ಲೋಕಸಭೆಯಲ್ಲಿ ಸಿದ್ದಾರ್ಥ ಸಾವಿನ ಬಗ್ಗೆ ಚರ್ಚೆಗೆ ತಿವಾರಿ ಆಗ್ರಹ
ನವದೆಹಲಿ, ಜುಲೈ 31: "ಕೆಫೆ ಕಾಫಿ ಡೇ ಮಾಲೀಕ, ಉದ್ಯಮಿ ವಿ..ಜಿ.ಸಿದ್ಧಾರ್ಥ ಅವರ ಸಾವಿಗೆ ಐಟಿ ಇಲಾಖೆಯ ಕಿರುಕುಳ ಕಾರಣವಾಗಿರಬಹುದು" ಎಂಬ ಸಂಶಯ ಹರಡುತ್ತಿದೆ. ಈ ಬಗ್ಗೆ ಕೂಡಲೇ ತನಿಖೆಗೆ ಆದೇಶಿಸಬೇಕು. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಅವಕಾಶ ನೀಡಬೇಕು ಎಂದು ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಕೇಳಿಕೊಂಡಿದ್ದಾರೆ.
ಸಿದ್ದಾರ್ಥ ಬರೆದಿರುವ ಪತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಐಟಿ ಇಲಾಖೆಯ ಕಾರ್ಯನಿರ್ವಹಣೆ ಈ ಸಂಶಯವನ್ನು ಇನ್ನಷ್ಟು ಪುಷ್ಠೀಕರಿಸುತ್ತದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಲೇಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಟ್ವೀಟ್ ಮಾಡಿ, "ವಿಜಿ ಸಿದ್ದಾರ್ಥ ಅವರ ಸಾವಿನ ಹಿಂದೆ ಐಟಿ ಇಲಾಖೆ ಕಿರುಕುಳ ಇರಬಹುದು ಎಂಬ ಅನುಮಾನಕ್ಕೆ ಉತ್ತರ ಸಿಗಬೇಕಿದೆ, ನವೋದ್ಯಮದಾರರಿಗೆ ಇದರಿಂದ ಯಾವ ಸಂದೇಶ ಹೊರ ಬರಲಿದೆ?" ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ರಾಜ್ಯಸಭೆಯಲ್ಲೂ ವಿ.ಜಿ ಸಿದ್ದಾರ್ಥ ಸಾವಿನ ಬಗ್ಗೆ ಕಾಂಗ್ರೆಸ್ ನಾಯಕರು ದನಿ ಎತ್ತಿದ್ದಾರೆ. ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಮಾತನಾಡಿ, 'ತೆರಿಗೆ ಭಯೋತ್ಪಾದನೆಗೆ ಸಿದ್ದಾರ್ಥ ಬಲಿಯಾಗಿದ್ದಾರೆ, ದೇಶದಲ್ಲಿ ಉದ್ಯಮಿಗಳನ್ನು ತೆರಿಗೆ ಇಲಾಖೆ ಯಾವ ರೀತಿ ಹಿಂಸೆ ಮಾಡುತ್ತಿದೆ ಎಂಬುದಕ್ಕೆ ಸಿದ್ದಾರ್ಥ ಸಾವು ನಿದರ್ಶನ' ಎಂದಿದ್ದಾರೆ.

ಕಾಫಿ ಡೇ ಮಾಲೀಕ ಸಿದ್ದಾರ್ಥ ಸಾವಿನ ಸೂತಕದಲ್ಲಿ ಚಿಕ್ಕಮಗಳೂರಿನ ಕಾಫಿ ಡೇ ಸಂಸ್ಥೆ ತುಂಬಿದೆ. ಪ್ರತಿಷ್ಠಿತ ಎಬಿಸಿ ಕಂಪನಿ ಸೇರಿದಂತೆ ಸೇರಾಯ್ ರೆಸಾರ್ಟ್, ಅಂಬರ್ ವ್ಯಾಲಿ ಶಾಲೆ, ವಿ.ಟಿ.ಸಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಎಸ್ಟೇಟ್ ಕೆಲಸಕ್ಕೆ ಅಗಮಿಸಿದ ಸಾವಿರಾರು ಕಾರ್ಮಿಕರನ್ನು ವಾಪಸ್ ಕಳುಹಿಸಲಾಗಿದೆ. ಹಲವೆಡೆ ಶೋಕಾಚರಣೆಯಿಂದ ಅಘೋಷಿತ ಬಂದ್ ಆಚರಿಸಲಾಗುತ್ತಿದೆ.












Click it and Unblock the Notifications