ದೆಹಲಿಯಲ್ಲಿ ಆಪ್ ದೋಸ್ತಿ ಇಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಕಾಂಗ್ರೆಸ್
ನವದೆಹಲಿ, ಮಾರ್ಚ್ 11: ದೆಹಲಿಯಲ್ಲಿ ಏಳಕ್ಕೆ ಏಳು ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಬೂತ್ ಮಟ್ಟದ ಕಾರ್ಯಕರ್ತರು ಹೀಗೆ ಕೆಲಸ ಮಾಡುವುದಾಗಿ ಮಾತು ಕೊಡಿ ಎಂದು ಕಾಂಗ್ರೆಸ್ ಆಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ಅಲ್ಲಿಗೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಜತೆಗೆ ಕೈ ಪಕ್ಷ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬಂತಾಗಿದೆ.
ದೆಹಲಿಯಲ್ಲಿ ದುರಂಹಕಾರಿ ಕಾಂಗ್ರೆಸ್ಸಿಗರು ಠೇವಣಿ ಕಳೆದುಕೊಳ್ಳಲಿದ್ದಾರೆ: ಕೇಜ್ರಿವಾಲ್
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್ ಗೆ ದೆಹಲಿಯಲ್ಲಿ ಒಂದು ಸ್ಥಾನ ಕೂಡ ಗೆಲ್ಲಲು ಸಾಧ್ಯವಾಗಿರಲಿಲ್ಲ. ಎಲ್ಲ ಏಳು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಿತ್ತು. ಕಳೆದ ಸೋಮವಾರವಷ್ಟೇ ಆಮ್ ಆದ್ಮಿ ಪಕ್ಷದ ಗೋಪಾಲ್ ರಾಯ್ ಮಾತನಾಡಿ, ದೆಹಲಿಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದಿದ್ದರು.
ಇನ್ನೂ ಮುಂದುವರಿದು, ದೆಹಲಿಯ ಏಳು ಲೋಕಸಭಾ ಕ್ಷೇತ್ರದಲ್ಲಿ ಆಪ್ ತನ್ನ ಸ್ವಂತ ಬಲದ ಮೇಲೆ ಸ್ಪರ್ಧಿಸುವುದಾಗಿ ಕೂಡ ಹೇಳಿದ್ದರು. ಆದರೂ ದೆಹಲಿಯಲ್ಲಿ ಕಾಂಗ್ರೆಸ್ ಹಾಗೂ ಆಪ್ ಮೈತ್ರಿ ಮಾಡಿಕೊಂಡು, ಬಿಜೆಪಿ ವಿರುದ್ಧ ಲೋಕಸಭಾ ಚುನಾವಣೆ ಕಣಕ್ಕೆ ಇಳಿಯಬಹುದು ಎಂಬ ನಿರೀಕ್ಷೆ ಸ್ವಲ್ಪ ಮಟ್ಟಿಗೆ ಇತ್ತು. ಆದರೆ ಈಗ ಅದು ಕೂಡ ಕೊನೆ ಆಗಿದೆ.