ರಾಜ್ಯಪಾಲರ ವಿಶ್ವಾಸ ಮತ ಸೂಚನೆಗೆ ತಡೆ ನೀಡುವಂತೆ ಸುಪ್ರೀಂಗೆ ಅರ್ಜಿ
ಬೆಂಗಳೂರು, ಜುಲೈ 19: ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಗೆ ಇಂದು ಮಧ್ಯಾಹ್ನ 1.30ರೊಳಗೆ ವಿಶ್ವಾಸ ಮತ ಯಾಚಿಸಬೇಕು ಎಂದು ರಾಜ್ಯಪಾಲರು ನೀಡಿರುವ ಸೂಚನೆ ವಿರುದ್ಧವಾಗಿ ವಕೀಲ ರಾಜೀವ್ ಧವನ್ ಸುಪ್ರೀಂ ಮೆಟ್ಟಿಲೇರಲಿದ್ದಾರೆ.
ವಿಶ್ವಾಸ ಮತ ಯಾಚನೆಗೆ ಅನುವು ಮಾಡಿಕೊಡದ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಬಿಜೆಪಿ ನಾಯಕರು ಧರಣಿ ಕುಳಿತಿದ್ದಲ್ಲದೆ ರಾಜ್ಯಪಾಲರ ಮೊರೆ ಹೋಗಿದ್ದರು.
ಆದರೆ ಪ್ರತಿಪಕ್ಷಗಳ ಯಾವ ರೀತಿಯ ವ್ಯಾಯಾಮಗಳು ಸ್ಪೀಕರ್ ಮೇಲೆ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ. ಏತನ್ಮಧ್ಯೆ ಮಧ್ಯಾಹ್ನ 1.30ರ ಒಳಗೆ ವಿಶ್ವಾಸಮತ ಯಾಚಿಸುವಂತೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಗೆ ರಾಜ್ಯಪಾಲ ವಜುಭಾಯಿ ವಾಲಾ ಸೂಚಿಸಿದ್ದಾರೆ ಇದರ ವಿರುದ್ಧ ಮುಖ್ಯಮಂತ್ರಿ ಪರ ವಕೀಲ ರಾಜೀವ್ ಧವನ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗುರುವಾರವೇ ವಿಶ್ವಾಸ ಮತ ಯಾಚಿಸುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಸುಪ್ರೀಂ ಕೋರ್ಟ್ ಅತೃಪ್ತ ಶಾಸಕರ ಪ್ರಕರಣದಲ್ಲಿ ನೀಡಿದ ತೀರ್ಪಿನಿಂದಾಗಿ ಶಾಸಕಾಂಗ ಪಕ್ಷದ ನಾಯಕರ ವಿಪ್ ಜಾರಿಗೊಳಿಸುವ ಹಕ್ಕನ್ನು ಕಸಿದುಕೊಂಡಂತಾಗಿದೆ.
ಈ ಬಗ್ಗೆ ಸ್ಪಷ್ಟೀಕರಣ ಸಿಗುವವರೆಗೂ ವಿಶ್ವಾಸ ಮತ ಯಾಚಿಸುವುದಿಲ್ಲ ಎಂದು ಮೈತ್ರಿ ಸರ್ಕಾರದ ನಾಯಕರು ಬೆಳಗ್ಗಿನಿಂದ ಸಂಜೆಯವರೆಗೂ ಸದನದಲ್ಲಿ ಸಮಯ ತಳ್ಳುತ್ತ ಬಂದರು.
ನಂತರ ಸಂಜೆಯಾಗುತ್ತಲೇ, ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಬಿಜೆಪಿ ಅಪಹರಿಸಿ, ಮುಂಬೈಯ ಆಸ್ಪತ್ರೆಯಲ್ಲಿರಿಸಿದೆ ಎಂದು ದೂರಿ, ಗದ್ದಲ ಎಬ್ಬಿಸಿ, ಸದನ ನಾಳೆಗೆ ಮುಂದೂಡುವಂಥ ಸನ್ನಿವೇಶ ಸೃಷ್ಟಿಸಿದರು.
ಇದೀಗ ಮತ್ತೆ ಕಲಾಪ ಆರಂಭವಾಗುತ್ತಿದ್ದು ಇನ್ನೇನು ಡ್ರಾಮಾ ನಡೆಯಲಿದೆ ಎಂದು ಕಾದು ನೋಡಬೇಕಿದೆ. ರಾಜೀವ್ ಧವನ್ ಈಗಾಗಲೇ ಸುಪ್ರೀಂಕೋರ್ಟ್ಗೆ ಆಗಮಿಸಿದ್ದಾರೆ. ಬೇರೆ ರೀತಿಯ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ರಾಜ್ಯಪಾಲರ ನಿರ್ದೇಶನ ಒಪ್ಪಿದರೂ ಕೂಡ ಅವರು ನೀಡಿರುವ ಸಮಯದಲ್ಲೇ ಒಪ್ಪಬೇಕಾ ಎನ್ನುವುದು ಪ್ರಶ್ನೆಯಾಗಿದೆ.

ವಕೀಲ ದೇವದತ್ ಕೂಡ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. ಬೆಳಗ್ಗೆ 10.30ಕ್ಕೆ ಸಿಎಂ ಅರ್ಜಿ ವಿಚಾರಣೆ ನಡೆಯಲಿದೆ.












Click it and Unblock the Notifications