ಕತ್ರೀನಾ ಕೈಫ್ ರಾಷ್ಟ್ರಪತಿ ಆಗಲಿ ಅಂತಾರೆ ಕಾಟ್ಜು!
ನವದೆಹಲಿ, ಜ. 14: ಭಾರತೀಯ ಪ್ರೆಸ್ ಕೌನ್ಸಿಲ್ ಮಾಜಿ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಮತ್ತೆ ಸುದ್ದಿಯಾಗಿದ್ದಾರೆ. ಹಲವು ಬಾರಿ ರೋಚಕ ಹೇಳಿಕೆಗಳನ್ನು ನೀಡಿರುವ ಕಾಟ್ಜು ಈ ಬಾರಿಯೂ ಅಂತದ್ದೇ ಮಾತು ಹೇಳಿದ್ದಾರೆ. ಆದರೆ, ಪರೋಕ್ಷವಾಗಿ ಕೆಲಸ ಮಾಡದ ರಾಜಕಾರಣಿಗಳಿಗೆ ಚಾಟಿ ಏಟನ್ನೂ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರ ಈ ಬಾರಿಯ ಸಲಹೆ ಏನೆಂದರೆ "ಬಾಲಿವುಡ್ ನಟಿ ಕತ್ರೀನಾ ಕೈಫ್ ಭಾರತದ ರಾಷ್ಟ್ರಪತಿ ಆಗಲಿ" ಎಂಬುದು! ಹೀಗೆಂದು ತಮ್ಮ ಬ್ಲಾಗ್ 'ಸತ್ಯಂ ಬ್ರುಯಾತ್'ನಲ್ಲಿ ಬರೆದುಕೊಂಡಿದ್ದಾರೆ.
ಸುಳ್ಳು ಭರವಸೆಗಳನ್ನು ನೀಡುವ ರಾಜಕಾರಣಿಗಳ ಧೋರಣೆ ಕುರಿತು 'ರಾಷ್ಟ್ರಪತಿ ಸ್ಥಾನಕ್ಕೆ ಕತ್ರೀನಾ ಕೈಫ್' ಎಂಬ ಶೀರ್ಷಿಕೆಯೊಂದಿಗೆ ಮಾರ್ಕಂಡೇಯ ಕಾಟ್ಜು ಹೀಗೆ ಟೀಕಿಸಿದ್ದಾರೆ.
"ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಚಂದ್ರನನ್ನೇ ತೋರಿಸುತ್ತಾರೆ. ನಂತರ ಜನರ ಉದ್ಧಾರಕ್ಕಾಗಿ ಏನೂ ಮಾಡುವುದಿಲ್ಲ. ಆದರೂ ಯಾರನ್ನಾದರೂ ಆರಿಸಲೇಬೇಕು. ಹಾಗಿದ್ದರೆ ಸುಂದರ ಮುಖದವರನ್ನೇ ಏಕೆ ಆಯ್ಕೆ ಮಾಡಬಾರದು? ಹೀಗೆ ಮಾಡಿದರೆ ಕನಿಷ್ಠ ಮಾಧ್ಯಮಗಳಲ್ಲಿ ಅವರ ಮುಖ ನೋಡುವ ಸಂದರ್ಭದಲ್ಲಾದರೂ ಆನಂದಿಸಬಹುದು. ಇಲ್ಲದಿದ್ದರೆ ಖುಷಿ ಎಂಬುದು ಯಾವತ್ತೂ ಸಿಗಲ್ಲ". [ಕತ್ರೀನಾ ಕೈಫ್ ರಾಷ್ಟ್ರಪತಿ ಆಗಬೇಕಾ?, ಮತ ಹಾಕಿ]
ಶೀಲಾ ಕಿ ಜವಾನಿ ಹಾಡಲಿ : ಅಲ್ಲದೆ, "ಕತ್ರೀನಾ ಕೈಫ್ ಅವರನ್ನು ರಾಷ್ಟ್ರಪತಿ ಮಾಡುವಾಗ ಪ್ರಮಾಣವಚನ ಸಮಾರಂಭದಲ್ಲಿ ಕತ್ರೀನಾ 'ಶೀಲಾ ಕಿ ಜವಾನಿ' ಹಾಡು ಹಾಡಬೇಕೆಂಬ ಷರತ್ತು ಹಾಕಬೇಕು" ಎಂದು ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
ಶೀಲಾ ಕಿ ಜವಾನಿ ವಿಡಿಯೋ ನೋಡಿ
ತಮ್ಮ ವಾದದ ಸಮರ್ಥನೆಗೆ ಕ್ರೋಶಿಯಾ ದೇಶದ ಉದಾಹರಣೆ ನೀಡಿದ್ದಾರೆ. "ಆರ್ಥಿಕ ಸಂಕಷ್ಟದಲ್ಲಿರುವ ಕ್ರೋಶಿಯಾ ದೇಶ ಓರ್ವ ಸುಂದರ ಮಹಿಳೆಯನ್ನು ತನ್ನ ರಾಷ್ಟ್ರಪತಿಯಾಗಿ ಚುನಾಯಿಸಿಕೊಂಡಿದೆ. ಸಿನಿಮಾ ನಟಿಯರಂತಹ ಸುಂದರ ಮಹಿಳೆಯರನ್ನು ಚುನಾಯಿಸಲು ನಾನು ಯಾವಾಗಲೂ ಬೆಂಬಲ ನೀಡುತ್ತೇನೆ" ಎಂದು ಹೇಳಿಕೊಂಡಿದ್ದಾರೆ.
ಮಾರ್ಕಂಡೇಯ ಕಾಟ್ಜು ಅವರು ರಾಜಕಾರಣಿಗಳನ್ನು ಟೀಕಿಸುವ ಭರದಲ್ಲಿ ತಮ್ಮ ಹೆಸರು ಹೇಳಿರುವುದಕ್ಕೆ ಕತ್ರೀನಾ ಕೈಫ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.