ಕೊಡಗು ಪ್ರವಾಹ: ಸುಂಟಿಕೊಪ್ಪಕ್ಕೆ ಉಘೇ ಎಂದ ರಾಹುಲ್ ಗಾಂಧಿ
Recommended Video

ನವದೆಹಲಿ, ಆಗಸ್ಟ್ 21: ಕೊಡಗು ಜಿಲ್ಲೆಯ ಸುಂಟಿಕೊಪ್ಪದ ರಾಮಮಂದಿರ, ಚರ್ಚ್, ಮದರಸಾಗಳೀಗ ಸಂತ್ರಸ್ತ ಶಿಬಿರಗಳು... 'ನೀನು ಯಾವ ಮತದವನು, ಯಾವ ಜಾತಿಯವನು, ಮೇಲೋ, ಕೀಳೋ' ಎಂಬ ಯಾವ ಪ್ರಶ್ನೆಯಿಲ್ಲದೆ ಯಾರೋ ಮಾಡಿದ ಅಡುಗೆಯನ್ನೂ ಎಲ್ಲರೂ ಒಟ್ಟಾಗಿ ಕೂತು ತಿನ್ನುತ್ತಿದ್ದಾರೆ!
ಸುಂಟಿಕೊಪ್ಪದ ಈ ಸೌಹಾರ್ದ ಬದುಕಿನ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ, ಹಾಡಿ ಹೊಗಳಿದ್ದಾರೆ.
ನೈಸರ್ಗಿಕ ವಿಕೋಪಗಳು ಮನುಷ್ಯನ ಅಹಂಕಾರವನ್ನು ಬುಡಮೇಲು ಮಾಡುತ್ತವಂತೆ. ಇದೀಗ ಕರ್ನಾಟಕ ಮತ್ತು ಕೇರಳದಲ್ಲಿ ಉಂಟಾಗಿರುವ ಪ್ರವಾಹ ಅಂಥ ಪರಿಸ್ಥಿತಿಯನ್ನು ತಂದಿಟ್ಟಿದೆ. ಸುಂಟಿಕೊಪ್ಪದ ಜನರು ಮಂದಿರ, ಮಸೀದಿ, ಚರ್ಚ್ ಗಳಲ್ಲಿ ಒಟ್ಟಾಗಿ ಆಶ್ರಯ ಪಡೆದಿದ್ದು, ಇದು ಕೋಮುಸೌಹಾರ್ದದ ಪ್ರತೀಕವಾಗಿ ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.
|
ರಾಹುಲ್ ಟ್ವೀಟ್ ನಲ್ಲೇನಿದೆ?
ದಿ ಕ್ವಿಂಟ್.ಕಾಂ ವೆಬ್ ಸೈಟ್ ಮಾಡಿದ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿರುವ ರಾಹುಲ್ ಗಾಂಧಿ, 'ಕರ್ನಾಟಕದ ಕೊಡಗಿನಲ್ಲಿ ಉಂಟಾದ ಭೀಕರ ಪ್ರವಾಹ ರಾಜ್ಯವನ್ನು ಕಂಗೆಡಿಸಿದೆ. ಆದರೆ ಈ ಸಂಕಷ್ಟದ ನಡುವಲ್ಲೇ ಒಂದು ಭರವಸೆಯ ಓಯಾಸಿಸ್ ಆಗಿ ಕೊಡಗಿನ ಸುಂಟಿಕೊಪ್ಪ ಎಂಬ ನಗರ ಕಾಣಿಸುತ್ತದೆ. ಇಲ್ಲಿ ಶಿವ, ರಾಮ, ಕ್ರಿಸ್ತ, ಅಲ್ಲಾಹ್ ಮತ್ತು ಬುದ್ಧ ಎಲ್ಲರೂ ಸಂತ್ರಸ್ತರಿಗೆ ಪರಿಹಾರ ನೀಡಲು, ಆಶ್ರಯ ನೀಡಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇದು ಭಾರತ!' ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.

ನಿರಾಶ್ರಿತರಿಗೆ ಆಸರೆಯಾದ ಧಾರ್ಮಿಕ ಕೇಂದ್ರಗಳು
'ನೀನು ಹಿಂದುವಾಗಿದ್ದರೆ ಮಾತ್ರ ದೇವಾಲಯಕ್ಕೆ ಬಾ, ನೀನು ಮುಸ್ಲಿಂ ಆಗಿದ್ದರೆ ಮಾತ್ರ ಮದರಸಾಕ್ಕೆ ಬಾ, ನೀನು ಕ್ರೈಸ್ತನಾಗಿದ್ದರೆ ಮಾತ್ರ ಚರ್ಚಿಗೆ ಬಾ ಎಂಬ ಯಾವ ತಕರಾರು, ಕರಾರು ಇಲ್ಲದೆ ನಿರಾಶ್ರಿತರಲ್ಲಿ ಕೇವಲ ಮನುಷ್ಯರನ್ನಷ್ಟೇ ಕಂಡು ಆಸರೆ ನೀಡುತ್ತಿದ್ದಾರೆ ಸುಂಟಿಕೊಪ್ಪದ ಜನ. ಸುಂಟಿಕೊಪ್ಪದ ಸುತ್ತಮುತ್ತಲಿನಿಂದ ಬಂದಿರುವ ನಿರಾಶ್ರಿತರನ್ನು ಮಂದಿರ, ಮಸೀದಿ, ಚರ್ಚ್ ಗಳಲ್ಲಿ ವಾಸದ ವ್ಯವಸ್ಥೆ ಮಾಡುತ್ತಿದ್ದಾರೆ.

ಎಲ್ಲರಿಗೂ ಒಂದೇ ಅಡುಗೆಮನೆ!
ನಿರಾಶ್ರಿತರೆಲ್ಲರಿಗೂ ಒಂದೇ ಅಡುಗೆ ಮನೆಯಲ್ಲಿ ಒಂದೇ ರೀತಿಯ ಆಹಾರ ನೀಡಲಾಗುತ್ತಿದೆ. ಈ ಅಡುಗೆ ಮನೆ ಇರುವುದು ಮದರಸಾದಲ್ಲಿ! ಅಡುಗೆ ಮಾಡುವವರು ಯಾರು, ಅವರ ಜಾತಿ ಏನು ಎಂಬಿತ್ಯಾದಿ ಯಾವ ಪ್ರಶ್ನೆಯೂ ಇಲ್ಲದೆ, ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುತ್ತಿದ್ದಾರೆ. ಮೊದಲಿಗೆ 600 ಜನರನ್ನು ರಕ್ಷಿಸಿ, ಇಲ್ಲಿ ಆಸರೆ ನೀಡಲಾಗಿತ್ತು. ಆದರೆ ಜನರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇರುವುದರಿಂದ ಈ ಪಟ್ಟಣದ ಮೂರು ದೊಡ್ಡ ಕಟ್ಟಡಗಳಾದ ಮಂದಿರ, ಚರ್ಚ್, ಮಸೀದಿಗಳನ್ನು ನಿರಾಶ್ರಿತರ ಕೇಂದ್ರವನ್ನಾಗಿ ಮಾರ್ಪಾಡು ಮಾಡಲಾಗಿದೆ.

ಹಗಲಿರುಳೆನ್ನದೆ ದುಡಿಯುತ್ತಿರುವ ರಕ್ಷಣಾ ಸಿಬ್ಬಂದಿ
ಹಗಲಿರುಳೆನ್ನದೆ ದುಡಿಯುತ್ತಿರುವ ರಕ್ಷಣಾ ಸಿಬ್ಬಂದಿ, ಸಾವಿರಾರು ಜನರನ್ನು ಪ್ರವಾಹದಿಂದ ಪಾರು ಮಾಡಿದ್ದಾರೆ. ಸುಂಟಿಕೊಪ್ಪದ ಜನರೇ ರಕ್ಷಣಾ ಸಿಬ್ಬಂದಿಗಳಂತೆ ಎಷ್ಟೋ ಜನರ ಜೀವ ರಕ್ಷಿಸಿದ್ದಾರೆ. ಕೊಡಗು ಪ್ರವಾಹದ ರೌದ್ರಾವತಾರದ ನಡುವಲ್ಲಿ ಮಾನವೀಯತೆಯ ಇರುವನ್ನು ತೋರುವ, ಬದುಕಿನ ಬಗ್ಗೆ ಸಂತ್ರಸ್ತರಲ್ಲೂ ಭರವಸೆ ಹುಟ್ಟಿಸುವ ಕೆಲಸವನ್ನು ಸುಂಟಿಕೊಪ್ಪದ ಜನರು ಮಾಡುತ್ತಿರುವುದು ಆದರ್ಶನೀಯ.












Click it and Unblock the Notifications