ನೀತಿ ಸಂಹಿತೆ ಉಲ್ಲಂಘನೆ: 72 ಗಂಟೆ ಪ್ರಚಾರ ಮಾಡದಂತೆ ಸಿಧುಗೆ ತಡೆ
ನವದೆಹಲಿ, ಏಪ್ರಿಲ್ 23: ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಕಾರಣ ಚುನಾವಣಾ ಆಯೋಗವು ನವಜೋತ್ ಸಿಂಗ್ ಸಿಧುಗೆ ಶಿಕ್ಷೆ ವಿಧಿಸಿದ್ದು, 72 ಗಂಟೆಗಳ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದೆ.
ಪಂಜಾಬ್ ರಾಜ್ಯ ಸರ್ಕಾರ ಸಚಿವರಾಗಿರುವ ನವಜೋತ್ ಸಿಂಗ್ ಸಿಧು ಅವರು ಮುಸ್ಲಿಂ ಮತದಾರರ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು, ಹೇಳಿಕೆಯು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆದ ಕಾರಣ ಅವರಿಗೆ ಶಿಕ್ಷೆ ವಿಧಿಸಲಾಗಿದೆ.
ಏಪ್ರಿಲ್ 16ರಂದು ಬಿಹಾರದ ಕತಿಯಾರ್ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ನವಜೋತ್ ಸಿಂಗ್ ಸಿಧು ಅವರು ಮುಸ್ಲಿಂ ಮತದಾರರ ಮತವಿಭಜನೆ ಮಾಡುವ ಬಗ್ಗೆ ಮಾತನಾಡಿದ್ದರು, ಮತ್ತು ಒಟ್ಟಾಗಿ ಮತ ಚಲಾಯಿಸಿ ನರೇಂದ್ರ ಮೋದಿ ಅವರನ್ನು ಸೋಲಿಸಬೇಕು ಎಂದಿದ್ದರು. ಇದು ಆಯೋಗದ ಕಣ್ಣು ಕೆಂಪಗೆ ಮಾಡಿತ್ತು.

ನವಜೋತ್ ಸಿಂಗ್ ಸಿಧು ಅವರು ನಾಳೆ (ಮಂಗಳವಾರ) ಯಿಂದ ಮೂರು ದಿನಗಳ ಕಾಲ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಿಯೂ ಚುನಾವನಾ ಪ್ರಚಾರ ಮಾಡುವಂತಿಲ್ಲ.
ಕೆಲವು ದಿನಗಳ ಹಿಂದಷ್ಟೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾತ, ಬಿಎಸ್ಪಿ ನಾಯಕಿ ಮಾಯಾವತಿ, ಬಿಜೆಪಿ ಸಚಿವೆ ಮೇನಕಾ ಗಾಂಧಿ, ಮಾಜಿ ಸಚಿವ ಆಜಂ ಖಾನ್ ಅವರುಗಳನ್ನು ಚುನಾವಣಾ ಆಯೋಗವು ನಿರ್ದಿಷ್ಟ ಸಮಯದ ವರೆಗೆ ಪ್ರಚಾರ ಮಾಡದಂತೆ ತಡೆದಿತ್ತು. ಅವರೂ ಸಹ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದರು.












Click it and Unblock the Notifications