ ಶರದ್ ಪವಾರ್ ಈ ಘೋಷಣೆ ಮಾಡಿದ್ದಾರೆ.
'ಪ್ರತಿಭಟನಾನಿರತ ಸದಸ್ಯರಿಗೆ ಬೆಂಬಲ ಸೂಚಿಸುವ ಸಲುವಾಗಿ ನಾನು ಇಂದು ಏನನ್ನೂ ತಿನ್ನುವುದಿಲ್ಲ' ಎಂದು ರಾಜ್ಯಸಭಾ ಸಂಸದರೂ ಆಗಿರುವ ಶರದ್ ಪವಾರ್ ತಿಳಿಸಿದ್ದಾರೆ.

ಕೃಷಿ ಸಂಬಂಧಿತ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸುವಾಗ ಉಪಾಧ್ಯಕ್ಷರೊಂದಿಗೆ ಅಶಿಸ್ತಿನಿಂದ ವರ್ತಿಸಿದ್ದಕ್ಕಾಗಿ ಎಂಟು ಸಂಸದರನ್ನು ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅಮಾನತುಗೊಳಿಸಿದ್ದರು. ಇದರ ವಿರುದ್ಧ ಅಮಾನತುಗೊಂಡ ಸಂಸದರು ಅಹೋರಾತ್ರಿ ಧರಣಿ ನಡೆಸಿದ್ದರು. ಭಾನುವಾರ ನಡೆದ ಘಟನೆಯಿಂದ ತೀವ್ರ ನೋವಾಗಿದೆ. ಅದರಿಂದಾಗಿ ಒಂದು ದಿನ ಉಪವಾಸ ನಡೆಸುವುದಾಗಿ ಉಪಾಧ್ಯಕ್ಷ ಹರಿವಂಶ್ ಸಿಂಗ್ ತಿಳಿಸಿದ್ದಾರೆ.












Click it and Unblock the Notifications