ಮೋದಿ ಸರ್ಕಾರ ಕಿತ್ತೆಸೆಯಲು ಗಾಂಧೀಜಿ ಬಳಿ ದೀದಿ ಪ್ರಾರ್ಥನೆ!
ನವದೆಹಲಿ, ಫೆಬ್ರವರಿ 13: "ಇಂದು ಸಂಸತ್ ಅಧಿವೇಶನದ ಕೊನೇ ದಿನ. ಆದ್ದರಿಂದ ನಾವು ಮೋದಿ ಮತ್ತು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಮಹಾತ್ಮಾ ಗಾಂಧಿ ಅವರಲ್ಲಿ ಪ್ರಾರ್ಥಿಸಿದ್ದೇವೆ" ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
ಸಂಯುಕ್ತ ಭಾರತ ವಿಪಕ್ಷದ ಹೆಸರಿನ ಮೈತ್ರಿಕೂಟವೊಂದನ್ನು ನಿರ್ಮಿಸುವ ಮೂಲಕ ಮಹಾಘಟಬಂಧನದ ಶಕ್ತಿ ಪ್ರದರ್ಶನ ಮಾಡಲು ದೆಹಲಿಗೆ ತೆರಳಿರುವ ಮಮತಾ ಬ್ಯಾನರ್ಜಿ ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಂಸತ್ತಿನ ಗಾಂಧಿ ಪ್ರತಿಮೆಯ ಎದುರು ಪ್ರಾರ್ಥನೆ ಸಲ್ಲಿಸಿದ ನಂತರ ಅವರು ಮಾತನಾಡುತ್ತಿದ್ದರು. ವಿಪಕ್ಷಗಳನ್ನೆಲ್ಲ ಸೇರಿಸಿ ಮಹಾಘಟಬಂಧನದ ಶಕ್ತಿ ಪ್ರದರ್ಶಿಸುವ ಸಲುವಾಗಿ ದೀದಿ ದೆಹಲಿಯಲ್ಲಿ ಸಮಾವೇಶ ನಡೆಸುತ್ತಿದ್ದಾರೆ.

"ನರೇಂದ್ರ ಮೋದಿ ಅವರಿಗೆ ಗೊತ್ತು ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು. ಅವರ ಎಕ್ಸ್ ಪೈಯರಿ ಡೇಟ್ ಮುಗಿದಿದೆ. ಇನ್ನು 15 ದಿನಗಳಲ್ಲಿ ನಮಗೆ ಚುನಾವಣೆಯ ದಿನಾಂಕಗಳು ತಿಳಿಯುತ್ತವೆ. ನಾವು ಹೊಸ ಸರ್ಕಾರವನ್ನು ನೋಡಲು ಬಯಸುತ್ತೇವೆ. ದೇಶಕ್ಕೆ ಬದಲಾವಣೆ ಬೇಕು. ದೇಶ ಸಂಯುಕ್ತ ಭಾರತವನ್ನು ನೋಡಲು ಬಯಸುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಮಗ್ರತೆ ಜೀವಂತವಾಗಿರಬೇಕು ಎಂದು ಬಯಸುತ್ತದೆ" ಎಂದು ದೆಹಲಿಗೆ ತೆರಳುವ ಮುನ್ನ ಕೋಲ್ಕತ್ತದಲ್ಲಿ ದೀದಿ ಮಮತಾ ಹೇಳಿದರು.












Click it and Unblock the Notifications