ಕೃಷಿ ಮಸೂದೆ ವಾಪಸ್ ಕಳುಹಿಸುವಂತೆ ರಾಷ್ಟ್ರಪತಿಗೆ ಮನವಿ
ನವದೆಹಲಿ, ಸಪ್ಟೆಂಬರ್.24: ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಕೃಷಿ ಸಂಬಂಧಿತ ಮಸೂದೆಗಳನ್ನು ವಾಪಸ್ ಕಳುಹಿಸುವಂತೆ ವಿರೋಧ ಪಕ್ಷದ ಸಂಸದ ಗುಲಾಮ್ ನಬಿ ಆಜಾದ್ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರನ್ನು ಭೇಟಿ ಮಾಡಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭೇಟಿ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿತ ಎರಡು ಮಸೂದೆಗಳನ್ನು ಅಸಂವಿಧಾನಿಕವಾಗಿ ಅಂಗೀಕಾರಗೊಂಡಿವೆ. ಈ ಮಸೂದೆಗಳಲ್ಲಿ ತಿದ್ದುಪಡಿಗೊಳಿಸುವ ಅಗತ್ಯವಿದೆ. ಹೀಗಾಗಿ ಮಸೂದೆಗಳಿಗೆ ಅಂಕಿತ ಹಾಕದೇ ವಾಪಸ್ ಕಳುಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ ಎಂದು ಗುಲಾಮ್ ನಬಿ ಆಜಾದ್ ತಿಳಿಸಿದ್ದಾರೆ.
"ಕೇಂದ್ರ ಸರ್ಕಾರವು ಕೃಷಿ ಸಂಬಂಧಿತ ಮಸೂದೆಗಳ ಅಂಗೀಕಾರಕ್ಕೂ ಮೊದಲು ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲ ಸಂಸದರ ಜೊತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದರೆ, ಅಂಥ ಮಸೂದೆಯಿಂದ ದೇಶದ ರೈತರಿಗೂ ಸಹಾಯವಾಗುತ್ತಿತ್ತು. ಆದರೆ ಸರ್ಕಾರ ಇದ್ಯಾವ ಕೆಲಸವನ್ನೂ ಮಾಡಿಲ್ಲ" ಎಂದು ಅವರು ದೂಷಿಸಿದ್ದಾರೆ.

ಸ್ಥಾಯಿ ಸಮಿತಿ, ಆಯ್ಕೆ ಸಮಿತಿಯಿಲ್ಲ:
ಕೃಷಿ ಸಂಬಂಧಿತ ಎರಡು ಮಸೂದೆಗಳನ್ನು ಕಳುಹಿಸುವ ಮೊದಲು ಕೇಂದ್ರ ಸರ್ಕಾರವು ಯಾವುದೇ ರೀತಿ ಅಭಿಪ್ರಾಯ ಸಂಗ್ರಹಿಸುವ ಕಾರ್ಯವನ್ನು ಮಾಡಿಲ್ಲ. ಮಸೂದೆಗಳ ಮರು ಪರಿಶೀಲನೆಗೆ ಆಯ್ಕೆ ಸಮಿತಿಯೂ ಇಲ್ಲ, ಸ್ಥಾಯಿ ಸಮಿತಿಯೂ ಇಲ್ಲ. ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರದ ಸಂದರ್ಭದಲ್ಲಿ ಮಿತಿಮೀರಿ ವರ್ತಿಸಲಾಗಿದೆ. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿರುವ ಭಾರತದಲ್ಲಿ ಸಂವಿಧಾನಕ್ಕೆ ಅವಮಾನ ಮಾಡುವ ನಿಟ್ಟಿನಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ಸಂಸದ ಗುಲಾಮ್ ನಬಿ ಆಜಾದ್ ಆರೋಪಿಸಿದ್ದಾರೆ.
ಬುಧವಾರವಷ್ಟೇ ಕೃಷಿ ಸಂಬಂಧಿತ ಮಸೂದೆಗಳನ್ನು ಹೇಗೆ ಅಂಗೀಕಾರಗೊಳಿಸಲಾಗಿದೆ ಎನ್ನುವುದರ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆಯುವುದಕ್ಕೆ 18 ವಿರೋಧಪಕ್ಷಗಳ ನಾಯಕರು ತೀರ್ಮಾನಿಸಿದ್ದರು.












Click it and Unblock the Notifications