ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ವರೆಗೂ ಪಾಕ್ ಜೊತೆ ಮಾತುಕತೆ ಇಲ್ಲ: ಸುಷ್ಮಾ ಸ್ವರಾಜ್
ನವದೆಹಲಿ, ಮಾರ್ಚ್ 14: ಭಯೋತ್ಪಾದಕರ ತಂಡಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ವರೆಗೂ ಪಾಕಿಸ್ತಾನದ ಜೊತೆ ಮಾತುಕತೆ ಇಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್ ಅವರು, ಉಗ್ರರ ಬಗ್ಗೆ ಪಾಕಿಸ್ತಾನ ತನಿಖೆ ಮಾಡುವುದು ಬೇಕಿಲ್ಲ, ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಅವರು ಹೇಳಿದರು.
ಪಾಕಿಸ್ತಾನದ ಪ್ರಧಾನಿಯ ಮೇಲೆ ವಾಗ್ದಾಳಿ ನಡೆಸಿದ ಸುಷ್ಮಾ ಸ್ವರಾಜ್, ಕೆಲವರು ಹೇಳುತ್ತಾರೆ ಪಾಕ್ ಪ್ರಧಾನಿ ರಾಜನೀತಿಜ್ಞ , ಉತ್ತಮ ರಾಜಕಾರಣಿ ಎಂದು ಆದರೆ ಅದು ನಿಜವೇ ಆಗಿದ್ದರೆ ಅವರು ಜೈಶೆ-ಎ-ಮೊಹಮ್ಮದ್ ಸಂಸ್ಥಾಪಕ ಮಸೂದ್ ಅಜರ್ ನನ್ನು ಹಸ್ತಾಂತರಿಸಬೇಕಿತ್ತು ಎಂದು ಹೇಳಿದರು.

ಪಾಕಿಸ್ತಾನ ಸರ್ಕಾರವು, ಐಎಸ್ಐ ಮತ್ತು ಪಾಕಿಸ್ತಾನ ಸೇನೆಯನ್ನು ನಿಯಂತ್ರದಲ್ಲಿಟ್ಟುಕೊಳ್ಳಬೇಕು. ಅವು ಪಾಕಿಸ್ತಾನದ ಅಂತರರಾಷ್ಟ್ರೀಯ ಸಂಬಂಧವನ್ನು ಹಾಳು ಮಾಡುತ್ತಿವೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.
ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಸುಷ್ಮಾ ಅವರು ಪಾಕಿಸ್ತಾನದ ಉಗ್ರರ ಪರ ನೀತಿಯನ್ನು ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸಿದರು.
ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ಘೋಷಿಸಬೇಕು ಎಂದು ಅಮೆರಿಕ, ಬ್ರಿಟನ್, ಫ್ರಾನ್ಸ್ ಒಟ್ಟಾಗಿ ಸಲ್ಲಿಸಿದ್ದ ಪ್ರಸ್ತಾಪವನ್ನು ವಿಶ್ವಸಂಸ್ಥೆಯಲ್ಲಿ ಚೀನಾ ನಿರಾಕರಿಸಿದೆ. ಇದು ಭಾರತಕ್ಕೆ ನಿರಾಸೆ ತಂದಿದೆ.












Click it and Unblock the Notifications