ನ್ಯಾಷನಲ್ ಹೆರಾಲ್ಡ್ ವಿವಾದ: ತಡೆಯಾಜ್ಞೆ ನೀಡದ ಕೋರ್ಟ್, ಕಾಂಗ್ರೆಸ್ಗೆ ಹಿನ್ನಡೆ
ನವದೆಹಲಿ, ನವೆಂಬರ್ 15: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಗೆ ಭಾರಿ ಹಿನ್ನಡೆಯಾಗಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕಾ ಕಚೇರಿಯ ಭೋಗ್ಯದ ಅವಧಿಯನ್ನು ಮುಕ್ತಾಯಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ನ್ಯಾಷನಲ್ ಹೆರಾಲ್ಡ್: ಕಾಂಗ್ರೆಸ್ ನಾಯಕರಿಗೀಗ ಚಂದಾದಾರರ ಚಿಂತೆ
ಅಲ್ಲದೆ, ಇದಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಲಾಗಿದೆ.
ಕಟ್ಟಡವನ್ನು ತೆರವುಗೊಳಿಸುವಂತೆ ನಗರಾಭಿವೃದ್ಧಿ ಸಚಿವಾಲಯ ನೀಡಿದ್ದ ನೋಟಿಸ್ ವಿರುದ್ಧ ನ್ಯಾಷನಲ್ ಹೆರಾಲ್ ಪತ್ರಿಕೆಯನ್ನು ನಡೆಸುವ ಅಸೋಸಿಯೇಟ್ಸ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.
ತೆರವು ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡುವುದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ಸಿನ ನ್ಯಾಷನಲ್ ಹೆರಾಲ್ಡ್ ವಿರುದ್ಧ 5,000 ಕೋಟಿ ಮೊಕದ್ದಮೆ
ಈ ಪ್ರಕರಣದ ವಿಚಾರಣೆಯನ್ನು ನವೆಂಬರ್ 22ಕ್ಕೆ ಮುಂದೂಡಲಾಯಿತು. ಅಲ್ಲಿಯವರೆಗೂ ತೆರವು ಪ್ರಕ್ರಿಯೆ ನಡೆಸುವುದಿಲ್ಲ ಎಂದು ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದರು.
56 ವರ್ಷಗಳಿಂದ ಎಎಲ್ಜೆ ಸಂಸ್ಥೆಯು ಇಲ್ಲಿ ಕಚೇರಿಯನ್ನು ಭೋಗ್ಯಕ್ಕೆ ಪಡೆದು ಪತ್ರಿಕೆಯನ್ನು ನಡೆಸುತ್ತಿದೆ. ಕಳೆದ ಹತ್ತು ವರ್ಷಗಳಿಂದ ಕಟ್ಟಡದ ಕಚೇರಿಯಲ್ಲಿ ಯಾವುದೇ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಇದು ಭೋಗ್ಯ ಕರಾರಿನ ಉಲ್ಲಂಘನೆ. ಹೀಗಾಗಿ ಕೂಡಲೇ ಕಚೇರಿಯನ್ನು ತೆರವುಗೊಳಿಸಬೇಕು. ಕಟ್ಟಡವನ್ನು ಕೇಂದ್ರ ಸರ್ಕಾರದ ವಶಕ್ಕೆ ಒಪ್ಪಿಸಬೇಕು ಎಂದು ನಗರಾಭಿವೃದ್ಧಿ ಸಚಿವಾಲಯ ನೋಟಿಸ್ ನೀಡಿತ್ತು.
ನ.15ರ ಒಳಗೆ ಕಚೇರಿ ತೆರವುಗೊಳಿಸಿ ಅದನ್ನು ಕೇಂದ್ರ ಸರ್ಕಾರದ ವಶಕ್ಕೆ ನೀಡುವಂತೆ ಅ.30ರಂದು ನೀಡಲಾದ ನೋಟಿಸ್ನಲ್ಲಿ ಅದು ಸೂಚಿಸಿತ್ತು.
2005ರಲ್ಲಿ ಹರಿಯಾಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭೂಪಿಂದರ್ ಸಿಂಗ್ ಹೂಡಾ ಅವರು ಪಂಚಕುಳದಲ್ಲಿ ಎಜೆಎಲ್ಗೆ ಪ್ಲಾಟ್ ಒಂದನ್ನು ವರ್ಗಾಯಿಸಿದ್ದರು ಎಂಬ ಆರೋಪ ಇದೆ. ಈ ಆರೋಪದಡಿ ಹರಿಯಾಣ ರಾಜ್ಯಪಾಲರು ಹೂಡಾ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಅನುಮತಿ ನೀಡಿದ್ದಾರೆ.