ಗೌತಮ ಬುದ್ಧ ಜನಿಸಿದ್ದು ನೇಪಾಳದಲ್ಲೇ ಈ ಬಗ್ಗೆ ಸಂಶಯ ಬೇಡ
ನವದೆಹಲಿ, ಆ.10: ಗೌತಮ ಬುದ್ಧ ಹಾಗೂ ಮಹಾತ್ಮಾ ಗಾಂಧಿ ಇಬ್ಬರು ಶ್ರೇಷ್ಠ ಭಾರತೀಯರು, ಇವರನ್ನು ವಿಶ್ವದೆಲ್ಲೆಡೆ ಸ್ಮರಿಸಿಕೊಳ್ಳಲಾಗುತ್ತಿದೆ. ಗೌತಮ ಬುದ್ಧ ಹುಟ್ಟಿದ್ದು ನೇಪಾಳದಲ್ಲೇ ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಆಯೋಜನೆಯ ವೆಬಿನಾರ್ ನಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ಸಚಿವ ಜೈಶಂಕರ್ ಅವರು ಗೌತಮ ಬುದ್ಧ ಹಾಗೂ ಮಹಾತ್ಮಾ ಗಾಂಧಿ ಇಬ್ಬರು ಶ್ರೇಷ್ಠ ಭಾರತೀಯರು, ಇವರನ್ನು ವಿಶ್ವದೆಲ್ಲೆಡೆ ಸ್ಮರಿಸಿಕೊಳ್ಳಲಾಗುತ್ತಿದೆ ಎಂದಿದ್ದರು. ಬುದ್ಧನ ಬಗ್ಗೆ ನೀಡಿದ ಹೇಳಿಕೆಗೆ ನೇಪಾಳ ಆಕ್ಷೇಪ್ತ ವ್ಯಕ್ತಪಡಿಸಿತ್ತು.
ನೇಪಾಳಕ್ಕೆ ಎಲ್ಲ ಸಹಾಯ ನಿಲ್ಲಿಸಿ: 'ಅಯೋಧ್ಯೆ' ಕುರಿತು ಪ್ರಧಾನಿ ಹೇಳಿಕೆಗೆ ಭಾರಿ ಖಂಡನೆ
ನೇಪಾಳದ ವಿದೇಶಾಂಗ ಸಚಿವಾಲಯವು ಜೈಶಂಕರ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ಗೌತಮ ಬುದ್ಧ ಹುಟ್ಟಿದ್ದು ನೇಪಾಳದ ಲುಂಬಿನಿಯಲ್ಲಿ ಎಂಬುದಕ್ಕೆ ಐತಿಹಾಸಿಕ ಪುರಾವೆಗಳಿವೆ ಎಂದು ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ಸಚಿವ ಜೈಶಂಕರ್ ಅವರು ಹೇಳಿದ್ದರಲ್ಲಿ ತಪ್ಪೇನಿಲ್ಲ, ನೇಪಾಳ ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸುವಂತದ್ದು ಏನು ಆಗಿಲ್ಲ, ನೇಪಾಳದ ಲುಂಬಿನಿಯಲ್ಲೇ ಬುದ್ಧ ಹುಟ್ಟಿದ್ದು ಎಂಬುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.
2014ರಲ್ಲಿ ಪ್ರಧಾನಿ ಮೋದಿ ಅವರು ನೇಪಾಳಕ್ಕೆ ಭೇಟಿ ನೀಡಿದ್ದಾಗ, ನೇಪಾಳದ ಸಂಸತ್ತಿನಲ್ಲಿ ನೇಪಾಳವು ವಿಶ್ವಕ್ಕೆ ಶಾಂತಿ ಮಂತ್ರ ಸಾರಿದ ಬುದ್ಧನ ನಾಡು ಎಂದಿದ್ದರು ಎಂಬುದನ್ನು ನೇಪಾಳ ವಿದೇಶಾಂಗ ಸಚಿವಾಲಯ ಉಲ್ಲೇಖಿಸಿದೆ.
ನೇಪಾಳದಲ್ಲಿ ಜನಿಸಿದ ಬುದ್ಧನಿಗೆ ಬಿಹಾರದ ಗಯಾದಲ್ಲಿ ಸಿದ್ದಾರ್ಥನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಗಿ ಬುದ್ಧನಾಗಿದ್ದು, ಅಲ್ಲಿಂದ ಬೌದ್ಧ ಧರ್ಮವನ್ನು ವಿಶ್ವದೆಲ್ಲೆಡೆ ಹರಡಿಸಿದ್ದು ಈಗ ಇತಿಹಾಸ.