ನಿರ್ಭಯಾ ಪ್ರಕರಣ: ಮತ್ತೊಬ್ಬ ಅಪರಾಧಿಯಿಂದ ಕ್ಯುರೇಟಿವ್ ಅರ್ಜಿ
ನವದೆಹಲಿ, ಜನವರಿ 29: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿರುವ ನಾಲ್ವರು ಅಪರಾಧಿಗಳ ಪೈಕಿ ಮತ್ತೊಬ್ಬ ಅಪರಾಧಿ ಕೂಡ ಸುಪ್ರೀಂಕೋರ್ಟ್ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾನೆ.
ಫೆ. 1ರಂದು ನಾಲ್ವರು ಅಪರಾಧಿಗಳಿಗೆ ಬೆಳಿಗ್ಗೆ ಆರು ಗಂಟೆಗೆ ಗಲ್ಲುಶಿಕ್ಷೆ ಜಾರಿಗೊಳಿಸುವುದು ನಿಗದಿಯಾಗಿದೆ. ಆದರೆ ಅದಕ್ಕೂ ಮುನ್ನ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾನೆ. ಇದಕ್ಕೂ ಮೊದಲು ಮುಕೇಶ್ ಸಿಂಗ್ ಮತ್ತು ವಿನಯ್ ಕುಮಾರ್ ಶರ್ಮಾ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರು. ಅದನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಬಳಿಕ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿ ಕೂಡ ರಾಷ್ಟ್ರಪತಿಯಿಂದ ತಿರಸ್ಕೃತಗೊಂಡಿತ್ತು. ಅದನ್ನು ಕೂಡ ಮುಕೇಶ್ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದಾನೆ.
ಕ್ಯುರೇಟಿವ್ ಅರ್ಜಿಯು ಗಲ್ಲುಶಿಕ್ಷೆಯಿಂದ ಪಾರಾಗಲು ಅಪರಾಧಿಗಳಿಗೆ ಇರುವ ಕೊನೆಯ ಕಾನೂನು ಆಯ್ಕೆಯಾಗಿದೆ. ಇದರ ಬಳಿಕ ಅವರು ಕ್ಷಮಾದಾನದ ಅರ್ಜಿ ಮಾತ್ರ ಸಲ್ಲಿಸಲು ಅವಕಾಶವಿದೆ. ಆದರೆ ಕಾನೂನಿನಲ್ಲಿರುವ ಅವಕಾಶ ಬಳಸಿಕೊಂಡು ಮುಕೇಶ್ ಸಿಂಗ್, ತನ್ನ ಕ್ಷಮಾದಾನದ ಮನವಿಯನ್ನು ತಿರಸ್ಕರಿಸಿರುವುದಕ್ಕೆ ಕೋರ್ಟ್ ಮೊರೆ ಹೋಗಿದ್ದಾನೆ. ಆತನ ಅರ್ಜಿ ಕುರಿತಾದ ತೀರ್ಪು ಬುಧವಾರ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

ಗಲ್ಲು ಜಾರಿಗೆ ಮೂರು ದಿನ ಬಾಕಿ
31 ವರ್ಷದ ಅಕ್ಷಯ್ ಕುಮಾರ್ ಸಿಂಗ್, ಕಳೆದ ಡಿಸೆಂಬರ್ನಲ್ಲಿ ತನ್ನ ಗಲ್ಲುಶಿಕ್ಷೆಯ ಪರಾಮರ್ಶನಾ ಅರ್ಜಿ ಸಲ್ಲಿಸಿದ್ದ. ದೆಹಲಿ ವಾಯು ಮಾಲಿನ್ಯ ಮತ್ತು ಹಿಂದೂ ಧಾರ್ಮಿಕ ಬರಹಗಳನ್ನು ಉಲ್ಲೇಖಿಸಿ ತನ್ನನ್ನು ಗಲ್ಲುಶಿಕ್ಷೆಗೆ ಗುರಿಪಡಿಸಬಾರದು ಎಂದು ವಿಚಿತ್ರ ವಾದ ಮಂಡಿಸಿದ್ದ. ಇದನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಗಲ್ಲುಶಿಕ್ಷೆ ಜಾರಿಗೆ ಮೂರು ದಿನ ಬಾಕಿ ಇರುವಾಗಲೇ ಆತ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾನೆ

ತಿರಸ್ಕಾರವಾದರೆ ಮತ್ತೊಂದು ಅವಕಾಶ
ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯನ್ನು ನ್ಯಾಯಮೂರ್ತಿಗಳ ಕೊಠಡಿಯಲ್ಲಿ ವಿಚಾರಣೆ ನಡೆಸಲಾಗುತ್ತದೆಯೇ ವಿನಾ, ತೆರೆದ ನ್ಯಾಯಾಲಯದಲ್ಲಿ ಅಲ್ಲ. ಆತನ ಅರ್ಜಿ ತಿರಸ್ಕೃತಗೊಂಡರೆ, ಅಪರಾಧಿ ಕ್ಷಮಾದಾನದ ಮನವಿ ಸಲ್ಲಿಸುವ ಅವಕಾಶ ಹೊಂದಿರುತ್ತಾನೆ. ನಾಲ್ವರು ಅಪರಾಧಿಗಳಲ್ಲಿ ಈಗ ಮೂವರು ಕ್ಷಮಾದಾನದ ಅರ್ಜಿ ಸಲ್ಲಿಸಿದಂತೆ ಆಗಿದೆ. ಇನ್ನೊಬ್ಬ ಅಪರಾಧಿ ಪವನ್ ಗುಪ್ತಾ ಇನ್ನೂ ಅರ್ಜಿ ಸಲ್ಲಿಸಿಲ್ಲ.

ಇಂದು ತೀರ್ಪು ಪ್ರಕಟ
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ತನ್ನ ಕ್ಷಮಾದಾನದ ಮನವಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅಪರಾಧಿ ಮುಕೇಶ್ ಸಿಂಗ್ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದ. ಅದನ್ನು ಆದ್ಯತೆ ಮೇರೆಗೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿತ್ತು. ಮಂಗಳವಾರ ವಾದ ಆಲಿಸಿದ್ದ ಸುಪ್ರೀಂಕೋರ್ಟ್, ಬುಧವಾರ ಬೆಳಿಗ್ಗೆ 10.30ಕ್ಕೆ ವಿಚಾರಣೆ ಮುಂದುವರಿಸಿ ತೀರ್ಪು ಪ್ರಕಟಿಸಲಿದೆ. ನ್ಯಾಯಮೂರ್ತಿಗಳಾದ ಆರ್ ಭಾನುಮತಿ, ಎಎಸ್ ಬೋಪಣ್ಣ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಲಿದೆ.

ಅಪರಾಧಿ ಮೇಲೆ ಅತ್ಯಾಚಾರ
2013ರಿಂದ ಜೈಲಿನಲ್ಲಿರುವ ಅಪರಾಧಿಗಳ ನಡುವೆ ಅಸಹಜ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಡ ಹೇರಲಾಗಿದೆ ಎಂದು ಅಪರಾಧಿಗಳ ಪರ ವಕೀಲ ಮಂಗಳವಾರ ಆರೋಪಿಸಿದ್ದಾರೆ. ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ಜತೆ ಜೈಲಿನಲ್ಲಿ ಅತ್ಯಾಚಾರ ಮಾಡಲಾಗಿದೆ. ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಮುಕೇಶ್ಗೆ ಬಲವಂತ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.












Click it and Unblock the Notifications