300 ಕ್ಕೂ ಹೆಚ್ಚು ದೆಹಲಿ ಪೊಲೀಸ್ ಸಿಬ್ಬಂದಿಗೆ ಕೊರೊನಾ
ನವದೆಹಲಿ ಜನವರಿ 10: ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚುಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು, ವೈದ್ಯರಿಗೆ ಕೊರೊನಾ ಸೋಂಕು ಹರಡಿಕೊಳ್ಳುತ್ತಿದೆ. ಈಗ ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ಹೆಚ್ಚುವರಿ ಆಯುಕ್ತ ಚಿನ್ಮೋಯ್ ಬಿಸ್ವಾಲ್ ಸೇರಿದಂತೆ 300 ಕ್ಕೂ ಹೆಚ್ಚು ದೆಹಲಿ ಪೊಲೀಸ್ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ತಡೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಲವಾರು ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಂಡರೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನ ಕಳೆದಂತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,79,723 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 7,23,619 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಪಾಸಿಟಿವಿಟಿ ದರ ಶೇ.13.29ಕ್ಕೆ ಏರಿಕೆಯಾಗಿದೆ. ಇನ್ನೂ ದೇಶದಲ್ಲಿ ಹೊಸದಾಗಿ 4,033 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ.
ಪೊಲೀಸ್ ಪ್ರಧಾನ ಕಚೇರಿ ಸೇರಿದಂತೆ ಎಲ್ಲಾ ಘಟಕಗಳು ಮತ್ತು ಎಲ್ಲಾ ಪೊಲೀಸ್ ಠಾಣೆಗಳಲ್ಲಿನ ಹಲವಾರು ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ದೆಹಲಿಯಲ್ಲಿ ಪ್ರಕರಣಗಳು ಭಾರೀ ಏರಿಕೆಗೆ ಸಾಕ್ಷಿಯಾಗುತ್ತಿವೆ. ಕೊರೊನಾ ಉಲ್ಬಣವನ್ನು ತಗ್ಗಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ದೆಹಲಿಯಲ್ಲಿ 55 ಗಂಟೆಗಳ ವಾರಾಂತ್ಯದ ಕರ್ಫ್ಯೂ ಇತ್ತು. ಅದು ಇಂದು ಬೆಳಗ್ಗೆ 5 ಗಂಟೆಗೆ ಕೊನೆಗೊಂಡಿತು.
ನಿಯಮ ಉಲ್ಲಂಘಿಸುವವರನ್ನು ತಡೆಯಲು ಪೊಲೀಸರು ಹಲವು ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ಅಂತರ-ರಾಜ್ಯ ಬಸ್ ನಿಲ್ದಾಣಗಳಿಂದ ಬರುವ ಅಥವಾ ಹೋಗುವವರಿಗೆ ಮಾತ್ರ ತೆರಳಲು ಅವಕಾಶವಿತ್ತು. ಅಟೆಂಡರ್ಗಳ ಜೊತೆಗೆ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳನ್ನು ಪಡೆಯಲು ಗರ್ಭಿಣಿಯರು ಮತ್ತು ರೋಗಿಗಳಿಗೆ ರಾತ್ರಿ ಕರ್ಫ್ಯೂ ಅನ್ನು ಸಹ ಸಡಿಲಗೊಳಿಸಲಾಗಿದೆ. ರಾತ್ರಿ ಕರ್ಫ್ಯೂ ಸಮಯದಲ್ಲಿ ದಿನಸಿ, ವೈದ್ಯಕೀಯ ಉಪಕರಣಗಳು ಮತ್ತು ಔಷಧಿಗಳಂತಹ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿಸಲಾಗಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಮತ್ತಷ್ಟು ನಿರ್ಬಂಧಗಳ ಕುರಿತು ಚರ್ಚಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇಂದು ಮತ್ತೊಂದು ಸಭೆಯನ್ನು ನಡೆಸಲಿದೆ.

ಕೊರೊನಾ ಮೂರನೇ ಅಲೆಯಲ್ಲಿ ದೇಶಾದ್ಯಂತ ಸಾವಿರಕ್ಕೂ ಅಧಿಕ ವೈದ್ಯರಿಗೆ ಕೊರೊನಾ ಸೋಂಕು ತಗುಲಿರುವುದು ಮೂರು ದಿನಗಳ ಹಿಂದೆ ವರದಿಯಾಗಿತ್ತು. ಮಹಾರಾಷ್ಟ್ರದಲ್ಲಿ ಕೇವಲ ಮೂರು ದಿನಗಳಲ್ಲಿ 290ಕ್ಕೂ ಅಧಿಕ ವೈದ್ಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ದೆಹಲಿದಲ್ಲಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ 120 ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ. ಪಂಜಾಬ್ ನಲ್ಲಿ ಚಂಡೀಗಢದಲ್ಲಿ ಕೇವಲ ಎರಡು ದಿನಗಳಲ್ಲಿ ಪಿಜಿಐನ 196 ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ. ಜಾರ್ಖಂಡ್ ನಲ್ಲಿ ರಾಂಚಿಯಲ್ಲಿ 180ಕ್ಕೂ ಅಧಿಕ ವೈದ್ಯರಿಗೆ ಕೊರೊನಾ ಸೋಂಕು ತಗುಲಿರುವುದು ತಿಳಿದುಬಂದಿದೆ. ಬಿಹಾರದಲ್ಲಿ ಪಾಟ್ನಾದ ಎನ್ಎಂಸಿಎಚ್ನ 200 ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಪಶ್ಚಿಮ ಬಂಗಾಳದಲ್ಲಿ ಕೋಲ್ಕತ್ತಾದಲ್ಲಿ 70ಕ್ಕೂ ಅಧಿಕ ನರ್ಸ್ ಹಾಗೂ ವೈದ್ಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಉತ್ತರ ಪ್ರದೇಶ: ಮೆದಾಂತಾ ಆಸ್ಪತ್ರೆಯಲ್ಲಿ 25 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.
ಇಂದಿನಿಂದ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಮುನ್ನೆಚ್ಚರಿಕೆಯ ಮೂರನೇ ಡೋಸ್ ಲಸಿಕೆಗಳನ್ನು ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಮತ್ತು ಇಮ್ಯುನೊ-ರಾಜಿ ಹೊಂದಿರುವ ಹಿರಿಯರಿಗೆ ನೀಡಲಾಗುವುದು. ಮುನ್ನೆಚ್ಚರಿಕೆಯ ಲಸಿಕೆ ಡೋಸ್ಗಳಿಗೆ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಅರ್ಹರು ನೇರವಾಗಿ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬಹುದು ಅಥವಾ ಯಾವುದೇ ಲಸಿಕೆ ಕೇಂದ್ರಕ್ಕೆ ಹೋಗಬಹುದು. ಎಲ್ಲಾ ವಯಸ್ಕರಿಗೆ ಬೂಸ್ಟರ್ ಡೋಸ್ಗಳ ಕುರಿತು ಇನ್ನೂ ಯಾವುದೇ ನಿರ್ಧಾರವಿಲ್ಲ.












Click it and Unblock the Notifications