ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕೆ 'ಮಾಸ್ಕ್ ಮದ್ದು'!
ನವದೆಹಲಿ, ನವೆಂಬರ್.29: ಕೊರೊನಾವೈರಸ್ ಸೋಂಕಿನ ಕುರಿತು ಜನರು ಜಾಗೃತಿ ವಹಿಸಬೇಕಿದೆ. ಸುದೀರ್ಘ ಅವಧಿವರೆಗೂ ಕೊವಿಡ್-19 ಮಾರ್ಗಸೂಚಿ ಮತ್ತು ನಿಯಮಗಳನ್ನು ಪಾಲನೆ ಮಾಡುವುದು ಸೂಕ್ತವಾಗಿದೆ ಎಂದು ಐಸಿಎಂಆರ್ ಎಚ್ಚರಿಕೆ ಸಂದೇಶ ರವಾನಿಸಿದೆ.
ದೇಶದಲ್ಲಿ ಕೊವಿಡ್-19 ಸೋಂಕಿನ ಹಿನ್ನೆಲೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಲ್ಲಿ ನಿರ್ಲಕ್ಷ್ಯ ತೋರದಿರುವುದು ಉತ್ತಮ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯ ಮುಖ್ಯ ಪ್ರಾಧ್ಯಾಪಕ ಬಲರಾಮ್ ಭಾರ್ಗವ್ ತಿಳಿಸಿದ್ದಾರೆ. ಲಕ್ನೋದಲ್ಲಿ ನಡೆದ "ಕೊವಿಡ್-19 ನಿರ್ವಹಣೆಯ ಮಾದರಿ ಬದಲಾವಣೆ" ಎಂಬ ಚರ್ಚಾ ವಿಷಯಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿದ್ದಾರೆ.
ಭಾರತದಲ್ಲಿ ಕೊವಿಡ್-19 ಲಸಿಕೆ ಸಂಶೋಧನಾ ಕಾರ್ಯಗಳು ಶರವೇಗದಲ್ಲಿ ನಡೆಯುತ್ತಿವೆ. ಜುಲೈ ವೇಳೆಗೆ 30 ಕೋಟಿ ಜನರಿಗೆ ಕೊರೊನಾವೈರಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಭವಿಷ್ಯದಲ್ಲಿ ಈ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ. ಭಾರತವು ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದ್ದು, ಕೇವಲ ದೇಶೀಯರು ಉಪಯೋಗಿಸುವುದಕ್ಕಲ್ಲ. ಬದಲಿಗೆ ಶೇ.60ರಷ್ಟು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದರ ಪ್ರಯೋಜನವಾಗಲಿದೆ ಎಂದು ಬಲರಾಮ್ ಭಾರ್ಗವ್ ಹೇಳಿದ್ದಾರೆ.

ಕೊರೊನಾವೈರಸ್ ಗೆ ಮಾಸ್ಕ್ ಮದ್ದು
ದೇಶದಲ್ಲಿ ಕೊರೊನಾವೈರಸ್ ಸೋಂಕಿನಿಂದ ಜನರು ತಮ್ಮನ್ನು ರಕ್ಷಿಸಿಕೊಳ್ಳಬೇಕಾದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್ ಗಳೇ ಮದ್ದು ಎಂದು ಐಸಿಎಂಆರ್ ಮುಖ್ಯ ಪ್ರಾಧ್ಯಾಪಕ ಬಲರಾಮ್ ಭಾರ್ಗವ್ ಹೇಳಿದ್ದಾರೆ. ಕೊವಿಡ್-19 ಲಸಿಕೆ ಸಂಶೋಧನೆ ಆಗುವವರೆಗೂ ಮಾಸ್ಕ್ ಗಳು ಲಸಿಕೆಯಷ್ಟೇ ಪ್ರಮುಖ ಪಾತ್ರ ವಹಿಸಲಿದೆ. ಮಹಾಮಾರಿ ಅಂಟಿಕೊಳ್ಳದಂತೆ ಸುರಕ್ಷಿತವಾಗಿರಲು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸಲಹೆ ನೀಡಿದ್ದಾರೆ.

ಮಾಸ್ಕ್ ಗಳ ಬಗ್ಗೆ ಕಡೆಗಣನೆ ಬೇಡ ಎಂದು ಸಲಹೆ
ಕೊರೊನಾವೈರಸ್ ಸೋಂಕು ನಿಯಂತ್ರಿಸುವಲ್ಲಿ ಮಾಸ್ಕ್ ಗಳು ಫ್ಯಾಬ್ರಿಕ್ ವ್ಯಾಕ್ಸಿನ್ ರೀತಿಯಲ್ಲಿ ಕೆಲಸ ಮಾಡುತ್ತವೆ. ಕೊವಿಡ್-19 ಸೋಂಕು ಹರಡುವಿಕೆ ನಿಯಂತ್ರಣದಲ್ಲಿ ಮಾಸ್ಕ್ ಗಳ ಕೊಡುಗೆಯನ್ನು ಕಡೆಗಣಿಸುವಂತಿಲ್ಲ. ಲಸಿಕೆ ಸಂಶೋಧನೆಯಲ್ಲಿ ನಾವು ತೊಡಗಿದ್ದು, ಭಾರತದಲ್ಲಿ ಐದು ಮಾದರಿ ಲಸಿಕೆಗಳ ಮೇಲೆ ವೈದ್ಯಕೀಯ ಸಂಶೋಧನೆ ನಡೆಸಲಾಗುತ್ತಿದೆ. ಈ ಪೈಕಿ ಎರಡು ಭಾರತೀಯ ಮಾದರಿ ಆಗಿದ್ದು, ಬಾಕಿ ಮೂರು ಮಾದರಿಗಳು ವಿದೇಶಿ ಕಂಪನಿಗಳದ್ದಾಗಿದೆ.

ಲಸಿಕೆಯೊಂದೇ ಕೊರೊನಾವೈರಸ್ ಸೋಂಕಿಗೆ ಮದ್ದು ಅಲ್ಲ
ಒಂದು ಬಾರಿ ಕೊರೊನಾವೈರಸ್ ಸೋಂಕಿಗೆ ಲಸಿಕೆಯನ್ನು ಸಂಶೋಧನೆಯಾದಲ್ಲಿ ಅದೊಂದೇ ಮಹಾಮಾರಿ ನಿಯಂತ್ರಿಸಲು ಪ್ರಮುಖ ಅಸ್ತ್ರವಾಗಿರುವುದಿಲ್ಲ. ಬದಲಿಗೆ ಆರೋಗ್ಯ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕೊವಿಡ್-19 ಮಾರ್ಗಸೂಚಿ ಮತ್ತು ಶಿಷ್ಟಾಚಾರಗಳ ಪಾಲನೆ ಮಾಡಬೇಕು. ಕೊರೊನಾವೈರಸ್ ಸೋಂಕಿಗೆ ಲಸಿಕೆ ಬಿಡುಗಡೆಯಾದ ನಂತರದಲ್ಲೂ ಮಾಸ್ಕ್ ಗಳ ಬಗ್ಗೆ ಜನರು ನಿರ್ಲಕ್ಷ್ಯ ತೋರುವಂತಿಲ್ಲ. ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸಿರಬೇಕು ಎಂದು ಐಸಿಎಂಆರ್ ಮುಖ್ಯ ಪ್ರಾಧ್ಯಾಪಕ ಬಲರಾಮ್ ಭಾರ್ಗವ್ ಹೇಳಿದ್ದಾರೆ.

ದೇಶದಲ್ಲಿ ಕೊವಿಡ್-19 ಸೋಂಕಿನ ಅಂಕಿ-ಸಂಖ್ಯೆ ವಿವರ
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 94 ಲಕ್ಷದ ಸನ್ನಿಹಿತಕ್ಕೆ ತಲುಪಿದೆ. ಒಂದೇ ದಿನ 41,810 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 42,298 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 496 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 93,92,920ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ ದೇಶದಲ್ಲಿ ಈವರೆಗೂ 1,36,696 ಮಂದಿ ಪ್ರಾಣ ಬಿಟ್ಟಿದ್ದಾರೆ. 88,02,267 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ 4,53,956 ಸಕ್ರಿಯ ಪ್ರಕರಣಗಳಿವೆ.












Click it and Unblock the Notifications