Breaking: ಜೂನ್ 31ರವರೆಗೂ ಇಡಿ ಕಸ್ಟಡಿಗೆ ಆರೋಗ್ಯ ಸಚಿವ ಸತ್ಯೇಂದ್ರ ಜೈನ್
ನವದೆಹಲಿ, ಮೇ 31: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಂಧಿಸಲ್ಪಟ್ಟ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜೂನ್ 9ರವರೆಗೂ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
2015-16ನೇ ಸಾಲಿನಲ್ಲಿ ಕೋಲ್ಕತ್ತಾ ಮೂಲದ ಸಂಸ್ಥೆಯೊಂದಿಗೆ ಹವಾಲಾ ವ್ಯವಹಾರದಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಭಾಗಿಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಸಿದ್ದಾರೆ. ಕಳೆದ ಜನವರಿ ತಿಂಗಳಿನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮ ಸರ್ಕಾರದ ಆರೋಗ್ಯ ಸಚಿವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಸ್ವತಃ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭವಿಷ್ಯ ನುಡಿದಿದ್ದರು.
ಸತ್ಯೇಂದ್ರ ಜೈನ್ ತಪ್ಪು ಮಾಡಿದ್ದರೆ ನಾವೇ ಕ್ರಮ ತೆಗೆದುಕೊಳ್ಳುತ್ತಿದ್ದೆವು: ಅರವಿಂದ್ ಕೇಜ್ರಿವಾಲ್
ಸೋಮವಾರ ಇಡಿ ಅಧಿಕಾರಿಗಳು ಜೈನ್ ಅವರನ್ನು ಬಂಧಿಸಿದ್ದು, ಮಂಗಳವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೋರ್ಟ್ ಆವರಣದಲ್ಲಿ ನಡೆದ ವಿಚಾರಣೆ ಹೇಗಿತ್ತು?, ಯಾವ ಪ್ರಕರಣದಲ್ಲಿ ಸತ್ಯೇಂದ್ರ ಜೈನ್ ಬಂಧಿಸಲಾಗಿದೆ? ಕೇಂದ್ರ ಸರ್ಕಾರದ ಬಗ್ಗೆ ಅರವಿಂದ್ ಕೇಜ್ರಿವಾಲ್ ಕೆಂಡ ಕಾರುವುದಕ್ಕೆ ಕಾರಣವೇನು ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.
ದೆಹಲಿ ಕೋರ್ಟ್ ಆವರಣದಲ್ಲಿ ನಡೆದಿದ್ದೇನು?
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂದಿಸಿದಂತೆ ಹಣದ ಮೂಲವನ್ನು ಪತ್ತೆ ಮಾಡಬೇಕಾಗಿದ್ದು, 14 ದಿನಗಳ ಕಾಲ ಆರೋಪಿಯನ್ನು ಕಸ್ಟಡಿಗೆ ನೀಡುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡರು. "ಹಣದ ಜಾಡು ಪತ್ತೆ ಮಾಡಬೇಕಾಗಿದೆ. ಹಣವು ಅವರದ್ದಾ ಅಥವಾ ಅವರು ಬೇರೆಯವರಿಂದ ಹಣವನ್ನು ಲಪಟಾಯಿಸುತ್ತಿದ್ದರಾ ಎಂಬುದು ನಮಗೆ ತಿಳಿದಿಲ್ಲ. ಹಣ ಸಂಪಾದಿಸುವುದಕ್ಕೆ ಬೇರೆ ಮಾರ್ಗಗಳೂ ಇದ್ದವೇ ಎಂಬುದನ್ನು ನಾವು ನೋಡಬೇಕಾಗಿದೆ," ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು. ಆರೋಪಿ ಸಂಬಂಧಿಕರಾದ ಅಂಕುಶ್ ಮತ್ತು ವೈಭವ್ ಜೈನ್ ಎಂಬುವರು ಅಫಿಡವಿಟ್ ಮೇಲೆ ಹೇಳಿಕೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಸತ್ಯೇಂದ್ರ ಜೈನ್ ಪರ ವಕೀಲ ಹರಿಹರನ್ ವಾದ ಮಂಡನೆ
ದೆಹಲಿ ಆರೋಗ್ಯ ಸಚಿವ ಹಾಗೂ ಪ್ರಕರಣದ ಆರೋಪಿ ಸತ್ಯೇಂದ್ರ ಜೈನ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಎನ್ ಹರಿಹರನ್ ಹೇಳಿದರು. "ಈಗಾಗಲೇ ಎರಡು ಬಾರಿ ಅವರ ಮನೆ ಮೇಲೆ ದಾಳಿ ನಡೆಸಿ ಶೋಧಿಸಲಾಗಿದೆ. ಅವರ ಬ್ಯಾಂಕ್ ಖಾತೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ," ಎಂದು ಹೇಳಿದರು. ಆದರೆ ಅಂತಿಮವಾಗಿ ನ್ಯಾಯಾಲಯವು ಸತ್ಯೇಂದ್ರ ಜೈನ್ ಅವರನ್ನು ಜೂನ್ 9 ರವರೆಗೆ ಕೇಂದ್ರ ಸಂಸ್ಥೆಯ ವಶಕ್ಕೆ ಒಪ್ಪಿಸಿತು.
ಸತ್ಯೇಂದ್ರ ಜೈನ್ ವಿರುದ್ಧದ ಪ್ರಕರಣವೇನು?
ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಪ್ರಾರಂಭಿಸಿತು.
ಕಳೆದ 2015-2016ರಲ್ಲಿ ಸತ್ಯೇಂದ್ರ ಜೈನ್ ಸಾರ್ವಜನಿಕ ಸೇವಕರಾಗಿದ್ದ ವೇಳೆ ಅವರ ಒಡೆತನದ ಮತ್ತು ನಿಯಂತ್ರಣದ ಕಂಪನಿಗಳು ಹವಾಲಾ ಜಾಲದ ಮೂಲಕ ಶೆಲ್ ಕಂಪನಿಗಳಿಂದ 4.81 ಕೋಟಿ ರೂಪಾಯಿವರೆಗೆ ಹಣವನ್ನು ಪಡೆದಿದ್ದವು ಎಂದು ಹಣಕಾಸು ತನಿಖಾ ಸಂಸ್ಥೆಯ ತನಿಖೆ ವೇಳೆ ಬಹಿರಂಗವಾಗಿದೆ ಎಂದು ಇಡಿ ತಿಳಿಸಿದೆ.
ಕೋಲ್ಕತ್ತಾ ಮೂಲದ ಆಪರೇಟರ್ಗಳಿಗೆ ವರ್ಗಾವಣೆಯಾದ ನಗದು ವಿರುದ್ಧ ಜೈನ್ ಅವರಿಗೆ ಸಂಬಂಧಿಸಿದ ಕಂಪನಿಗಳಿಗೆ ಹಣ ಜಮಾ ಮಾಡಲಾಗಿದೆ. ದೆಹಲಿ ಮತ್ತು ಸುತ್ತಮುತ್ತಲಿನ ಕೃಷಿ ಭೂಮಿಯನ್ನು ಖರೀದಿಸಲು, ಸಾಲವನ್ನು ಮರುಪಾವತಿಸಲು ಈ ಹಣವನ್ನು ಬಳಸಲಾಗಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ. ಇದೇ ವರ್ಷದ ಏಪ್ರಿಲ್ನಲ್ಲಿ, ಅಕ್ರಮ ಆಸ್ತಿ ಪ್ರಕರಣದಲ್ಲಿ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು.
ಜೈನ್ ಬಂಧನದ ಬಗ್ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?
ಈ ವರ್ಷದ ಜನವರಿಯಲ್ಲಿ ನಡೆದ ಮೆರವಣಿಗೆಯೊಂದರಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ತಮ್ಮ ಸಹೋದ್ಯೋಗಿ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ ಎಂದಿದ್ದರು. "ನಮ್ಮ ಮೂಲಗಳ ಪ್ರಕಾರ, ಪಂಜಾಬ್ ಚುನಾವಣೆಗೆ ಮುಂಚೆಯೇ, ಮುಂಬರುವ ಕೆಲವೇ ದಿನಗಳಲ್ಲಿ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಿದೆ ಎಂದು ನಮಗೆ ತಿಳಿದಿದೆ. ಅವರಿಗೆ ಸ್ವಾಗತವಿದೆ. ಈ ಹಿಂದೆಯೂ, ಕೇಂದ್ರವು ಸತ್ಯೇಂದ್ರ ಜೈನ್ ಮೇಲೆ ದಾಳಿ ನಡೆಸಿತ್ತು, ಆದರೆ ಏನೂ ಸಿಕ್ಕಿರಲಿಲ್ಲ," ಎಂದು ಕೇಜ್ರಿವಾಲ್ ತಿಳಿಸಿದ್ದರು.