ಪ್ರದ್ಯಮ್ನ ಕೊಲೆ ಆರೋಪಿಯ ರಕ್ಷಣೆಗೆ ನಿಂತ 'ತಲ್ವಾರ್' ವಕೀಲ!
ನವದೆಹಲಿ, ನವೆಂಬರ್ 25: ರಾಯನ್ ಇಂಟರ್ನಾಶನಲ್ ಶಾಲೆಯಲ್ಲಿ ನಡೆದ ಪ್ರದ್ಯುಮ್ನ ಠಾಕೂರ್ ಹತ್ಯೆಗೆ ಸಂಬಂಧಿಸಿದಂತೆ, ಆರೋಪಿ 11ನೇ ತರಗತಿ ವಿದ್ಯಾರ್ಥಿಯ ಪರ ಆರುಷಿ ಪ್ರಕರಣದಲ್ಲಿ ಆಕೆಯ ತಂದೆ-ತಾಯಿ ಪರವಾಗಿ ವಾದ ಮಾಡಿದ್ದ ವಕೀಲರೇ ವಾದ ಮಂಡಿಸಲಿದ್ದಾರೆ!
ತನ್ವೀರ್ ಅಹ್ಮದ್ ಮಿರ್ ಎಂಬ ವಕೀಲರು ಹನ್ನೊಂದನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯ ಪರವಾಗಿ ತಾನು ವಾದ ಮಂಡಿಸುವುದಾಗಿ ಖಚಿತಪಡಿಸಿದ್ದಾರೆ.
ಸೆಪ್ಟೆಂಬರ್ 8ರಂದು ಗುರ್ಗಾಂವ್ ರಾಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಪ್ರದ್ಯುಮ್ನ ಠಾಕೂರ್ ನನ್ನು ಆತನ ಶಾಲೆಯ ಶೌಚಾಲಯದಲ್ಲಿ ಕತ್ತು ಸೀಳಿ ಸಾಯಿಸಲಾಗಿತ್ತು. ಮೇಲ್ನೋಟಕ್ಕೆ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾಗಿತ್ತು. ಆದರೆ ವೈದ್ಯಕೀಯ ಪರೀಕ್ಷೆಯ ನಂತರ ಬಾಲಕನ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂಬುದು ಸಾಬೀತಾಗಿತ್ತು.

ಘಟನೆಯ ನಂತರ ಶಾಲಾ ಬಸ್ ಕಂಡಕ್ಟರ್ ಅಶೋಕ್ ನನ್ನೇ ಪೊಲೀಸರು ತಪ್ಪಿತಸ್ಥ ಎಂದು ಅನುಮಾನಿಸಿದ್ದರು. ಆದರೆ ಯಾಕೋ ಘಟನೆಯಲ್ಲಿ ಏನೋ ನಿಗೂಢತೆ ಇದೆ ಎಂಬ ಅನುಮಾನ ಕಾಡುತ್ತಿದ್ದಂತೆಯೇ ಪ್ರದ್ಯುಮ್ನನ ತಂದೆ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದ ನಂತರ ಪ್ರಕರಣ ಬೇರೆಯದೇ ರೂಪ ಪಡೆದಿತ್ತು.
ತನಿಖೆ ನಡೆಸಿದ ಸಿಬಿಐ, ಈ ಪ್ರಕರಣದಲ್ಲಿ ಕಂಡಕ್ಟರ್ ನ ಕೈವಾಡವೇನೂ ಇಲ್ಲ. ಬದಲಾಗಿ ಅದೇ ಶಾಲೆಯಲ್ಲಿ ಓದುತ್ತಿದ್ದ ಹನ್ನೊಂದನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಪ್ರದ್ಯಮ್ನನ ಕೊಲೆ ಮಾಡಿದ್ದಾನೆಂಬ ಅನುಮಾನ ವ್ಯಕ್ತಪಡಿಸಿತ್ತು.












Click it and Unblock the Notifications