ಭ್ರಷ್ಟರಿಗಿಲ್ಲ ಪಾಸ್ ಪೋರ್ಟ್: ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ!
ನವದೆಹಲಿ, ಮಾರ್ಚ್ 7: ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಭ್ರಷ್ಟಾಚಾರ ಆರೋಪದಿಂದ ಅಮಾನತಿನಲ್ಲಿ ಇರುವ ಅಥವಾ ವಿಚಾರಣೆ ಎದುರಿಸುತ್ತಿರುವ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಪಾರ್ಸ್ ಪೋರ್ಟ್ ನೀಡದಿರುವ ಸರ್ಕಾರ ಆದೇಶಿಸಿದೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸರ್ಕಾರಿ ನೌಕರರಿಗೆ ಪಾಸ್ ಪೋರ್ಟ್ ನೀಡದಿರಲು ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ. ಕೇಂದ್ರೀಯ ಜಾಗೃತ ಆಯೋಗ ಮತ್ತು ವಿದೇಶಾಂಗ ಸಚಿವಾಲಯಗಳ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ 4000ಕ್ಕೂ ಅಧಿಕ ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳನ್ನು ಸಿಬಿಐ ದಾಖಲಿಸಿಕೊಂಡಿದೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ಫೆಬ್ರವರಿ ತಿಂಗಳಲ್ಲಿ ಮಾಹಿತಿ ನೀಡಿತ್ತು.

ಇದೀಗ ಅಮಾನತಿನಲ್ಲಿ ಇರುವ ಸರ್ಕಾರಿ ನೌಕರರಿಗೆ ಅಥವಾ ಭ್ರಷ್ಟಾಚಾರದ ಆರೋಪದ ಮೇಲೆ ಕಾನೂನು ಕ್ರಮ ಜರುಗಿಸಲು ಕೋರ್ಟ್ ಅನುಮತಿ ನೀಡಿದ ಭ್ರಷ್ಟರಿಗೆ ಪಾಸ್ ಪೋರ್ಟ್ ನೀಡದಿರಲು ಆದೇಶ ಹೊರಡಿಸಲಾಗಿದೆ.
ಸರ್ಕಾರಿ ನೌಕರರಿಗೆ ಪಾಸ್ ಪೋರ್ಟ್ ಸಿಗುವ ಮುನ್ನ ತಮ್ಮ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲ ಮತ್ತು ವಿಚಾರಣೆಗೆ ಒಳಪಟ್ಟಿಲ್ಲ ಎಂಬುದನ್ನು ಖಚಿತ ಪಡಿಸಬೇಕು. ಜೊತೆಗೆ ಕೇಂದ್ರ ಜಾಗೃತ ಆಯೋಗದಿಂದ 'ನಿರಾಕ್ಷೇಪಣಾ ಪತ್ರ'ವನ್ನು ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶದಲ್ಲಿ ಸ್ಪಷ್ಟ ಪಡಿಸಿದೆ.
ಒಂದು ವೇಳೆ ಸರ್ಕಾರಿ ನೌಕರ ಅಮಾನತಿನಲ್ಲಿ ಇದ್ದರೆ ಅಥವಾ ತನಿಖಾ ಸಂಸ್ಥೆಯು ಆತನ ವಿರುದ್ಧ ಕೋರ್ಟ್ ನಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರೆ, ಆತನಿಗೆ ನೀಡಿರುವ ಜಾಗೃತ ನಿರಾಕ್ಷೇಪಣಾ ಪತ್ರವನ್ನು ತಡೆಹಿಡಿಯಲು ಸರ್ಕಾರ ನಿರ್ಧರಿಸಿದೆ.












Click it and Unblock the Notifications