ಹಜಾರೆಗೆ ಮೋಸ ಮಾಡಿದ ಕೇಜ್ರಿವಾಲ್ ನಂಬ್ತಿರಾ?
ನವದೆಹಲಿ, ಅ.16 : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ಕಾವು ನಿಧಾನವಾಗಿ ಏರತೊಡಗಿದೆ. ದೆಹಲಿಯ ನಿವಾಸಿಗಳಿಗೆ ಬುಧವಾರದಿಂದ ಫೊನ್ ಕರೆಯೊಂದು ಬರುತ್ತಿದ್ದು, ಅದರಲ್ಲಿ ಅಣ್ಣಾ ಹಜಾರೆಗೆ ಮೋಸ ಮಾಡಿದ ಕೇಜ್ರಿವಾಲ್ ನಂಬುತ್ತೀರಾ? ಎಂಬ ಸಂದೇಶ ಬರುತ್ತಿದೆ.
ಹೌದು, ಬುಧವಾರದಿಂದ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಅರವಿಂಗ್ ಕೇಜ್ರಿವಾಲ್ ಅವರ ವಿರುದ್ಧ ದೆಹಲಿಯಲ್ಲಿ ಪ್ರಚಾರ ಕಾರ್ಯ ಆರಂಭವಾಗಿದೆ. ಆದರೆ, ಈ ಪ್ರಚಾರವನ್ನು ಮಾಡುತ್ತಿರುವುದು ಯಾರು? ಎಂಬ ಬಗ್ಗೆ ತಿಳಿದುಬಂದಿಲ್ಲ.

ಬುಧವಾರದಿಂದ ದೆಹಲಿಯಲ್ಲಿ ಇಂತಹ ಪ್ರಚಾರ ಕಾರ್ಯ ಆರಂಭವಾಗಿದೆ. ಹಲವು ಜನರ ಫೋನ್ ಗೆ ಇಂತಹ ಕರೆ ಅನಾಮಿಕ ಸಂಖ್ಯೆಯಿಂದ ಬಂದಿದೆ. ಅದರಲ್ಲಿ "ಅಣ್ಣಾ ಹಜಾರೆಗೆ ಮೋಸ ಮಾಡಿದ ಅರವಿಂದ್ ಕೇಜ್ರಿವಾಲ್ ಅವರನ್ನು ನೀವು ನಂಬುತ್ತೀರಾ?"
"ಅಣ್ಣಾ ಹಜಾರೆಗೆ ಮೋಸ ಮಾಡಿದ ವ್ಯಕ್ತಿ, ಯಾರಿಗೆ ಬೇಕಾದರೂ ಮೋಸ ಮಾಡುತ್ತಾರೆ. ಅಂತಹವರನ್ನು ನಂಬಿ ಚುನಾವಣೆಯಲ್ಲಿ ಬೆಂಬಲ ನೀಡಬೇಡಿ". ಎಂದು ಫೋನ್ ಕರೆಯ ಮೂಲಕ ಮನವಿ ಮಾಡಲಾಗುತ್ತಿದೆ. ಈ ಮಾತುಗಳನ್ನು ಪ್ರೀರೆಕಾರ್ಡ್ ಮಾಡಿ ಬಿಡುಗಡೆ ಮಾಡಲಾಗಿದೆ.
ಆದರೆ, ಕರೆಯ ಮೂಲದ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ನವದೆಹಲಿಯ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಈ ಕುರಿತು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಸದ್ಯ ದೆಹಲಿಯಲ್ಲಿ ಈ ಕರೆ ಭಾರೀ ಕುತೂಹಲ ಹುಟ್ಟುಹಾಕಿದೆ.
ಕಳೆದ ವಾರ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷವನ್ನು ಟೀಕಿಸಿ ಮಾತನಾಡಿದ ಪ್ರೀರೆಕಾರ್ಡೆಡ್ ಟೆಲಿಫೋನಿಕ್ ಸಂದೇಶ ಮತ್ತು ರೇಡಿಯೋ ಪ್ರಸಾರ ಮಾಡಿದ ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ್ ಕೇಜ್ರಿವಾಲ್ ಬಿಡುಗಡೆ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡುವ ಸಲುವಾಗಿ ಇಂತಹ ಕರೆಯನ್ನು ಜನರಿಗೆ ಮಾಡಲಾಗುತ್ತಿದೆ ಎಂದು ಶಂಕಿಸಲಾಗಿದೆ. ಈ ಕರೆಯ ಮೂಲ ಕಾಂಗ್ರೆಸ್ ಅಥವ ಬಿಜೆಪಿಯಾಗಿರುತ್ತದೆ. ಪಕ್ಷ ಇಂತಹ ಪ್ರಚಾರಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ ಹೇಳಿಕೆ ನೀಡಿದೆ.
ನವದೆಹಲಿಯ 70 ವಿಧಾನಸಭೆ ಕ್ಷೇತ್ರಗಳಿಗೆ ಡಿ.4ರಂದು ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರಬಲ ಪೈಪೋಟಿ ನೀಡುತ್ತದೆ ಎಂದು ಸಮೀಕ್ಷೆಗಳು ಬಹಿರಂಗಪಡಿಸಿವೆ. ಆದ್ದರಿಂದ ಪ್ರತಿಪಕ್ಷಗಳು ಇಂತಹ ಪ್ರಚಾರ ಕಾರ್ಯ ಕೈಗೊಂಡಿರಬಹುದು.












Click it and Unblock the Notifications