'ಸೈನಿಕರ ಸಾವಿನ ಹಿಂದೆ ಬಚ್ಚಿಟ್ಟುಕೊಂಡಿದ್ದಾರೆ ಮೋದಿ'
ನವದೆಹಲಿ, ಅಕ್ಟೋಬರ್ 7: ನರೇಂದ್ರ ಮೋದಿ ಅವರು ಸೈನಿಕರ ತ್ಯಾಗವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉರಿ ಸೇನಾ ಕ್ಯಾಂಪ್ ಮೇಲಿನ ದಾಳಿಗೆ ಪ್ರತೀಕಾರವಾಗಿ ಭಾರತ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿ, ಭಯೋತ್ಪಾದಕರನ್ನು ಕೊಂದಿತ್ತು. ಇದೇ ವಿಚಾರವಾಗಿ ರಾಹುಲ್ ಗಾಂಧಿ ಮಾತನಾಡಿದರು.
ಗುಜರಾತ್ ನಲ್ಲಿ 2007ರ ಚುನಾವಣೆ ಪ್ರಚಾರದ ವೇಳೆ ನರೇಂದ್ರ ಮೋದಿ ಅವರನ್ನು ಸೋನಿಯಾ ಗಾಂಧಿ 'ಸಾವಿನ ವ್ಯಾಪಾರಿ' ಎಂದು ಕರೆದಿದ್ದರು. ಗುರುವಾರ ದೆಹಲಿಯ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿ, ನಮ್ಮ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಕಾಶ್ಮೀರದಲ್ಲಿ ಪ್ರಾಣ ನೀಡಿದ್ದಾರೆ. ಅವರು ಭಾರತಕ್ಕಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ.[ಸರ್ಜಿಕಲ್ ಸ್ಟ್ರೈಕ್: ಮೋದಿಯನ್ನು ಅಭಿನಂದಿಸಿದ ರಾಹುಲ್ ಗಾಂಧಿ]

ಅವರ ಸಾವಿನ ಹಿಂದೆ ನೀವು ಬಚ್ಚಿಟ್ಟುಕೊಂಡಿದ್ದೀರಿ. ಅವರ ಸಾವಿನ ಮಾರಾಟ ಮಾಡ್ತಿದ್ದೀರಿ. ಇದು ಖಂಡಿತ ತಪ್ಪು ಎಂದು ಕಿಡಿ ಕಾರಿದ್ದಾರೆ. ಇದೇ ಸರಿಯಾದ ಸಮಯ. ಸೈನಿಕರ ಮನವಿಯನ್ನು ಕೇಳಿಸಿಕೊಳ್ಳಿ. ಅವರಿಗೆ ಏಳನೇ ವೇತನ ಆಯೋಗದ ವರದಿಯನ್ನು ಜಾರಿ ಮಾಡಿ ಎಂದಿದ್ದಾರೆ ರಾಹುಲ್ ಗಾಂಧಿ.[ಕಿಸಾನ್ ಮಹಾಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಶೂ ಎಸೆತ]
ತಮ್ಮ ಭಾಷಣದಲ್ಲಿ, ಮೋದಿ ಸರಕಾರ ಚುನಾವಣೆ ವೇಳೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು, ಎಲ್ಲರ ಬ್ಯಾಂಕ್ ಖಾತೆಗಳಿಗೆ ಹದಿನೈದು ಲಕ್ಷ ಹಾಕಿದ್ದು ಎಲ್ಲಿ? ವಾರ್ಷಿಕ ಎರಡು ಕೋಟಿ ಉದ್ಯೋಗ ಎಲ್ಲಿ? ರೈತರಿಗೆ ಕೊಡುತ್ತೇವೆ ಎಂದಿದ್ದ ಬೆಂಬಲ ಬೆಲೆ ಎಲ್ಲಿ? ಕ್ಲೀನ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಕನೆಕ್ಟ್ ಇಂಡಿಯಾ ಎಲ್ಲವೂ ವಿಫಲವಾಗಿದೆ ಎಂದು ವ್ಯಂಗ್ಯವಾಡಿದರು.












Click it and Unblock the Notifications