ಜೀವನ ಪ್ರೀತಿ ಕಲಿಸಿದ ಖುಷ್ವಂತ್ ಅಜ್ಜ ಇನ್ನಿಲ್ಲ
ನವದೆಹಲಿ, ಮಾ.20: ಹಿರಿಯ ಪತ್ರಕರ್ತ, ಅಂಕಣಕಾರ, ಜನಪ್ರಿಯ ಲೇಖಕ ಖುಷ್ವಂತ್ ಸಿಂಗ್ ಅವರು ಗುರುವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು. ಭಾರತದ ಅಗ್ರಗಣ್ಯ ಅಂಕಣಕಾರರಾಗಿ ಹಲವಾರು ಪತ್ರಕರ್ತರಿಗೆ ಸ್ಪೂರ್ತಿಯಾಗಿದ್ದರು. ಮೃತರ ಅಂತ್ಯಕ್ರಿಯೆಯನ್ನು ಲೋಧಿಯಲ್ಲಿ ಗುರುವಾರ ಸಂಜೆ ನೆರವೇರಿಸಲಾಗುವುದು ಎಂದು ಅವರ ಪುತ್ರ ರಾಹುಲ್ ಸಿಂಗ್ ಹೇಳಿದ್ದಾರೆ. ಪುತ್ರ ರಾಹುಲ್ ಹಾಗೂ ಪುತ್ರಿ ಮಾಲಾ ಅವರನ್ನು ಖುಷ್ವಂತ್ ಅಗಲಿದ್ದಾರೆ.
ಪಂಜಾಬಿನ ಹದಲಿ ಗ್ರಾಮ(ಈಗ ಪಾಕಿಸ್ತಾನದಲ್ಲಿದೆ)ದಲ್ಲಿ ಫೆಬ್ರವರಿ 2,1915 ರಂದು ಜನಿಸಿದ ಖುಷ್ವಂತ್ ಸಿಂಗ್ ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಟೈಮ್ಸ್ ಆಫ್ ಇಂಡಿಯ' ಪತ್ರಿಕೆಯ ವಾರ ಪತ್ರಿಕೆ, 'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕೆಲಸಮಾಡಿದ್ದಾರೆ. ಮೊನಚಾದ ಹಾಸ್ಯ, ಪೋಲಿತನ, ಜೀವನ ಉತ್ಸಾಹ, ಸಾಮಾಜಿಕ ಕಳಕಳಿ ಅವರ ಲೇಖನಗಳಲ್ಲಿ ಎದ್ದು ಕಾಣುತ್ತಿತ್ತು.
ಟ್ರೇನ್ ಟು ಪಾಕಿಸ್ತಾನ್, ದಿಲ್ಲಿ, ದಿ ಕಂಪೆನಿ ಆಫ್ ವುಮೆನ್ ಅವರ ಪ್ರಮುಖ ಕೃತಿಗಳು. ಇವರ ಅನೇಕ ಕೃತಿಗಳನ್ನು ಪತ್ರಕರ್ತ ರವಿ ಬೆಳೆಗೆರೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

95ರ ಇಳಿ ವಯಸ್ಸಿನಲ್ಲೂ 'ದಿ ಸನ್ ಸೆಟ್ ಕ್ಲಬ್' ಎಂಬ ಕೃತಿ ರಚಿಸಿ ಅಚ್ಚರಿ ಮೂಡಿಸಿದ್ದರು. ಎ ಹಿಸ್ಟರಿ ಆಫ್ ದಿ ಸಿಖ್ಸ್ ಸೇರಿದಂತೆ ಸಿಖ್ ಸಮುದಾಯದ ಸಂಸ್ಕೃತಿಯನ್ನು ವಿಶ್ವಕ್ಕೆ ಖುಷ್ವಂತ್ ಪರಿಚಯಿಸಿದರು. ಇದರ ಜತೆಗೆ ಉರ್ದು ಕವನಗಳು ಶಾಯಿರಿಗಳು ಖುಷ್ವಂತ್ ಅವರಿಂದ ಕೇಳಲು ಜನ ಮುಗಿ ಬೀಳುತ್ತಿದ್ದರು.
ಟ್ರೂಥ್ ಲವ್ ಅಂಡ್ ಎ ಲಿಟಲ್ ಮಾಲೈಸ್ ಎಂಬ ಹೆಸರಿನಲ್ಲಿ ಅವರು ಬರೆದ ಆತ್ಮಕಥನವನ್ನು 2002ರಲ್ಲಿ ಪೆಂಗ್ವಿನ್ ಪ್ರಕಾಶನ ಹೊರತಂದಿತ್ತು.
1980 ರಿಂದ 1986ರ ತನಕ ಖುಷ್ವಂತ್ ಸಿಂಗ್ ಸಂಸತ್ ಸದಸ್ಯರಾಗಿದ್ದರು. 1974ರಲ್ಲಿ ಸಿಕ್ಕ ಪದ್ಮಭೂಷಣ್ ಪ್ರಶಸ್ತಿಯನ್ನು 1984ರಲ್ಲಿ ಸರ್ಕಾರಕ್ಕೆ ಹಿಂತಿರುಗಿಸಿದ್ದರು. ಸಿಖ್ಖರ ಪವಿತ್ರ ಚಿನ್ನದ ದೇಗುಲವನ್ನು ಸರ್ಕಾರ ವಶಪಡಿಸಿಕೊಂಡಿದ್ದನ್ನು ಖಂಡಿಸಿ ಈ ರೀತಿ ನಡೆದುಕೊಂಡಿದ್ದರು.
2006ರಲ್ಲಿ ಪಂಜಾಬ್ ರತನ್ ಪ್ರಶಸ್ತಿ, 2007ರಲ್ಲಿ ಪದ್ಮ ವಿಭೂಷಣ್ ಪ್ರಶಸ್ತಿ, 2010ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಪಡೆದುಕೊಂಡಿದ್ದರು. ಒಟ್ಟಾರೆ 50ರ ದಶಕದಲ್ಲಿ ಮೊದಲ ಪುಸ್ತಕ ಹೊರ ಬಂದ ಖುಷಿಯಂತೆ ಕೊನೆಯುಸಿರಿರುವ ತನಕವೂ ಖುಷ್ವಂತ್ ಸಿಂಗ್ ಲವಲವಿಕೆಯ ಜೀವನ ನಡೆಸಿದ ಅಪೂರ್ವ ವ್ಯಕ್ತಿಯಾಗಿದ್ದರು.












Click it and Unblock the Notifications