ಜೈಲಿನಲ್ಲಿ ಉಪವಾಸ ಕೂತ ನಿರ್ಭಯ ಪ್ರಕರಣದ ಅಪರಾಧಿ
ನವದೆಹಲಿ, ಫೆಬ್ರವರಿ 17 : ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಯೊಬ್ಬ ಜೈಲಿನಲ್ಲಿ ಉಪವಾಸ ಕುಳಿತಿದ್ದಾನೆ. ಮಾರ್ಚ್ 3ರಂದು ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ನ್ಯಾಯಾಲಯ ಡೆತ್ ವಾರೆಂಟ್ ಜಾರಿ ಮಾಡಿದೆ.
26 ವರ್ಷದ ವಿನಯ್ ಕುಮಾರ್ ಶರ್ಮಾ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ರಾಷ್ಟ್ರಪತಿಗಳು ಈಗಾಗಲೇ ಆತನ ಕ್ಷಮಾದಾನ ಅರ್ಜಿಯನ್ನು ವಜಾಗೊಳಿಸಿದ್ದಾರೆ. ರಾಷ್ಟ್ರಪತಿಗಳ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಸೋಮವಾರ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ವಿನಯ್ ಕುಮಾರ್ ಶರ್ಮಾ ಪರ ವಕೀಲರು ಹಲವಾರು ಮಾಹಿತಿಗಳನ್ನು ನೀಡಿದ್ದಾರೆ. ಅಪರಾಧಿಯ ಮಾನಸಿಕ ಸ್ಥಿತಿ ಸರಿ ಇಲ್ಲ, ಈಗ ಗಲ್ಲು ಶಿಕ್ಷೆ ಜಾರಿಗೊಳಿಸಬಾರದು ಎಂದು ಹೇಳಿದ್ದಾರೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರ ಪೀಠದ ಮುಂದೆ ವಾದ ಮಂಡನೆ ಮಾಡಿದ ವಕೀಲರು, ಅಪರಾಧಿ ಜೈಲಿನಲ್ಲಿ ಉಪವಾಸ ಕೂತಿದ್ದಾನೆ ಎಂದು ಮಾಹಿತಿ ನೀಡಿದರು. ಜೈಲಿನ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ನ್ಯಾಯಾಧೀಶರು ಸೂಚಿಸಿದರು.
2012ರ ಡಿಸೆಂಬರ್ 23ರಂದು ದಕ್ಷಿಣ ದೆಹಲಿಯಲ್ಲಿ ಚಲಿಸುವ ಬಸ್ನಲ್ಲಿ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿ ವಿಕೃತಿ ಮೆರೆಯಲಾಗಿತ್ತು. ಬಳಿಕ ಆಕೆ ಮೃತಪಟ್ಟಿದ್ದಳು.
ನಿರ್ಭಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣದಲ್ಲಿ ಮುಕೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ (31) ಅಪರಾಧಿಗಳು.
ಎಲ್ಲಾ ಅಪರಾಧಿಗಳಿಗೂ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಎರಡು ಬಾರಿ ಡೆತ್ ವಾರೆಂಟ್ ಜಾರಿಗೊಳಿಸಿದರೂ ಶಿಕ್ಷೆ ಜಾರಿಯಾಗಿರಲಿಲ್ಲ. ಸೋಮವಾರ 3ನೇ ಬಾರಿಗೆ ಡೆತ್ ವಾರೆಂಟ್ ಜಾರಿಗೊಂಡಿದ್ದು ಮಾರ್ಚ್ 3ರ ಬೆಳಗ್ಗೆ 6 ಗಂಟೆಗೆ ಶಿಕ್ಷೆ ಜಾರಿಗೊಳಿಸಲು ಆದೇಶ ನೀಡಲಾಗಿದೆ.












Click it and Unblock the Notifications