ಎನ್ಆರ್ಸಿಗೆ 'ನೋ' ಎನ್ನಿ: ರಾಹುಲ್ ಗಾಂಧಿಗೆ ಪ್ರಶಾಂತ್ ಕಿಶೋರ್ ಸಲಹೆ
ನವದೆಹಲಿ, ಡಿಸೆಂಬರ್ 24: ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಜಾರಿಗೊಳಿಸುವುದಿಲ್ಲ ಎಂದು 'ಅಧಿಕೃತ'ವಾಗಿ ಘೋಷಣೆ ಮಾಡುವಂತೆ ಚುನಾವಣಾ ತಂತ್ರ ಪರಿಣತ ಪ್ರಶಾಂತ್ ಕಿಶೋರ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಲಹೆ ನೀಡಿದ್ದಾರೆ.
ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ ಜೆಡಿಯುದ ಉಪಾಧ್ಯಕ್ಷರಾಗಿರುವ ಪ್ರಶಾಂತ್ ಕಿಶೋರ್, ಸಿಎಎ ಮತ್ತು ಎನ್ಆರ್ಸಿ ವಿರುದ್ಧದ ನಾಗರಿಕರ ಚಳವಳಿಗೆ ಕೈಜೋಡಿಸಿರುವುದಕ್ಕೆ ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
'ಸಿಎಎ ಮತ್ತು ಎನ್ಆರ್ಸಿ ವಿರುದ್ಧದ ನಾಗರಿಕರ ಚಳವಳಿಗೆ ಸೇರಿಕೊಂಡಿರುವುದಕ್ಕೆ ರಾಹುಲ್ ಗಾಂಧಿ ಅವರಿಗೆ ಕೃತಜ್ಞತೆಗಳು. ಅದರೆ ನೀವು ತಿಳಿದಿರುವಂತೆ ಸಾರ್ವಜನಿಕ ಪ್ರತಿಭಟನೆಗಳಾಚೆ ಎನ್ಆರ್ಸಿಯನ್ನು ನಿಲ್ಲಿಸಲು ಅದಕ್ಕೆ ನಾವು 'ಇಲ್ಲ' ಎಂದು ಹೇಳುವ ಅಗತ್ಯವಿದೆ. ಕಾಂಗ್ರೆಸ್ ಪಕ್ಷದ ಮೇಲೆ ನಿಮ್ಮ ಪ್ರಭಾವ ಬೀರುವ ಮೂಲಕ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಎನ್ಆರ್ಸಿ ಜಾರಿಯಾಗುವುದಿಲ್ಲ ಎಂದು ಅಧಿಕೃತವಾಗಿ ಘೋಷಣೆ ಮಾಡುವಂತೆ ಕೋರುತ್ತೇನೆ' ಎಂದು ಹೇಳಿದ್ದಾರೆ.

'ಕಾಂಗ್ರೆಸ್ ಮುಖ್ಯಮಂತ್ರಿಗಳು ಏನು ಹೇಳಿದ್ದಾರೆ ಎಂಬುದನ್ನು ನನಗೆ ತಿಳಿಸಲು ಪ್ರಯತ್ನಿಸುವ ಬದಲು, ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಎನ್ಆರ್ಸಿ ಜಾರಿ ಮಾಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರು ಅಧಿಕೃತವಾಗಿ ನೀಡುವ ಹೇಳಿಕೆಯನ್ನು ದಯವಿಟ್ಟು ಹಂಚಿಕೊಳ್ಳಿ' ಎಂದು ಟ್ವೀಟ್ ಮಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಸಂಸತ್ನಲ್ಲಿ ಹೇಳಿರುವಂತೆ ಎನ್ಆರ್ಸಿಯನ್ನು ಜಾರಿಗೆ ತರುವ ಪ್ರಯತ್ನವನ್ನು ರಾಜ್ಯಗಳು ಜಾರಿ ಮಾಡಲು ನಿರಾಕರಿಸುವ ಮೂಲಕ ತಡೆಯಬಹುದು. ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಮತ ಹಾಕುವುದರಿಂದ ಅದನ್ನು ತಡೆಯಲಾಗಲಿಲ್ಲ. ಆದರೆ ಎನ್ಆರ್ಸಿಗೆ 'ನೋ' ಎನ್ನುವುದು ಅದನ್ನು ತಡೆಯಬಲ್ಲದು. ಹೀಗಾಗಿ ಗೊಂದಲಕ್ಕೆ ಒಳಗಾಗಬೇಡಿ ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.












Click it and Unblock the Notifications