ಸುಳ್ಳಲ್ಲ, ಎಎಪಿ ಇನ್ನು ಮೋದಿಯವರನ್ನು ಟೀಕಿಸೋಲ್ಲ!
ಆಮ್ ಆದ್ಮಿ ಪಕ್ಷಕ್ಕೆ ಸೋತ ಮೇಲೆ ಬುದ್ಧಿ ಬಂದಿರುವಹಾಗಿದೆ! ಇನ್ನು ಮುಂದೆ ಪ್ರಧಾನಿ ಮೋದಿಯವರನ್ನು ಟೀಕಿಸಬಾರದೆಂದು ಪಕ್ಷದ ನಾಯಕರು ತೀರ್ಮಾನಿಸಿದ್ದಾರೆ.
ನವ ದೆಹಲಿ, ಏಪ್ರಿಲ್ 15: ದೆಹಲಿಯಲ್ಲಿ ಬಿಸಲು ಹೆಚ್ಚಾದರೂ, ಚಳಿ ಹೆಚ್ಚಾದರೂ, ಟ್ರಾಫಿಕ್ ಜಾಸ್ತಿಯಾದರೂ... ಪ್ರಧಾನಿ ಮೋದಿಯವರ ಮೇಲೇ ಗೂಬೆ ಕೂರಿಸಲು ಸಿದ್ಧವಾಗುತ್ತಿದ್ದ ಆಮ್ ಆದ್ಮಿ ಪಕ್ಷದ ಮುಖಂಡರು ಇದ್ದಕ್ಕಿದ್ದಂತೆ ತಣ್ಣಗಾಗಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ಯಾವುದೇ ಕಾರಣಕ್ಕೂ ಮೋದಿಯವರನ್ನು ಟೀಕಿಸಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ, ಆಮ್ ಆದ್ಮಿ ಪಕ್ಷಕ್ಕೆ ಸೋತ ಮೇಲೆ ಬುದ್ಧಿ ಬಂದಿರುವಹಾಗಿದೆ! ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಅವಕಾಶ ಸಿಕ್ಕಾಗಲೆಲ್ಲ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಎಎಪಿ ಸದಸ್ಯರು ಮೋದಿಯವರನ್ನು ಟೀಕಿಸಿದ್ದರು. ದೆಹಲಿಯಲ್ಲಿ ಎಎಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿ ವೋಟು ಕೇಳುವ ಬದಲು ಕೇಂದ್ರ ಸರ್ಕಾರವನ್ನು ದೂರಿ ಮತ ಪಡೆಯಲು ಹೊರಟಿದ್ದೇ ಎಎಪಿಗೆ ಮುಳುವಾಯಿತು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.[ದೆಹಲಿ ಉಪಚುನಾವಣೆ: ಠೇವಣಿ ಕಳೆದುಕೊಂಡ ಆಮ್ ಆದ್ಮಿ ಪಕ್ಷ]
ಬಹುಶಃ ಇವೆಲ್ಲವೂ ಎಎಪಿ ನಾಯಕರಿಗೂ ಸತ್ಯ ಎನ್ನಿಸಿರಲಿಕ್ಕೆ ಸಾಕು! ಅದಕ್ಕೆಂದೇ ಇನ್ನುಮುಂದೆ ಮೋದಿಯವರನ್ನು ದೂರುವುದಿಲ್ಲ, ತಮ್ಮ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆಯೇ ಮತ ಕೇಳಬೇಕೆಂದು ಎಎಪಿ ನಾಯಕರು ತೀರ್ಮಾನಿಸಿದ್ದಾರೆ.
ರಜೌರಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆಯೇ, ಇದು ಏಪ್ರಿಲ್ 23 ರಂದು ನಡೆಯಲಿರುವ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಗೆ ದಿಕ್ಸೂಚಿ ಎಂದು ಬಿಜೆಪಿ ನಾಯಕರು ಹೇಳಿದ್ದರು. ಗೆಲುವಿನ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಎಎಪಿಗೆ ಉಪಚುನಾವಣೆಯ ಸೋಲು ಮುಖಭಂಗವನ್ನುಂಟುಮಾಡಿದ್ದು, ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವ ಸವಾಲು ಎದುರಾಗಿದೆ.[c]
ಅದಕ್ಕೆಂದೇ ಸ್ವಲ್ಪ ದಿನ ತಾಳ್ಮೆಯಿಂದ ಇರುವುದು ಮತ್ತು ವಿರೋಧ ಪಕ್ಷದವರನ್ನು ಟೀಕಿಸದೆ, ಸಂಯಮ ಕಾಯ್ದುಕೊಳ್ಳುವುದು ಎಎಪಿ ಗೆ ಅನಿವಾರ್ಯವಾಗಿದೆ.