ಪುಲ್ವಾಮಾ ದಾಳಿ: ಮತ್ತೆ ಮೋದಿ ಸರ್ಕಾರವನ್ನು ಹಳಿದ ಸಿಧು
ಅವಕಾಶವಾದಿ ರಾಜಕಾರಣ ಎಂದರೆ ಇದೇ ಇರಬೇಕು! ಬಿಜೆಪಿಯೊಂದಿಗಿದ್ದ ಸಂದರ್ಭದಲ್ಲಿ ಕಂದಹಾರ್ ವಿಮಾನ ಅಪಹರಣದ ಬಗ್ಗೆ ಸೊಲ್ಲೆತ್ತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಇದೀಗ ಕಾಂಗ್ರೆಸ್ ಗೆ ಸೇರಿದ ಮೇಲೆ ಈ ಕುರಿತು ಪ್ರಶ್ನೆ ಕೇಳುತ್ತಿದ್ದಾರೆ!
"1999 ರ ಕಂದಹಾರ್ ವಿಮಾನ ಅಪಹರಣ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಿದ್ದು ಯಾರು ಎಂಬ ಪ್ರಶ್ನೆಗೆ ನನಗೆ ಉತ್ತರ ಬೇಕಿದೆ, ಅದಕ್ಕೆ ಯಾರು ಹೊಣೆ? ನಮ್ಮ ಹೋರಾಟ ಅವರ ವಿರುದ್ಧ. ಸೈನಿಕರು ಯಾಕೆ ಸಾಯಬೇಕು? ಇದಕ್ಕೆ ಒಂದು ಶಾಶ್ವತ ಪರಿಹಾರ ಬೇಕು" ಎಂದು ನವಜೋತ್ ಸಿಂಗ್ ಸಿಧು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನನ್ನ ನಿಲುವಗೆ ನಾನು ಬದ್ಧವಾಗಿದ್ದೇನೆ. ಭಯೋತ್ಪಾದನೆಯನ್ನು ಸಹಿಸಿಕೊಳ್ಳಬೇಕು ಎಂದು ನಾನು ಎಂದಿಗೂ ಹೇಳುವುದಿಲ್ಲ. ಆರೋಪಿಗಳಿಗೆ ಮುಂದಿನ ತಲೆಮಾರುಗಳೂ ನೆನಪಿಟ್ಟುಕೊಳ್ಳುವಂಥ ಉಗ್ರ ಶಿಕ್ಷೆಯಾಗಬೇಕು ಎಂಬುದು ನನ್ನ ಭಾವನೆ" ಎಂದು ಕಾಂಗ್ರೆಸ್ ಮುಖಂಡ ಸಿದ್ದು ಹೇಳಿದ್ದಾರೆ.

ಪುಲ್ವಾಮಾದಲ್ಲಿ 44 ಯೋಧರ ಬಲಿದಾನಕ್ಕೆ ಕಾರಣವಾದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಪಾಕಿಸ್ತಾನಕ್ಕೆ ಸೇರಿದ್ದು. ಮತ್ತು ಈ ಘಟನೆಗೆ ಪಾಕಿಸ್ತಾನವೇ ಕಾರಣ ಎಂದು ಇಡೀ ದೇಶವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಒಂದು ಘಟನೆಗೆ ಇಡೀ ದೇಶವನ್ನೂ ಹೊಣೆ ಮಾಡುವುದು ಸರಿಯಲ್ಲ. ಮಾತುಕತೆಯ ಮೂಲಕ ಪರಿಹಾರ ಹುಡುಕಿ ಎಂದು ಸಿಧು ಹೇಳಿದ್ದರು. ಅವರ ಈ ಮಾತು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಕಂದಹಾರ್ ನಲ್ಲಿ 168 ಪ್ರಯಾಣಿಕರಿದ್ದ ವಿಮಾನವನ್ನು ಉಗ್ರರು ಅಪಹರಿಸಿದ್ದರು. ಪ್ರಯಾಣಿಕರನ್ನು ಉಳಿಸಬೇಕೆಂದರೆ 30 ಕ್ಕೂ ಹೆಚ್ಚು ಉಗ್ರರನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಡಲಾಗಿತ್ತು. ಒತ್ತೆಯಾಳುಗಳನ್ನು ಉಳಿಸುವ ಸಲುವಾಗಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಉಗ್ರರನ್ನು ಬಿಡುಗಡೆ ಮಾಡಿ, ಪ್ರಯಾಣಿಕರನ್ನು ಉಳಿಸಿಕೊಂಡಿತ್ತು.












Click it and Unblock the Notifications