ದೆಹಲಿಯಲ್ಲಿ ಮತ್ತೆ ಜಾರಿಗೆ ಬರಲಿದೆ ಸಮ-ಬೆಸ ಪ್ರಯೋಗ!
ನವದೆಹಲಿ, ಅಕ್ಟೋಬರ್ 26: ರಾಜಧಾನಿ ದೆಹಲಿಗೆ ಮಾಲಿನ್ಯದ ಭೀತಿ ಮತ್ತೆ ಆರಂಭವಾಗಿದೆ. ಅದಕ್ಕೆಂದೇ ಮತ್ತೊಮ್ಮೆ ಸಮ-ಬೆಸ ಪದ್ಧತಿಯನ್ನು ಜಾರಿಗೆ ತರಲು ಇಲ್ಲಿನ ಸರ್ಕಾರ ಸಿದ್ಧತೆ ನಡೆಸುತ್ತಿದೆ.
ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ನಿಯಂತ್ರಣಕ್ಕೆ ತರಲು ತುರ್ತು ಕ್ರಮ ಕೈಗೊಳ್ಳಬೇಕಿದೆ. ಅದಕ್ಕೆ ತಕ್ಷಣಕ್ಕೆ ಹೊಳೆಯುವ ಉಪಾಯವೆಂದರೆ ಸಮ ಮತ್ತು ಬೆಸ ಪದ್ಧತಿಯನ್ನು ಮತ್ತೆ ಜಾರಿಗೆ ತರುವುದು.

ಕಳೆದ ವರ್ಷ ಮಾಲಿನ್ಯವನ್ನು ಹತೋಟಿಗೆ ತರುವುದಕ್ಕಾಗಿ ಇಲ್ಲಿನ ಸರ್ಕಾರ ಒಂದು ದಿನ ಸಮ ಮತ್ತು ಇನ್ನೊಂದು ದಿನ ಬೆಸ ಸಂಖ್ಯೆ ಹೊಂದಿರುವ ವಾಹನಗಳನ್ನು ಚಲಾಯಿಸುವಂತೆ ನಿಯಮ ಜಾರಿಗೊಳಿಸಿತ್ತು. ಇದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನೂ, ಇದರೊಟ್ಟಿಗೆ ಮಾಲಿನ್ಯವನ್ನೂ ನಿಯಂತ್ರಿಸಬಹುದು ಎಂಬುದು ಸರ್ಕಾರದ ಯೋಚನೆಯಾಗಿತ್ತು.
ಆದರೆ ಈ ಸಂಬಂಧ ದೇಶದಾದ್ಯಂತ ಸಾಕಷ್ಟು ಟೀಕೆಗಳೂ ಹುಟ್ಟಿಕೊಂಡಿದ್ದವು. ಆದರೆ ಮಾಲಿನ್ಯ ನಿಯಂತ್ರಣಕ್ಕೆ ಬೇರೆ ದಾರಿ ಇಲ್ಲದ ಕಾರಣ ಇದೇ ಪದ್ಧತಿಯನ್ನು ಮತ್ತೊಮ್ಮೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ. ಮಾಲಿನ್ಯ ನಿಯಂತ್ರಣದ ಉದ್ದೇಶವನ್ನಿಟ್ಟುಕೊಂಡೇ ಈ ಬಾರಿಯ ದೀಪಾವಳಿಯಲ್ಲೂ ರಾಜಧಾನಿಯಲ್ಲಿ ಪಟಾಕಿಯನ್ನೂ ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications