ಅರುಣ್ ಜೇಟ್ಲಿ ನಿವಾಸಕ್ಕೆ ನರೇಂದ್ರ ಮೋದಿ ಭೇಟಿ; ಸಂಪುಟ ಸೇರಲು ಮನವೊಲಿಕೆ ಯತ್ನ
ನವದೆಹಲಿ, ಮೇ 29: ಲೋಕಸಭಾ ಚುನಾವಣೆಯಲ್ಲಿ ದಾಖಲಾರ್ಹವಾದ ಜಯ ಸಾಧಿಸಿದ ನಂತರ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ರಚನೆಗೆ ಮುಂದಾಗಿದೆ. ಆ ನಿಟ್ಟಿನಲ್ಲಿ ಗುರುವಾರದಂದು ರಾತ್ರಿ ಏಳು ಗಂಟೆಗೆ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಹೊಸ ಸರ್ಕಾರ ರಚನೆಗೂ ಮುನ್ನವೇ ಬಿಜೆಪಿಗೆ ಆಘಾತಕಾರಿ ಸುದ್ದಿ
ಈ ಮಧ್ಯೆ ಕೇಂದ್ರ ಸಚಿವ ಸಂಪುಟದಲ್ಲಿ ತುಂಬ ಮುಖ್ಯವಾದ ಹಣಕಾಸು ಸಚಿವ ಹುದ್ದೆಯನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಚರ್ಚೆ ಆಗುತ್ತಿದೆ. ಏಕೆಂದರೆ ಅನಾರೋಗ್ಯದ ಕಾರಣ ನೀಡಿರುವ ಅರುಣ್ ಜೇಟ್ಲಿ, ನನ್ನನ್ನು ಸಂಪುಟಕ್ಕೆ ಪರಿಗಣಿಸಬಾರದು ಎಂದು ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ.
ನವದೆಹಲಿಯಲ್ಲಿ ಇರುವ ಅರುಣ್ ಜೇಟ್ಲಿ ಅವರ ನಿವಾಸಕ್ಕೆ ಸ್ವತಃ ನರೇಂದ್ರ ಮೋದಿ ಬುಧವಾರ ರಾತ್ರಿ ಭೇಟಿ ನೀಡಿ, ಸಂಪುಟ ಸೇರುವಂತೆ ಮನವೊಲಿಸಲು ಯತ್ನಿಸಿದ್ದಾರೆ. ಅನಾರೋಗ್ಯದ ಸಮಸ್ಯೆ ಎದುರಿಸುತ್ತಿರುವ ಅರುಣ್ ಜೇಟ್ಲಿ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಕೂಡ ಮಾಡಿರಲಿಲ್ಲ. ಆದರೆ ಜಿಎಸ್ ಟಿ ಜಾರಿ ಸೇರಿದಂತೆ ಸರಕಾರದ ಪ್ರಮುಖ ಯೋಜನೆಗಳ ಅನುಷ್ಠಾನ ಹಾಗೂ ಸಮರ್ಥನೆಯಲ್ಲಿ ಸಚಿವರಾಗಿ ಅರುಣ್ ಜೇಟ್ಲಿ ಪಾತ್ರ ಪ್ರಮುಖವಾಗಿತ್ತು ಎಂಬುದು ಉಲ್ಲೇಖಾರ್ಹ.
ಅರುಣ್ ಜೇಟ್ಲಿ ವೃತ್ತಿಯಿಂದ ವಕೀಲರು. ಆ ನಂತರ ರಾಜಕೀಯಕ್ಕೆ ಬಂದವರು. ಕಳೆದ ಅವಧಿಯಲ್ಲಿ ನರೇಂದ್ರ ಮೋದಿ ಸಂಪುಟದ ಪ್ರಮುಖ ಸಚಿವರು. ಪಕ್ಷದಲ್ಲಿ ಮುಖ್ಯ ಟ್ರಬಲ್ ಶೂಟರ್ ಕೂಡ ಹೌದು. ಎರಡು ದಶಕಗಳಿಂದ ಕನಸಾಗಿ ಕಂಡಿದ್ದ ಜಿಎಸ್ ಟಿ ಜಾರಿಯಲ್ಲಿ ಜೇಟ್ಲಿ ಶ್ರಮ ಸಾಕಷ್ಟಿದೆ.
ಮೊದಲಿಗೆ ಅಧಿಕಾರ ವಹಿಸಿಕೊಂಡ ಜೇಟ್ಲಿ ಹೆಗಲಿ ಮೋದಿ ವಹಿಸಿದ್ದು ಮೂರು ಇಲಾಖೆ ಜವಾಬ್ದಾರಿಯನ್ನು. ಹಣಕಾಸು, ರಕ್ಷಣೆ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯಗಳು. ಆದರೆ ಅವೆಲ್ಲವನ್ನೂ ನಿಭಾಯಿಸಿದ ಹೊರತಾಗಿಯೂ ಜೇಟ್ಲಿ ಅವರ ಆರೋಗ್ಯ ಹದಗೆಡುತ್ತಾ ಹೋಯಿತು.
ಮಧುಮೇಹಿಯಾದ ಅವರು, ಕಳೆದ ವರ್ಷ ಮೇ ತಿಂಗಳಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡರು. ಆ ನಂತರ ಅವರ ಸ್ಥಿತಿ ಮತ್ತಷ್ಟು ವಿಷಮವಾಯಿತು. ಈ ಬಾರಿಯ ಮಧ್ಯಂತರ ಬಜೆಟ್ ಮಂಡಿಸಲು ಜೇಟ್ಲಿಗೆ ಸಾಧ್ಯವಾಗಲಿಲ್ಲ. ಆಗ ಅಮೆರಿಕದಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು.
ಅಮಿತ್ ಶಾ ಹಾಗೂ ನರೇಂದ್ರ್ ಮೋದಿ ಇಬ್ಬರ ಪಾಲಿಗೂ ಅತ್ಯಂತ ನಂಬಿಕಸ್ಥ ವ್ಯಕ್ತಿ ಅರುಣ್ ಜೇಟ್ಲಿ. ಈ ಬಾರಿಯೂ ಅವರು ಹಣಕಾಸು ಸಚಿವರಾಗ ಬೇಕಿತ್ತು. ಆದರೆ ತಮ್ಮ ಆರೋಗ್ಯ ಸ್ಥಿತಿ ಸೂಕ್ಷ್ಮ ಇರುವುದರಿಂದ ನನ್ನನ್ನು ಸಂಪುಟಕ್ಕೆ ಪರಿಗಣಿಸಬೇಡಿ ಎಂದು ಮನವಿ ಮಾಡಿದರು.
ಭಾರತವು ಆರ್ಥಿಕ ಹಿಂಜರಿತದ ಭೀತಿ ಎದುರಿಸುತ್ತಿದೆ. ದೇಶದ ವಿತ್ತೀಯ ಕೊರತೆಗೆ ಆರ್ಥಿಕ ಚೈತನ್ಯ ತುಂಬ ಬೇಕಿದೆ. ಇಂಥ ಸನ್ನಿವೇಶದಲ್ಲಿ ಒಂದು ವೇಳೆ ಅರುಣ್ ಜೇಟ್ಲಿ ಸಂಪುಟ ಸೇರಲಿಲ್ಲ ಅಂದರೆ ಪಿಯೂಷ್ ಗೋಯಲ್ ಅವರು ಹಣಕಾಸು ಖಾತೆ ವಹಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿಂದೆ ಜೇಟ್ಲಿ ಅನುಪಸ್ಥಿತಿಯಲ್ಲಿ ಆ ಹುದ್ದೆಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದರು.