ಕೆಆರ್ಎಸ್ ಅಣೆಕಟ್ಟು ಸುತ್ತ ಗಣಿಗಾರಿಕೆ: ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಸುಮಲತಾ
ನವದೆಹಲಿ, ಆಗಸ್ಟ್ 06: ಕೆಆರ್ಎಸ್ ಅಣೆಕಟ್ಟು ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸಂಸತ್ತಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಪ್ರಸ್ತಾಪ ಮಾಡಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಸುಮಲತಾ ಅಂಬರೀಶ್, "ಕೆಆರ್ಎಸ್ ಜಲಾಶಯ ಸುತ್ತಮುತ್ತ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದಕ್ಕಾಗಿ ರಸಾಯನಿಕ ಸ್ಫೋಟಕಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲದ ಗುಣಮಟ್ಟ ಕುಸಿದಿದೆ. ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ. ವಾಯುಮಾಲಿನ್ಯದಿಂದ ಜನರಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುಬೇಕು,'' ಎಂದು ಒತ್ತಾಯಿಸಿದರು.
"ಕೇಂದ್ರ ಸರ್ಕಾರ ಕೂಡಲೇ ಕೆಆರ್ಎಸ್ ಅಣೆಕಟ್ಟು ಸುತ್ತಮುತ್ತಲಿನ ಅಕ್ರಮ ಗಣಿಗಾರಿಕೆ ನಿಲ್ಲಿಸಿ, ಗ್ರಾಮಗಳನ್ನು ಉಳಿಸಬೇಕು ಮತ್ತು ಇವುಗಳ ಮೇಲ್ವಿಚಾರಣೆ ಮಾಡಬೇಕೆಂದು,'' ಮಂಡ್ಯ ಸಂಸದೆ ಸುಮಲತಾ ಮನವಿ ಮಾಡಿಕೊಂಡರು.

ಇದಕ್ಕೆ ಉತ್ತರಿಸಿದ ಕೇಂದ್ರ ಸಚಿವ ಭೂಪೇಂದ್ರ ಯಾದವ್, "34 ರಾಜ್ಯಗಳಲ್ಲಿ 1,140 ವಾಯು ನಿಯಂತ್ರಣ ಕೇಂದ್ರಗಳು ಸ್ಥಾಪಿಸಿದ್ದು, ಮಂಡ್ಯ ಕ್ಷೇತ್ರದ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು,'' ಎಂದು ಉತ್ತರ ನೀಡಿದರು.
"ನನ್ನ ಹೋರಾಟ ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವುದಾಗಿದೆ. ನನ್ನ ಹೋರಾಟದತ್ತ ನನ್ನ ಗಮನ ಇರುತ್ತಷ್ಟೇ," ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಇತ್ತೀಚಿಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸುಮಲತಾ, "ನಾನು ಸಮಸ್ಯೆ ಸೃಷ್ಟಿಸಿಲ್ಲ, ಯಾರು ಸಮಸ್ಯೆ ಸೃಷ್ಟಿಸಿದ್ದಾರೋ ಅವರು ಅರ್ಥ ಮಾಡಿಕೊಂಡರೆ ಸಾಕು. ಅಕ್ರಮ ಗಣಿಗಾರಿಕೆ ನಿಲ್ಲಿಸುವ ವಿಚಾರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಕಷ್ಟ ಅಂತ ನನಗೂ ಗೊತ್ತು. ಆದರೆ ನನ್ನ ಪ್ರಯತ್ನ ನಾನು ಮಾಡುತ್ತೇನೆ. ಸಂಸತ್ನಲ್ಲೂ ಮಂಡ್ಯ ಅಕ್ರಮ ಗಣಿಗಾರಿಕೆ ವಿಚಾರ ಪ್ರಸ್ತಾಪ ಮಾಡುತ್ತೇನೆ. ಅಕ್ರಮ ಗಣಿಗಾರಿಕೆ ಬಗ್ಗೆ ಎಲ್ಲರ ಗಮನಕ್ಕೆ ತಂದಿದ್ದೇನೆ. ನನ್ನ ಹೋರಾಟ ನನ್ನ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವುದಾಗಿದೆ. ನನ್ನ ಹೋರಾಟದತ್ತ ನನ್ನ ಗಮನ ಇರುತ್ತದೆ. ನಾನು ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ,'' ಎಂದು ತಿಳಿಸಿದ್ದರು.

ಮಂಡ್ಯದ 22 ಅಕ್ರಮ ಗಣಿಗಾರಿಕೆ ಪರವಾನಗಿ ರದ್ದು
ಮಂಡ್ಯ ಜಿಲ್ಲೆ ಹಾಗೂ ಕೆಆರ್ಎಸ್ ಜಲಾಶಯದ ಸುತ್ತಮುತ್ತ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಕೆಆರ್ಎಸ್ ಜಲಾಶಯಕ್ಕೆ ಹಾನಿಯಾಗುತ್ತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಧ್ವನಿ ಎತ್ತಿದ್ದಾರೆ.
ಕೆಆರ್ಎಸ್ ಜಲಾಶಯದ ಸುತ್ತಮುತ್ತ ಅಕ್ರಮ ಕಲ್ಲು ಗಣಿಗಾರಿಕೆ ವಿವಾದ ರಾಜಕೀಯ ತಿರುವು ಕೂಡ ಪಡೆದಿತ್ತು. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಸಂಸದೆ ಸುಮಲತಾ ಅಂಬರೀಶ್ ಒತ್ತಾಯಿಸಿದ್ದರು. ಈ ಕುರಿತು ಅಂದಿನ ಗಣಿ ಸಚಿವ ಮುರುಗೇಶ್ ನಿರಾಣಿಯವರ ಗಮನಕ್ಕೂ ತರಲಾಗಿತ್ತು. ಅಲ್ಲದೆ ಕೇಂದ್ರ ಜಲ ಸಂಪನ್ಮೂಲ ಸಚಿವರು, ಕೇಂದ್ರ ಗೃಹ ಸಚಿವರನ್ನೂ ಭೇಟಿಯಾಗಿ ವಿಷಯ ಗಮನಕ್ಕೆ ತಂದಿದ್ದರು.
ಮಂಡ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜುಲೈ 28 ರಂದು ನಡೆದ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ(ಗಣಿ) ಸಭೆಯಲ್ಲಿ ಅವಧಿ ವಿಸ್ತರಿಸಿ ನೀಡಿದ ಕಲ್ಲು ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಪ್ರಾಧಿಕಾರದಿಂದ ಇದುವರೆಗೂ ಪರಿಸರ ವಿಮೋಚನಾ ಪತ್ರವನ್ನು ಪಡೆದು ಕಚೇರಿಗೆ ಹಾಜರುಪಡಿಸದೆ ಇರುವ 22 ಕಲ್ಲುಗಣಿ ಗುತ್ತಿಗೆಗಳನ್ನು ರದ್ದುಪಡಿಸಲು ನಿರ್ಣಯಿಸಲಾಗಿದೆ.
ಮಂಡ್ಯ ಜಿಲ್ಲೆಯಾದ್ಯಂತ ಪರಿಸರ ವಿಮೋಚನಾ ಪತ್ರ ಪಡೆಯದೆ ಇದ್ದ 22 ಕಲ್ಲು ಗಣಿ ಗುತ್ತಿಗೆಗಳನ್ನು ಜುಲೈ 31ರಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ನಾಗಮಂಗಲ ತಾಲ್ಲೂಕುಗಳಲ್ಲಿ ಅನಧಿಕೃತ ಕಲ್ಲುಗಣಿಗಾರಿಕೆ, ಸಾಗಾಣಿಕೆ ನಿಯಂತ್ರಣ ಸಂಬಂಧ ಜಿಲ್ಲಾ ಟಾಸ್ಕ್ಫೋರ್ಸ್ ವತಿಯಿಂದ ತಾಲ್ಲೂಕುವಾರು ಕಂದಾಯ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್ರಾಜ್ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳನ್ನು ಒಳಗೊಂಡಂತೆ ಚಾಲಿತ ದಳವನ್ನು ರಚಿಸಲಾಗಿದೆ. ಅದರಂತೆ ಚಾಲಿತ ದಳವು ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಡಳಿತ ಮಾಧ್ಯಮ ಪ್ರಕಟಣೆ ಹೊರಡಿಸಿತ್ತು.












Click it and Unblock the Notifications