ಪರಿಸ್ಥಿತಿ ಹಿಡಿತಕ್ಕೆ ತರಲು ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯನ್ನು ಹಿಂಪಡೆಯಬೇಕು:ಜೈಶಂಕರ್
ನವದೆಹಲಿ,ಫೆಬ್ರವರಿ 26: ಪರಿಸ್ಥಿತಿ ಹಾಗೂ ಸಂಬಂಧಗಳ ಸುಧಾರಣೆಗೆ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿರುವ ಸೇನಾ ಪಡೆಗಳನ್ನು ಹಿಂತೆಗೆಯಬೇಕು ಎಂದು ಸಚಿವ ಜೈಶಂಕರ್ ಚೀನಾಗೆ ಹೇಳಿದ್ದಾರೆ.
ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಣೆಯಾಗಬೇಕು, ಅದರ ಜತೆಗೆ ಗಡಿಭಾಗದಲ್ಲಿ ಶಾಂತಿ ಮತ್ತು ಭಾತೃತ್ವ ಅಗತ್ಯ ಎಂದು ಪ್ರತಿಪಾದಿಸಿರುವ ಭಾರತ, ಸೇನಾಪಡೆಗಳು ಮತ್ತೆ ಘರ್ಷಣಾ ಪ್ರದೇಶದಲ್ಲಿ ಸಕ್ರಿಯವಾಗದಂತೆ ನೋಡಿಕೊಳ್ಳಲು ಪರಿಸ್ಥಿತಿ ತಿಳಿಗೊಳಿಸಲು ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಸೇನಾ ಪಡೆಗಳ ಹಿಂತೆಗೆತ ಅಗತ್ಯ ಎಂದು ಹೇಳಿದೆ.
ಪೂರ್ವ ಲಡಾಕ್ ನ ಪಾಂಗೊಂಗ್ ತ್ಸೊ ಸರೋವರ ತೀರದ ಉತ್ತರ ಮತ್ತು ದಕ್ಷಿಣ ಭಾಗದಿಂದ ಕಳೆದ ವಾರ ಎರಡೂ ದೇಶಗಳ ಪಡೆಗಳನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ. ಕಳೆದ ವರ್ಷ ಮೇ ತಿಂಗಳಿನಿಂದ ಈ ಪ್ರದೇಶಗಳಲ್ಲಿ ಸೇನೆ ನಿಯೋಜನೆಗೊಂಡಿದ್ದವು.

ಸುಮಾರು 75 ನಿಮಿಷಗಳ ಮಾತುಕತೆ
ಸೇನೆ ಹಿಂಪಡೆಯುವಿಕೆಗೆ ಸಂಬಂಧಪಟ್ಟಂತೆ ನಿನ್ನೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ನಡೆಸಿದ್ದ ಸುಮಾರು 75 ನಿಮಿಷಗಳ ದೂರವಾಣಿ ಸಂಭಾಷಣೆಯ ವಿವರ ಬಹಿರಂಗಪಡಿಸಿರುವ ವಿದೇಶಾಂಗ ಸಚಿವಾಲಯ, ಪೂರ್ವ ಲಡಾಕ್ ಗಡಿಭಾಗದಲ್ಲಿ ಸೇನೆ ನಿಯೋಜನೆಯಿಂದ ದ್ವಿಪಕ್ಷೀಯ ಸಂಬಂಧಗಳಿಗೆ ಪರಿಣಾಮ ಬೀರಿದೆ ಎಂದು ಚೀನಾಕ್ಕೆ ತಿಳಿಸಲಾಗಿದೆ ಎಂದಿದೆ.

ಸೇನೆ ಹಿಂತೆಗೆತ,ಭಾರತ,ಚೀನಾ ಎರಡಕ್ಕೂ ಗೆಲುವಿನ ಸಂದರ್ಭ: ನರವಾಣೆ
ಪ್ಯಾಂಗಾಂಗ್ ತ್ಸೊ ಸರೋವರದಿಂದ ಭಾರತ ಹಾಗೂ ಚೀನಾ ಸೇನೆ ಹಿಂತೆಗೆದ ಎರಡೂ ದೇಶಗಳಿಗೂ ಇದು ಗೆಲುವಿನ ಸಂದರ್ಭ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಹೇಳಿದ್ದರು.
ಗಡಿ ಸಂಘರ್ಷದ ಆರಂಭದಿಂದಲೇ, ಎಲ್ಲ ಕಡೆಯೂ ಭಾರತ ಒಟ್ಟಾಗಿ ಕೆಲಸ ಮಾಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ತಮ್ಮ ಚೀನಾದ ಸಹವರ್ತಿಗಳೊಂದಿಗೆ ಮಾತನಾಡಿದ್ದಾರೆ ಎಂದು ಹೇಳಿದ್ದರು.
ಭಾರತದಲ್ಲಿ ಹೂಡಿಕೆಗೆ ಚೀನಾದ ಯಾವ ಕಂಪೆನಿಗೂ ಅನುಮತಿ ನೀಡಿಲ್ಲ ಲಡಾಖ್ ಸಂಘರ್ಷ ವೇಳೆಯಲ್ಲಿ ಪಾಕಿಸ್ತಾನ ಮತ್ತು ಚೀನಾ ನಡುವೆ ಬಹಿರಂಗ ಒಪ್ಪಂದದ ಯಾವುದೇ ಲಕ್ಷಣಗಳಿಲ್ಲ ಆದರೆ, ಭಾರತವು ದೀರ್ಘಾವಧಿಯ ಕಾರ್ಯತಂತ್ರವನ್ನು ರೂಪಿಸುತ್ತದೆ ಎಂದ ಅವರು, ಆಂತರಿಕ ಭದ್ರತೆಯನ್ನು ಉಲ್ಲೇಖಿಸಿದ್ದರು.

ಹಿಂಸಾಚಾರದಿಂದ ಸಂಬಂಧಗಳ ಮೇಲೆ ಹಾನಿಕಾರಕ ಪರಿಣಾಮ
ಗಡಿ ಸಮಸ್ಯೆಯನ್ನು ಪರಿಹರಿಸಲು ಸಮಯ ತೆಗೆದುಕೊಳ್ಳಬಹುದು ಆದರೆ ಹಿಂಸಾಚಾರ ಸೇರಿದಂತೆ ಶಾಂತಿ ಮತ್ತು ಭಾತೃತ್ವ ಭಂಗವು ಅನಿವಾರ್ಯವಾಗಿ ಸಂಬಂಧದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿದೆ ಎಂದು ವಿದೇಶಾಂಗ ಸಚಿವರು ಚೀನಾಕ್ಕೆ ತಿಳಿಸಿದ್ದಾರೆ ಎಂದು ಸಚಿವಾಲಯ ಹೇಳಿದೆ.

ನಿರಂತರ ಸಂಪರ್ಕ
ಗಡಿ ಸಂಬಂಧ ವಿಚಾರವಾಗಿ ನಿರಂತರ ಸಂಪರ್ಕದಲ್ಲಿರಲು ಎರಡೂ ದೇಶಗಳ ವಿದೇಶಾಂಗ ಸಚಿವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಉಭಯ ನಾಯಕರು ನಿನ್ನೆ ಗಡಿ ವಾಸ್ತವ ರೇಖೆಯಲ್ಲಿನ ಪರಿಸ್ಥಿತಿ, ಭಾರತ-ಚೀನಾ ಸಂಬಂಧಗಳ ಒಟ್ಟಾರೆ ವಿಚಾರಗಳನ್ನು ಚರ್ಚಿಸಿದ್ದಾರೆ.












Click it and Unblock the Notifications