ಮೋದಿಯನ್ನು ಇಳಿಸುವುದೇ ವಿರೋಧಿಗಳ ಅಜೆಂಡಾ : ಆರ್ಎಸ್ಪಿ ವ್ಯಂಗ್ಯ
ನವದೆಹಲಿ, ಜನವರಿ 19 : "ಕೊಲ್ಕತಾದಲ್ಲಿ ಬಿಜೆಪಿ ವಿರೋಧಿ ನಾಯಕರು ಒಬ್ಬರ ನಂತರ ಒಬ್ಬರು ಅಬ್ಬರಿಸಿರುವುದನ್ನು ನೋಡಿದರೆ, ಅವರ ಗುರಿ ಒಂದೇ, ನರೇಂದ್ರ ಮೋದಿಯವರನ್ನು ಪ್ರಧಾನಿ ಸ್ಥಾನದಿಂದ ತೆಗೆಯುವುದು" ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಟೀಕಿಸಿದ್ದಾರೆ.
ನರೇಂದ್ರ ಮೋದಿಯವರ ವಿರುದ್ಧ ಎಲ್ಲಾ ನಾಯಕರು 'ಯುನೈಟೆಡ್ ಇಂಡಿಯಾ ರ್ಯಾಲಿ'ಯಲ್ಲಿ ಆಡಿರುವುದನ್ನು ಗಮನಿಸಿದರೆ, ಅವರ್ಯಾರಿಗೂ ದೇಶದ ಅಭಿವೃದ್ಧಿಯ ಬಗ್ಗೆ ಯಾವುದೇ ನೀಲನಕ್ಷೆ ಇದ್ದಂತಿಲ್ಲ. ಒಬ್ಬರ ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗದವರು ಈಗ ಎಲ್ಲರೂ ಒಟ್ಟಿಗೇ ಬಂದಿದ್ದಾರೆ ಎಂದು ಕೇಂದ್ರ ಕಾನೂನು, ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಅವರು ವಾಗ್ದಾಳಿ ಮಾಡಿದರು.
ಅವರ ಭಾಷಣದಲ್ಲಿ ಯಾರೋ ಒಬ್ಬರು, ನಮ್ಮ ನಾಯಕರನ್ನು ದೇಶದ ಜನರು ಆರಿಸುತ್ತಾರೆ ಎಂದು ತಮಾಷೆಯಾಗಿ ಹೇಳಿದರು. ಆರೇ, ಭಾರತದ ಜನರಿಂದ ಆಯ್ಕೆಯಾಗಬೇಕಿದ್ದರೆ ನಿಮ್ಮ ನಾಯಕ ಯಾರು ಎಂದು ಮೊದಲು ಹೇಳಿ. ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಮಾಯಾವತಿ ಅಥವಾ ಪ್ರಾದೇಶಿಕ ಪಕ್ಷದ ನಾಯಕರೂ ಇದ್ದಾರೆ. ಈ ಎಲ್ಲರಿಗೂ ಪ್ರಧಾನಿಯಾಗುವ ಹೆಬ್ಬಯಕೆ ಇದೆ ಎಂದು ವ್ಯಂಗ್ಯವಾಗಿ ರವಿ ಶಂಕರ್ ಪ್ರಸಾದ್ ಹೇಳಿದರು.

ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರವನ್ನು ಉರುಳಿಸಬೇಕು ಎಂಬ ಉದ್ದೇಶದಿಂದ ಕೋಲ್ಕತಾದಲ್ಲಿ ಇಪ್ಪತ್ತಕ್ಕೂ ಹೆಚ್ಚು ಪಕ್ಷಗಳು ಒಟ್ಟಿಗೆ ಸೇರಿದ್ದವು. ಈ ಮಹಾಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ನರೇಂದ್ರ ಮೋದಿ ಸರಕಾರದ ಡೇಟ್ ಎಕ್ಸ್ ಪೈರ್ ಆಗಿದೆ. ವಿರೋಧ ಪಕ್ಷಗಳ ಸಂಯುಕ್ತ ಕೂಟ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿದೆ ಎಂದು ಘೋಷಿಸಿದರು.
ಬ್ರಿಗೇಡ್ ಪರೇಡ್ ಗ್ರೌಂಡ್ ನಲ್ಲಿ ನಡೆದ ಆಯೋಜಿಸಲಾಗಿದ್ದ ಸಭೆಯಲ್ಲಿ, ಎಲ್ಲ ವಿರೋಧ ಪಕ್ಷಗಳೊಂದಿಗೆ ಒಟ್ಟಿಗೆ ಕೆಲಸ ಮಾಡುವೆ. ಮುಂದಿನ ಪ್ರಧಾನಿ ಯಾರಾಗಬೇಕೆಂದು ಚುನಾವಣೆಯ ನಂತರ ನಿರ್ಧರಿಸಲಾಗುವುದು ಎಂದು ಅವರು ನುಡಿದಿದ್ದರು.












Click it and Unblock the Notifications