ವಿಜಯೋತ್ಸವ ಭಾಷಣದಲ್ಲಿ ನರೇಂದ್ರ ಮೋದಿ ಟಾಪ್ 10 ಹೇಳಿಕೆಗಳು
ನವದೆಹಲಿ, ಮಾರ್ಚ್ 13: ಪ್ರಧಾನಿ ನರೇಂದ್ರ ಮೋದಿ ಅದ್ಭುತ ಮಾತುಗಾರರು ಎಂಬುದು ಈಗಾಗಲೇ ರುಜುವಾತು ಆಗಿರುವ ಸಂಗತಿ. ತಮ್ಮ ಕನಸುಗಳನ್ನು ಎದುರಿಗೆ ಮಾತು ಕೇಳುತ್ತಿರುವವರಿಗೆ ದಾಟಿಸುವಲ್ಲಿ ತುಂಬ ಸಮರ್ಥರು. ಆ ಕಾರಣಕ್ಕೆ ಅವರನ್ನು ಜಾದೂಗಾರ ಎನ್ನುವವರಿದ್ದಾರೆ. ನವದೆಹಲಿಯ ಬಿಜೆಪಿ ಮುಖ್ಯಕಚೇರಿಯಲ್ಲಿ ಭಾನುವಾರ ಮಾಡಿದ ಚುನಾವಣೆ ವಿಜಯದ ಭಾಷಣದಲ್ಲಿ ಅದು ಮತ್ತೊಮ್ಮೆ ಗೊತ್ತಾಗಿದೆ.
ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ನ ಅಭೂತಪೂರ್ವ ಜಯದಿಂದ ಉಲ್ಲಸಿತರಾಗಿರುವ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳಿಗೆ ಮೋದಿ ಮಾತುಗಳು ಮತ್ತಷ್ಟು ಉತ್ತೇಜನಗೊಳಿಸಿದವು. ನವ ಭಾರತ, ವಿಷನ್ 2022, ಬಡವರು ಹಾಗೂ ಮಧ್ಯಮವರ್ಗದವರು ಹೇಳಿಕೆಗಳು ಭಾನುವಾರ ಭಾಷಣ ಕೇಳಲು ಸೇರಿದ್ದವರನ್ನು ಮತ್ತಷ್ಟು ಭರವಸೆ ಇರಿಸಿಕೊಳ್ಳುವಂತೆ ಮಾಡಿದವು.[ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿರುಗಾಳಿ ಎಬ್ಬಿಸಿದ ಮೋದಿ 9 ಹೇಳಿಕೆ]
ಬಿಜೆಪಿ ಅಭಿಮಾನಿಗಳನ್ನು ಉದ್ದೇಶಿಸಿ ಮಾಡಿದ ಭಾಷಣವೇ ಆದರೂ ಪ್ರಧಾನಿ ನರೇಂದ್ರ ಮೋದಿ ಮಾತುಗಳು ಇಡೀ ದೇಶಕ್ಕೆ ನೀಡುತ್ತಿರುವ ಸಂದೇಶದಂತೆ ಇದ್ದವು. ಆ ವಿಜಯ ಸಂಭ್ರಮ ಭಾಷಣದ ಟಾಪ್ 10 ಹೇಳಿಕೆಗಳು ಇಲ್ಲಿವೆ.[ಉತ್ತರಪ್ರದೇಶದಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ 10 ಕಾರಣ]
ಹೆಚ್ಚಿನ ಮತದಾನ-ಹೆಚ್ಚಿನ ಗೆಲುವು
ಹೆಚ್ಚಿನ ಪ್ರಮಾಣದ ಮತದಾನವು ಇಷ್ಟು ದೊಡ್ಡ ಗೆಲುವಿಗೆ ಕಾರಣವಾಗಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಡುತ್ತಿದ್ದಾರೆ.
ಹೊಸ ಭಾರತ
ಈಗ ಭಾರತ ಬರೀ ಪಡೆಯುವುದನ್ನು ಬಯಸುತ್ತಿಲ್ಲ, ಕೊಡುಗೆ ನೀಡಲು ಬಯಸುತ್ತಿದೆ. ನಾನು ಹೊಸ ಭಾರತವನ್ನು ನೋಡುತ್ತಿದ್ದೇನೆ.
ಭಾವನಾತ್ಮಕ ವಿಷಯಗಳ ಅಲೆ
ಭಾವನಾತ್ಮಕ ವಿಷಯಗಳು ಅಲೆಯನ್ನು ಸೃಷ್ಟಿಸಿ, ಚುನಾವಣೆ ಮೇಲೆ ಪ್ರಭಾವ ಬೀರುತ್ತವೆ. ಪಕ್ಷಗಳು ಭಾವನಾತ್ಮಕ ವಿಷಯಗಳ ಅಲೆ ಸೃಷ್ಟಿಸಿ ಯಾವಾಗಲೂ ಗೆದ್ದಿವೆ. ಆದರೆ ಅಭಿವೃದ್ಧಿ ವಿಚಾರಗಳ ಮೇಲೆ ಚುನಾವಣೆ ನಡೆಸಿಲ್ಲ. ಆದರೆ ನಾವು ಅದನ್ನು ಮಾಡಿದ್ದೇವೆ.
ಭಾರತದ ಬಡವರಲ್ಲಿ ಸಾಮರ್ಥ್ಯ
ಭಾರತದ ಬಡವರಲ್ಲಿ ಸಾಮರ್ಥ್ಯ ನೋಡುತ್ತಿದ್ದೇನೆ. ಅವರಿಗೆ ಕಲ್ಯಾಣ ಯೋಜನೆಗಳ ಭರವಸೆಗಿಂತ ಅವಕಾಶಗಳು ಬೇಕಾಗಿವೆ. ಸದಾ ಅನುಕೂಲ ಪಡೆಯುತ್ತಿರಬೇಕು ಎಂಬುದು ಅವರ ಇರಾದೆಯಲ್ಲ. ಅವರ ಸ್ಥಿತಿ ಸುಧಾರಣೆಗೆ ಸರಿಯಾದ ಜಾಗಕ್ಕಾಗಿ ಎದುರು ನೋಡುತ್ತಿದ್ದಾರೆ.
ಮಧ್ಯಮವರ್ಗದವರ ಮೇಲೆ ಹೆಚ್ಚು ಹೊರೆ
ಈ ದೇಶದಲ್ಲಿ ಮಧ್ಯಮವರ್ಗದವರ ಮೇಲೆ ಹೆಚ್ಚು ಹೊರೆ ಬಿದ್ದಿದೆ. ಭಾರತದ ಬಡವರು ತಮ್ಮ ಭಾರವನ್ನು ತಾವು ಹೊರುವಂತಾದ ದಿನ ಮಧ್ಯಮವರ್ಗದವರಿಗೆ ಮುಕ್ತಿ ಸಿಗುತ್ತದೆ.
ನಮ್ಮಿಂದ ತಪ್ಪುಗಳಾಗಬಹುದು
ನಾವು ಹೊಸಬರು. ನಮ್ಮಿಂದ ತಪ್ಪುಗಳಾಗಬಹುದು. ಆದರೆ ನಮ್ಮ ಉದ್ದೇಶದಲ್ಲಿ ಯಾವತ್ತಿಗೂ ತಪ್ಪುಗಳಿಲ್ಲ.
ಸರಕಾರ ರಚನೆ ಬಹುಮತದಿಂದ, ಆದರೆ ನಡೆಯೋದು ಸಹಮತದಿಂದ
ಬಹುಪಾಲು ಜನ ನಮಗೆ ಮತ ನೀಡಿದ್ದಾರೆ ಎಂದು ಸರಕಾರ ರಚಿಸಿದ್ದೀವಿ. ಆದರೆ ಎಲ್ಲರೂ ನಮ್ಮನ್ನು ಒಪ್ಪಿದರಷ್ಟೇ ಸರಕಾರ ನಡೆಸಲು ಸಾಧ್ಯ. ಸರಕಾರವು ಬಹುಮತದಿಂದ ಆಗುತ್ತದೆ. ಆದರೆ ನಡೆಯೋದು ಮಾತ್ರ ಸಹಮತದಿಂದಲೇ.
ಎಲ್ಲರಿಗಾಗಿಯೂ ಕೆಲಸ
ನಮ್ಮ ಸರಕಾರವು ನಮಗೆ ಮತ ನೀಡಿದವರು ಹಾಗೂ ನೀಡದವರು ಎಲ್ಲರಿಗಾಗಿಯೂ ಕೆಲಸ ಮಾಡುತ್ತದೆ. ನಮ್ಮ ಸರಕಾರವು ನಮ್ಮೊಂದಿಗೆ ಹೆಜ್ಜೆ ಹಾಕುತ್ತಿರುವರಿಗಾಗಿ ಹಾಗೂ ನಮ್ಮನ್ನು ವಿರೋಧಿಸುತ್ತಿರುವವರಿಗಾಗಿ ಕೆಲಸ ಮಾಡುತ್ತದೆ.
ಶ್ರಮ ಹಾಕಿ ಕೆಲಸ ಮಾಡ್ತೀನಿ
ನನ್ನಿಂದ ಎಷ್ಟು ಸಾಧ್ಯವಾಗುತ್ತದೋ ಅಷ್ಟೂ ಶ್ರಮ ಹಾಕಿ ಕೆಲಸ ಮಾಡ್ತೀನಿ. ಆ ಬಗ್ಗೆ ಜನರು ಕೇಳಿದಾಗ, ಆ ಮಾತು ಕೇಳುವುದೇ ಗೌರವ ಎನಿಸುತ್ತದೆ.
ನನ್ನ ಗುರಿ 2022
ಚುನಾವಣೆಗಳು ನನಗೆ ವಿಷಯವೇ ಅಲ್ಲ. ನನ್ನ ಗುರಿ 2022. ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ. ನಾನು ಎಲ್ಲರನ್ನೂ ಕೇಳಿಕೊಳ್ತೀನಿ ಭಾರತಕ್ಕಾಗಿ ಕೆಲಸ ಮಾಡಿ, ನವ ಭಾರತ ನಿರ್ಮಾಣಕ್ಕಾಗಿ ಕೆಲಸ ಮಾಡಿ.