ಪ್ರಧಾನಿ ಅಭ್ಯರ್ಥಿ ಮೋದಿಗೆ ಎದುರಾಳಿಗಳು ಸಿಕ್ಕಿದರು
ನವದೆಹಲಿ, ಮಾರ್ಚ್ 26- ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಎದುರಾಳಿ ಸ್ಪರ್ಧಿಗಳು ಯಾರು ಎಂಬುದಕ್ಕೆ ಉತ್ತರ ಸಿಕ್ಕಿದೆ. ಅಂದಹಾಗೆ, ಮೋದಿ ಅವರು 2 ಕ್ಷೇತ್ರಗಳಿಂದ ಅಂದರೆ ಗುಜರಾತಿನ ವಡೋದರಾ ಮತ್ತು ಉತ್ತರ ಪ್ರದೇಶದ ವಾರಣಾಸಿಯಿಂದ ಕಣಕ್ಕಿಳಿಯುತ್ತಿದ್ದಾರೆ.
ಗುಜರಾತಿನ ವಡೋದರಾದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಈ ಹಿಂದೆ ಕರ್ನಾಟಕ ಕಾಂಗ್ರೆಸ್ಸಿನ ಉಸ್ತುವಾರಿ ಹೊತ್ತಿದ್ದ ಮಧುಸೂದನ ಮಿಸ್ತ್ರಿ ಅವರು ನರೇಂದ್ರ ಮೋದಿಗೆ ಎದುರಾಳಿ. ಹಾಗೆಯೇ, ಉತ್ತರ ಪ್ರದೇಶದ ವಾರಣಾಸಿಯಿಂದ ಖುದ್ದು ತಾವೇ ಕಣಕ್ಕಿಳಿಯುವುದಾಗಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಘೋಷಿಸಿದ್ದಾರೆ.
ಗಮನಾರ್ಹವೆಂದರೆ ಮಧುಸೂದನ ಮಿಸ್ತ್ರಿ ಹೆಸರನ್ನು ಅವರ ಪಕ್ಷ ಅಂತಿಮಗೊಳಿಸಿದೆ. ಆದರೆ ಅರವಿಂದ್ ಕೇಜ್ರಿವಾಲ್ ಅವರು ಸ್ವತಃ ನಿನ್ನೆ ವಾರಣಾಸಿಯಲ್ಲಿ ತಾವು ಕಣಕ್ಕಿಳಿಯುವುದನ್ನು ಪ್ರಕಟಿಸಿದ್ದಾರೆ. ಆದರೆ ಅಧಿಕೃತವಾಗಿ ಪಕ್ಷದ ವತಿಯಿಂದ ಇನ್ನೂ ಉಮೇದುವಾರಿಕೆ ಪ್ರಕಟವಾಗಿಲ್ಲ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಈ ಮಧ್ಯೆ, ವಡೋದರಾದಲ್ಲಿ ಮಧುಸೂದನ ಮಿಸ್ತ್ರಿ ಅವರೊಬ್ಬರೇ ಮೋದಿ ವಿರುದ್ಧ ಸ್ಪರ್ಧಿಸುತ್ತಾರೋ ಅಥವಾ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯೂ ಕಣಕ್ಕಿಳಿಯುತ್ತಾರೋ ಎಂಬುದು ತಿಳಿದುಬಂದಿಲ್ಲ. ಅದೇ ರೀತಿ, ವಾರಣಾಸಿಯಲ್ಲೂ ಸಹ. ಅರವಿಂದ್ ಕೇಜ್ರಿವಾಲ್ ಜತೆಗೆ ಕಾಂಗ್ರೆಸ್ ಪಕ್ಷವೂ ತನ್ನ ಅಭ್ಯರ್ಥಿಯನ್ನು (ದಿಗ್ವಿಜಯ್ ಸಿಂಗ್?) ಕಣಕ್ಕಿಳಿಸುತ್ತದಾ ಅಥವಾ ಎಎಪಿ ಅಭ್ಯರ್ಥಿಯನ್ನೇ ಬೆಂಬಲಿಸುತ್ತದಾ? ಎಂಬುದು ಕುತೂಹಲಕಾರಿಯಾಗಿದೆ.
ಇನ್ನು ದಿಲ್ಲಿ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಯುವಾಗ ತಮ್ಮ ಪಕ್ಷದ ಯಾವುದೇ ಶಾಸಕರೂ ಮುಂದಿನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದರು.
1991ರಿಂದ ವಡೋದರಾ ಕ್ಷೇತ್ರವು ಬಿಜೆಪಿಯ ಭದ್ರನೆಲೆಯಾಗಿದೆ. 1996-98 ಅವಧಿಯಲ್ಲಿ ಮಾತ್ರ ಕಾಂಗ್ರೆಸ್ಸಿನ ಸತ್ಯಜಿತ್ ಸಿನ್ಹಾ ಗಾಯಕ್ವಾಡ್ ಅವರು ಜಯ ಸಾಧಿಸಿದ್ದರು. ಆದರೆ 2 ವರ್ಷದ ನಂತರ ಬಿಜೆಪಿಯ ಜಯಬೇನ್ ಠಕ್ಕರ್ ಅವರು ಗಾಯಕ್ವಾಡ್ ಅವರನ್ನು ಮಣಿಸಿದ್ದರು.
ಪ್ರಸ್ತುತ, ಹಿರಿಯ ದಲಿತ ನಾಯಕ ಮಧುಸೂದನ ಮಿಸ್ತ್ರಿ ಅವರು ಉತ್ತರ ಗುಜರಾತಿನ ಬುಡಕಟ್ಟು ಪ್ರದೇಶಗಳಲ್ಲಿ ಒಂದಷ್ಟು ನೆಲೆ ಹೊಂದಿದ್ದಾರೆ. ಆದರೆ ವಡೋದರಾದಂತಹ ನಗರ ಭಾಗದಲ್ಲಿ ಜಯ ಸಾಧಿಸುತ್ತಾರಾ? ಎಂಬುದು ಕುತೂಹಲಕಾರಿಯಾಗಿದೆ. 2009ರಲ್ಲಿ ಇದೇ ಮಧುಸೂದನ ಮಿಸ್ತ್ರಿ ಅವರು ಸಬರಕಾಂತಾ ಕ್ಷೇತ್ರದಲ್ಲಿ ಸೋಲನ್ನೊಪ್ಪಿದ್ದರು.
ಈ ಮಧ್ಯೆ, ಕಾಂಗ್ರೆಸ್ ಪಕ್ಷವು ಕಳಂಕಿತ ಅಶೋಕ್ ಚವಾಣ್ ಅವರನ್ನು ಕಣಕ್ಕಿಳಿಸಿರುವುದು ಹಲವರ ಹುಬ್ಬೇರಿಸಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ನಾಂದೇಡ್ ನಿಂದ ಸ್ಪರ್ಧಿಸುತ್ತಿದ್ದಾರೆ.